Gujarat, HP Election Results 2022: ರಾಜ್ಯ ರಾಜಕೀಯದಲ್ಲಿ ಏನಾಗಬಹುದು?
ಬೆಂಗಳೂರು, ಡಿಸೆಂಬರ್ 8: ಗುಜರಾತ್ ಹಾಗೂ ಹಿಮಾಚಲಪ್ರದೇಶದ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ..? ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ ಬಹುತೇಕ ಮಂದಿ ಅಲ್ಲಿನ ರಾಜಕೀಯಕ್ಕೂ ರಾಜ್ಯ ರಾಜಕೀಯಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.
ಉತ್ತರ ಭಾರತದ ರಾಜ್ಯಗಳ ರಾಜಕೀಯವೇ ವಿಭಿನ್ನ. ಅದರಲ್ಲೂ ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವುದು ಕಷ್ಟ ಸಾಧ್ಯವೇ. ಒಂದು ವೇಳೆ ಎಎಪಿ ಬಿಜೆಪಿಗೆ ಸ್ಪರ್ಧೆ ನೀಡಿದಷ್ಟೂ ಅದರ ಪರಿಣಾಮಗಳು ನೇರವಾಗಿ ಕಾಂಗ್ರೆಸ್ ಮೇಲೆಯೇ ಆಗುತ್ತದೆ ಎಂಬುದನ್ನು ತಳ್ಳಿ ಹಾಕಲಾಗದು.
Recommended Video
ಎಎಪಿ ಪರ ಗಾಳಿ ನಿಧಾನವಾಗಿ ದೆಹಲಿಯಿಂದ ಇತರೆ ರಾಜ್ಯಗಳತ್ತ ಬೀಸುತ್ತಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾದರೂ ಹೆಚ್ಚಿನ ಪರಿಣಾಮಗಳು ಕಾಂಗ್ರೆಸ್ ಮೇಲೆ ಬೀರುತ್ತಿರುವುದನ್ನು ಕಾಣಬಹುದಾಗಿದೆ. ಅದಕ್ಕೆ ನಿದರ್ಶನ ಎಂಬಂತೆ ಪಂಜಾಬ್ ಎಲ್ಲರ ಮುಂದಿದೆ.
ಉತ್ತರ ಭಾರತದ ರಾಜ್ಯಗಳು ಹಾಗೂ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕೇರಳದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ದುರ್ಬಲವಾಗಿಲ್ಲ. ಇಲ್ಲಿ ಅದು ಪ್ರಬಲವಾಗಿಯೇ ಉಳಿದಿದೆ. ಹೀಗಾಗಿ ಯಾವಾಗ ಬೇಕಾದರೂ ಬಿಜೆಪಿಯನ್ನು ಮಣಿಸಿ ಗೆಲುವಿನ ನಗೆ ಬೀರಬಹುದು. ಆದರೆ ಕಳೆದ ವಿಧಾನಸಭಾ ಚುನಾವಣೆ ಬಳಿಕ ಒಂದಷ್ಟು ಗೆಲ್ಲುವ ಅಭ್ಯರ್ಥಿಗಳು ಬಿಜೆಪಿ ಪಾಲಾಗಿದ್ದಾರೆ. ಜೊತೆಗೆ ಜೆಡಿಎಸ್ ಪ್ರಬಲವಾದಷ್ಟು ಅದರ ಪರಿಣಾಮಗಳು ಕಾಂಗ್ರೆಸ್ ಮೇಲೆ ಬೀರಲಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಆಡಳಿತ ಪಕ್ಷ ಬಿಜೆಪಿ ವಿರುದ್ಧದ ಒಂದು ಸಂಘಟಿತ ಹೋರಾಟಕ್ಕೆ ಅಡ್ಡಿಯಾಗಿದೆ ಎಂದರೆ ತಪ್ಪಾಗಲಾರದು.

224 ಸ್ಥಾನಗಳಿಗೆ 1200ಕ್ಕೂ ಹೆಚ್ಚು ಅರ್ಜಿ
ಈಗಾಗಲೇ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದರೆ. ಜೆಡಿಎಸ್ನ ಪಂಚರತ್ನ ರಥಯಾತ್ರೆ ಹುಮ್ಮಸ್ಸನ್ನು ಹುಟ್ಟು ಹಾಕಿದೆ. ಆದರೆ ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಕಾಂಗ್ರೆಸ್ ಮೌನಕ್ಕೆ ಶರಣಾದಂತೆ ಭಾಸವಾಗುತ್ತಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್ ಹೋರಾಟ ಬಲ ಕಳೆದುಕೊಂಡಂತೆ ಕಂಡು ಬರುತ್ತಿದೆ. ಸದ್ಯಕ್ಕೆ ಟಿಕೆಟ್ ಗೊಂದಲ ಪಕ್ಷಕ್ಕೆ ಮುಳುವಾಗಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. 224 ಸ್ಥಾನಗಳಿಗೆ ಸುಮಾರು 1200ಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಹಾಕಿದ್ದು, ಈ ಪೈಕಿ ಅರ್ಹರನ್ನು ಗುರುತಿಸಿ ಅವರಿಗೆ ಟಿಕೆಟ್ ನೀಡುವುದು ಪಕ್ಷದ ಹಿರಿಯರಿಗೆ ಸವಾಲ್ ಆಗಿ ಪರಿಣಮಿಸಿದೆ.

ಟಿಕೆಟ್ ಸಿಗದ ನಾಯಕರ ಮುಂದಿನ ನಡೆಯೇನು..?
ಮುಂದಿನ ದಿನಗಳಲ್ಲಿ ಅರ್ಹರನ್ನು ಎನ್ನುವುದಕ್ಕಿಂತ ಕಾಂಗ್ರೆಸ್ ಗೆಲ್ಲುವ ನಾಯಕರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಾಗಿದೆ. ಏಕೆಂದರೆ ಅಧಿಕಾರ ಹಿಡಿಯವುದು ಬಹುಮುಖ್ಯವಾಗಿರುವುದರಿಂದ ಮತ್ತು ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರುವುದರಿಂದ ಅಂತಹ ಕ್ಷೇತ್ರಗಳಲ್ಲಿ ಇರುವ ಆಕಾಂಕ್ಷಿಗಳ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ಗೆ ಸುಲಭವಾಗಿ ಉಳಿದಿಲ್ಲ. ಜೊತೆಗೆ ಜೆಡಿಎಸ್ ಪ್ರಬಲವಾದಷ್ಟು ಅದರ ಪರಿಣಾಮಗಳು ಕಾಂಗ್ರೆಸ್ ಮೇಲೆಯೇ ಬೀರಲಿದೆ. ಟಿಕೆಟ್ ಸಿಕ್ಕದ ನಾಯಕರು ಪಕ್ಷದಲ್ಲಿ ಉಳಿದು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆಯೂ ಇಲ್ಲದಾಗಿದೆ. ಅವರು ಅವಕಾಶ ನೀಡುವ ಪಕ್ಷದತ್ತ ನೆಗೆದರೂ ಅಚ್ಚರಿ ಪಡಬೇಕಾಗಿಲ್ಲ.

ಅಲ್ಪಸಂಖ್ಯಾತ ಮತಗಳತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಚಿತ್ತ
ಈ ನಡುವೆ ಎಎಪಿ ಚುನಾವಣೆಗೆ ಒಂದಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಅದು ಸೆಳೆಯುವ ಮತಗಳು ಕೂಡ ಕಾಂಗ್ರೆಸ್ ನದೇ ಆಗಿರುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇನ್ನು ಜೆಡಿಎಸ್ ತಂತ್ರಗಳು ಬಿಜೆಪಿಗೆ ಎಷ್ಟು ಹೊಡೆತ ನೀಡುತ್ತದೆಯೋ ಅದಕ್ಕಿಂತ ಹೆಚ್ಚು ಕಾಂಗ್ರೆಸ್ಗೆ ಹಾನಿಯಾಗುತ್ತದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ದೃಷ್ಟಿ ನೆಟ್ಟಿದೆ. ಈ ಮತಗಳನ್ನು ಸೆಳೆಯಲು ಎರಡು ಪಕ್ಷದ ನಾಯಕರು ತಂತ್ರಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಆ ಮತಗಳು ಕೊನೆಗಳಿಗೆಯಲ್ಲಿ ಹಂಚಿಹೋದರೆ ಅದರ ಲಾಭವನ್ನು ಬಿಜೆಪಿ ಪಡೆಯಲಿದೆ.

ಚುನಾವಣಾ ಫಲಿತಾಂಶ ಯಾರಿಗೆ ಲಾಭ..? ಯಾರಿಗೆ ನಷ್ಟ..?
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪಾಠವಾಗಬಹುದು. ಅದರಲ್ಲೂ ಬಿಜೆಪಿಗೆ ಗುಜರಾತ್ ತಂತ್ರವನ್ನು ಕರ್ನಾಟಕದಲ್ಲಿ ಪ್ರಯೋಗ ಮಾಡಬೇಕೋ ಬೇಡವೋ ಎಂಬ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅನುಕೂಲವಾಗಬಹುದು. ಎಎಪಿಗೆ ರಾಜ್ಯದಲ್ಲಿ ಸ್ಪರ್ಧೆ ಮಾಡಲು ಧೈರ್ಯ ನೀಡಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಗುಜರಾತ್ ಮತ್ತು ಹಿಮಾಚಲಪ್ರದೇಶದ ಫಲಿತಾಂಶ ಒಂದಲ್ಲ ಒಂದು ರೀತಿಯಲ್ಲಿ ಋಣಾತ್ಮಕ ಮತ್ತು ಸಕರಾತ್ಮಕವಾಗಿ ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ.












Click it and Unblock the Notifications