ಪ್ರತಿಪಕ್ಷ ನಾಯಕನಿಗೆ ಸರ್ಕಾರಿ ಬಂಗಲೆ ನೀಡದ ಕರ್ನಾಟಕ ಸರ್ಕಾರ!
ಬೆಂಗಳೂರು, ಜೂನ್ 11: ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕಗೆ ಬೆಂಗಳೂರು ನಗರದಲ್ಲಿ ಇನ್ನೂ ಸರ್ಕಾರಿ ಬಂಗಲೆ ನೀಡಿಲ್ಲ. ಈಗಾಗಲೇ ಈ ಬಗ್ಗೆ ಅವರು 4 ಪತ್ರಗಳನ್ನು ಬರೆದಿದ್ದು, ಅಧಿಕಾರಿಗಳು ಮಾತ್ರ ಬಂಗಲೆ ಹಂಚಿಕೆ ಮಾಡಿಲ್ಲ.
2023ರ ನವೆಂಬರ್ನಲ್ಲಿ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ ಆರ್. ಅಶೋಕ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದರು. ಆದರೆ ಆರು ತಿಂಗಳು ಕಳೆದರೂ ಸಹ ಶಿಷ್ಟಾಚಾರದ ಪ್ರಕಾರ ನೀಡಬೇಕಾದ ಸರ್ಕಾರಿ ಬಂಗಲೆ ನೀಡಿಲ್ಲ.

ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಸರ್ಕಾರಿ ಬಂಗಲೆ ನೀಡುವಂತೆ ಹಲವು ಸಂದರ್ಭದಲ್ಲಿ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ಇದುವರೆಗೂ ಬಂಗಲೆ ಹಂಚಿಕೆ ಮಾಡಿಲ್ಲ ಎಂದು ಆರ್. ಅಶೋಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರಿಗೆ ಆದ್ಯತೆಯ ಮೇರೆಗೆ ಸರ್ಕಾರ ಸರ್ಕಾರಿ ಬಂಗಲೆ ಹಂಚಿಕೆ ಮಾಡುತ್ತಿದೆ. ಆದರೆ ಪ್ರತಿಪಕ್ಷ ನಾಯಕರಿಗೆ ಶಿಷ್ಠಾಚಾರದ ಪ್ರಕಾರವಾಗಿಯೂ ಬಂಗಲೆ ಹಂಚಿಕೆ ಮಾಡುತ್ತಿಲ್ಲ ಎಂದು ಆರ್. ಅಶೋಕ ದೂರಿದ್ದಾರೆ. ಸರ್ಕಾರದ ಪರವಾಗಿ ಯಾರೂ ಸಹ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
4 ಪತ್ರ ಬರೆಯಲಾಗಿದೆ: ಕಳೆದ ವರ್ಷದ ನವೆಂಬರ್ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಈ ವರ್ಷದ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳಿಗೆ ಸೇರಿ ಆರ್. ಅಶೋಕ ಸರ್ಕಾರಿ ಬಂಗಲೆಗಾಗಿ 4 ಪತ್ರವನ್ನು ಬರೆದಿದ್ದಾರೆ. ಕುಮಾರ ಕೃಪಾ ಪಶ್ಚಿಮ, ರೇಸ್ ವ್ಯೂ ಕಾಟೇಜ್ ಸೇರಿದಂತೆ ಈ ಬಂಗಲೆಗಳನ್ನು ಹಂಚಿಕೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದರು.
ಸರ್ಕಾರಿ ಬಂಗಲೆ ಇಲ್ಲದ ಕಾರಣ ಜಯನಗರಲ್ಲಿರುವ ತಮ್ಮ ಸ್ವಂತ ನಿವಾಸದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ಸಭೆಗಳನ್ನು ನಡೆಸಬೇಕಾಗಿದೆ. "ಅಧಿಕಾರಿಗಳ ಜೊತೆ, ಶಾಸಕರ ಜೊತೆ ಸಭೆ ನಡೆಸುವುದು ಮಾತ್ರವಲ್ಲ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಂದ ಆಗಮಿಸುವ ಜನರನ್ನು ಭೇಟಿಯಾಗಲು ಸರ್ಕಾರಿ ನಿವಾಸ ಇಲ್ಲವಾಗಿದೆ" ಎಂದು ಆರ್. ಅಶೋಕ ಹೇಳಿದ್ದಾರೆ.
ವಿಧಾನಸೌಧದ ಬಳಿಯ ಬಂಗಲೆಯನ್ನು ಹಂಚಿಕೆ ಮಾಡಿದರೆ ಸರ್ಕಾರಿ ಬಂಗಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಅನುಕೂಲವಾಗುತ್ತದೆ. ಆದರೆ ಅಧಿಕಾರಿಗಳ ಮಾಹಿತಿ ಪ್ರಕಾರ ಆರ್. ಅಶೋಕ ಗುರುತಿಸಿರುವ ಬಂಗಲೆಗಳು ಖಾಲಿ ಇಲ್ಲ.
"ಸರ್ಕಾರಿ ಬಂಗಲೆ ಹಂಚಿಕೆಯಂತಹ ತೀರ್ಮಾನವನ್ನು ಯಾವುದೇ ತಡ ಮಾಡದೇ ಕೈಗೊಳ್ಳಬೇಕು. ಆದರೆ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಬೇಕೆಂದು ವಿಳಂಬ ಮಾಡುತ್ತಿದ್ದಾರೆ" ಎಂದು ಆರ್. ಅಶೋಕ ಬೇಸರ ವ್ಯಕ್ತಪಡಿಸಿದ್ದಾರೆ.
2023ರ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಿತು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸೋಲು ಕಂಡಿತು. 66 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಪ್ರತಿಪಕ್ಷ ಸ್ಥಾನವನ್ನು ಪಡೆಯಿತು. ಆದರೆ ಬಿಜೆಪಿ ನವೆಂಬರ್ ತನಕ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲೇ ಇಲ್ಲ.
ಎರಡು ವಿಧಾನಸಭೆ ಅಧಿವೇಶನಗಳನ್ನು ಪ್ರತಿಪಕ್ಷ ನಾಯಕ ಇಲ್ಲದೇ ನಡೆಸಲಾಯಿತು. ಈ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡಿತ್ತು. ಬಳಿಕ ನವೆಂಬರ್ 2023ರಲ್ಲಿ ಬಿಜೆಪಿ ಆರ್. ಅಶೋಕರನ್ನು ಪ್ರತಿಪಕ್ಷ ನಾಯಕರಾಗಿ ನೇಮಿಸಿತು.
ಸರ್ಕಾರ ಶಿಷ್ಠಾಚಾರದ ಅನ್ವಯ ಪ್ರತಿಪಕ್ಷ ನಾಯಕರಿಗೆ ಸರ್ಕಾರಿ ಬಂಗಲೆ, ಸರ್ಕಾರಿ ಕಾರು ನೀಡಬೇಕು. ಅಧಿಕಾರಿಗಳ ಸಭೆ ನಡೆಸುವುದು ಸೇರಿದಂತೆ ಹಲವು ಅಧಿಕಾರ ಪ್ರತಿಪಕ್ಷ ನಾಯಕರಿಗೆ ಇರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಂಗಲೆ ಹಂಚಿಕೆ ಮಾಡಿಲ್ಲ ಎಂದು ಎಂಬುದು ಆರೋಪವಾಗಿದೆ.












Click it and Unblock the Notifications