ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು, ಮೌನಕ್ಕೆ ಶರಣಾದ್ರಲ್ಲ ನಮ್ಮ ಸಿಎಂ
ಬೆಂಗಳೂರು, ಆ. 22: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೌನ ನೀತಿಯಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ದೂರು ನೀಡಲಾಗದ ಪರಿಸ್ಥಿತಿ ಮುಂದುವರೆದಿದೆ. ಎಸಿಬಿ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಲೋಕಾಯುಕ್ತ ಸಂಸ್ಥೆ ದೂರು ಸ್ವೀಕರಿಸಿದರೂ ಅದರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವಿಲ್ಲ! ಸರ್ಕಾರದ ಮೌನ ನೀತಿಯಿಂದಾಗಿ ರಾಜ್ಯದಲ್ಲಿ ಲಂಚ ಸ್ವೀಕರಿಸುವವರನ್ನು ಕೇಳಲಾಗದ ಸ್ಥಿತಿ ನಿರ್ಮಾಣವಾಗಿದೆ.
ಎಸಿಬಿ ತನಿಖೆ ರದ್ದು, ದೂರು ಸ್ವೀಕಾರ ಸ್ಥಗಿತ: ಭ್ರಷ್ಟಾಚಾರ ನಿಗ್ರಹ ದಳ ರದ್ದು ಮಾಡಿ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ಸ್ಥಗಿತಗೊಂಡಿದೆ. ಅಧಿಕಾರಿಗಳು ಬಂದರೂ ಯಾವುದೇ ಕ್ರಮ ಕೆಲಸ ನಿರ್ವಹಿಸುತ್ತಿಲ್ಲ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಲಂಚ ಸ್ವೀಕಾರ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುವ ಧೈರ್ಯ ತೋರುತ್ತಿಲ್ಲ. ಪ್ರಕರಣಗಳ ತನಿಖೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.
ಬೊಮ್ಮಾಯಿ ಸರ್ಕಾರದ ದ್ವಂದ ನಡೆ: ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ "ಸುವರ್ಣ ಕಾಲ"
ಹೈಕೋರ್ಟ್ ತೀರ್ಪಿನ ಬಳಿಕ ಎಸಿಬಿ ಯಾವುದೇ ದೂರು ಸ್ವೀಕರಿಸುತ್ತಿಲ್ಲ. ಸ್ವೀಕರಿಸಲು ಅವಕಾಶವಿಲ್ಲ. ಸರ್ಕಾರ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ. ಒಂದು ವಾರದಲ್ಲಿ ಸರ್ಕಾರದ ತೀರ್ಮಾನ ಬರಬಹುದು ಎಂದು ನಿರೀಕ್ಷಿಸಿದ್ದೇವೆ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಸದ್ಯದ ಸ್ಥಿತಿಯಲ್ಲಿ ಯಾವ ದೂರು ತನಿಖೆ ನಡೆಸುತ್ತಿಲ್ಲ. ದೂರುಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಸಿಬಿ ಉನ್ನತ ಅಧಿಕಾರಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ರದ್ದಾಗಿದೆ
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದರೂ ಅದನ್ನು ಸ್ವೀಕರಿಸುವ ಹೊರತು ಕ್ರಮ ಜರುಗಿಸುವ ಅಧಿಕಾರವಿಲ್ಲ. ಲೋಕಾಯುಕ್ತ ಭಾಗವಾಗಿದ್ದ ಭ್ರಷ್ಟಾಚಾರ ನಿಗ್ರಹ ದಳ ರದ್ದಾಗಿದೆ. ಮತ್ತೆ ಸರ್ಕಾರ ಅಧಿಸೂಚನೆ ಹೊರಡಿಸಿ ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ವ್ಯಾಪ್ತಿಯಲ್ಲಿ ಸೃಷ್ಟಿಸಿ ಪೊಲೀಸ್ ಠಾಣಾ ಅಧಿಕಾರ ನೀಡಿದರೆ ಮಾತ್ರ ಲಂಚ ಸ್ವೀಕಾರ ದೂರುಗಳ ವಿರುದ್ಧ ಕ್ರಮ ಜರುಗಿಸಲು ಅವಕಾಶ ವಿರುತ್ತದೆ. ಸದ್ಯಕ್ಕೆ ಸರ್ಕಾರ ಅಂತಹ ಯಾವ ಪ್ರಸ್ತಾಪವೂ ಇಟ್ಟಿಲ್ಲ. ಆದೇಶವೂ ಮಾಡಿಲ್ಲ.
ಹೈಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ: ಸಂತೋಷ್ ಹೆಗ್ಡೆ
ನಮ್ಮ ವ್ಯಾಪ್ತಿಗೆ ಬರುವುದಿಲ್ಲ
ಹೀಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ದೂರು ನೀಡಿದರೂ ಅದನ್ನು ಲೋಕಾಯುಕ್ತ ಸಂಸ್ಥೆ ಸ್ವೀಕರಿಸುತ್ತಿಲ್ಲ. ನಿಯಮ ಉಲ್ಲಂಘನೆ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಗೆ ಸಂಬಂಧ ಲೋಕಾಯುಕ್ತ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ದೂರುಗಳನ್ನಷ್ಟೇ ಸ್ವೀಕರಿಸುತ್ತಿದೆ. ಲಂಚಕ್ಕೆ ಬೇಡಿಕೆ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸದಿಂತೆ ಯಾವ ದೂರು ಸ್ವೀಕರಿಸುತ್ತಿಲ್ಲ. ಒಂದು ವೇಳೆ ಸ್ವೀಕರಿಸಿದರೂ ಈ ಹಿಂದೆ ಎಸಿಬಿ ತನಿಖೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇದೀಗ ಎಸಿಬಿ ರದ್ದಾಗಿರುವುದರಿಂದ ದೂರು ನೀಡದರೂ ಅದರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಎಸಿಬಿ ರದ್ದು ಮಾಡಿ ಹೈಕೋರ್ಟ್ ತೀರ್ಪು
ಎಸಿಬಿ ರದ್ದು ಮಾಡಿ ಹೈಕೋರ್ಟ್ ತೀರ್ಪು ನೀಡಿ ಎರಡು ವಾರ ಸಮೀಪಿಸಿದರೂ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಯಾವ ಪ್ರತಿಕ್ರಿಯೆ ನೀಡಿಲ್ಲ. ಎಸಿಬಿ ರದ್ದು ಮಾಡುವ ಮನಸು ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬಿದರೆ ಜನ ಪ್ರತಿನಿಧಿಗಳಿಗೆ ಸಂಕಷ್ಟ ಎದುರಾಗುತ್ತದೆ. ಹಾಗಂತ ಹೈಕೋರ್ಟ್ ತೀರ್ಪು ಕೊಟ್ಟರೂ ಅದನ್ನು ನಿರ್ಲಕ್ಷ್ಯಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಧೈರ್ಯವೂ ತೋರುತ್ತಿಲ್ಲ.
ಬೊಮ್ಮಾಯಿ ಅವರ ಈ ಜಾಣ ಕುರುಡುತನದಿಂದ ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ಕಾರ್ಯ ಸಂಪೂರ್ಣ ನಿಷ್ಕ್ರಿಯವಾಗಿದೆ. ಎಸಿಬಿ ರದ್ದು ಮಾಡಿದ ಹೈಕೋರ್ಟ್ ತೀರ್ಪು ಜಾರಿ ಮಾಡುವತ್ತ ಕಾರ್ಯೋನ್ಮುಖವಾಗಿಲ್ಲ. ಅತ್ತ ಎಸಿಬಿ ಉಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುವ ಧೈರ್ಯವೂ ತೋರುತ್ತಿಲ್ಲ. ನಡೆದಂಗೆ ನಡೆಯಲಿ ಎಂಬ ಅವರ ನಡೆಯಿಂದಾಗಿ ಭ್ರಷ್ಟರಿಗೆ ಲಂಚ ಸ್ವೀಕರಿಸಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.
ಇನ್ನೊಂದು ವಾರದಲ್ಲಿ ತೀರ್ಮಾನ?
ಎಸಿಬಿ ರದ್ದು ಮಾಡಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಲು ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಇನ್ನೊಂದು ವಾರದಲ್ಲಿ ಸರ್ಕಾರದ ನಿಲುವು ಗೊತ್ತಾಗಲಿದೆ. ಅಲ್ಲಿಯ ವರೆಗೂ ನಾವು ಸಮ್ಮನೆ ಇದ್ದೇವೆ. ಸರ್ಕಾರ ಮೇಲ್ಮನವಿ ಸಲ್ಲಿಸಿದರೂ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಹೊರ ಬರುವವರೆಗೂ ಎಸಿಬಿ ಕಾರ್ಯ ನಿರ್ವಹಿಸುವುದು ಅನುಮಾನ. ಅಂತೂ ಬೊಮ್ಮಾಯಿ ಜಾಣ ಕುರುಡುತನದಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ 100 ಅವಕಾಶ ಮಾಡಿಕೊಟ್ಟಂತಾಗಿದೆ.