ಕೃಷ್ಣಾ ಮೇಲ್ದಂಡೆ ಯೋಜನೆ: ಡಿಸೆಂಬರ್ ವೇಳೆಗೆ 3,000 ಕೋಟಿ ಖರ್ಚು ಮಾಡಲು ಕಾರಜೋಳ ಸೂಚನೆ
ಬೆಂಗಳೂರು, ಅಕ್ಟೋಬರ್ 27: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಂಬಂಧಿಸಿದಂತೆ 3000 ಕೋಟಿ ರೂ. ಅನುದಾನ ವ್ಯಯಿಸಲು ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ಜಲಸಂಪನ್ಮೂಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಭೂ ಸ್ವಾಧೀನಕ್ಕಾಗಿ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಡಿಸೆಂಬರ್ ಅಂತ್ಯದೊಳಗೆ 3000 ಕೋಟಿ ರೂ. ಅನುದಾನವನ್ನು ಖರ್ಚು ಮಾಡಿ. ಪ್ರಸಕ್ತ ಸಾಲಿನಲ್ಲಿಯೇ 11,000 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀ. ಮಟ್ಟಕ್ಕೆ ನೀರು ನಿಲ್ಲಿಸಲು ಅಗತ್ಯವಿರುವ 76000 ಎಕರೆಗಳ ಪೈಕಿ 37000 ಎಕರೆ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತಾಗುತ್ತದೆ ಎಂದು ಮಾನ್ಯ ಸಚಿವರು ತಿಳಿಸಿದರು. ಅಣೆಕಟ್ಟೆಯ ಎತ್ತರವನ್ನು 524.256 ಮೀ. ಹೆಚ್ಚಿಸುವುದಕ್ಕಾಗಿ ಮುಳುಗಡೆಯಾಗುವ 20 ಹಳ್ಳಿಗಳ ಪೈಕಿ 4 ಹಳ್ಳಿಗಳ 3700 ಕಟ್ಟಡಗಳಿಗೂ ಪರಿಹಾರ ಧನವನ್ನು ಪಾವತಿ ಮಾಡಲು ಸಚಿವರು ಸೂಚಿಸಿದರು.
ತ್ವರಿತವಾಗಿ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಿ
ಈಗಾಗಲೇ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಕಾಯ್ದೆ 4(1) ಅಥವಾ ಪ್ರಸ್ತುತ ಭೂಸ್ವಾಧೀನ ಕಾಯ್ದೆ 11(1)ರಡಿಯಲ್ಲಿ ಅಧಿಸೂಚಿಸಲಾಗಿತ್ತು. ಕಾರಣಾಂತರದಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದಿರಲಿಲ್ಲ. ಜಮೀನು ಮಾಲೀಕರು/ ರೈತರು ನೇರ ಖರೀದಿ ಮತ್ತು ಸಮ್ಮತಿ ಐತೀರ್ಪಿಗೆ ಒಪ್ಪಿಗೆ ಸೂಚಿಸಿದಲ್ಲಿ ಅಂತವರ ಭೂಮಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಭೂಸ್ವಾಧೀನ ಕಾಯ್ದೆಯಡಿ ತ್ವರಿತವಾಗಿ ಸ್ವಾಧೀನ ಪಡಿಸಿಕೊಳ್ಳಿ. ಮಾಲೀಕರು ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಕಾರಜೋಳ ತಿಳಿಸಿದರು.

ಯೋಜನೆಯಡಿ ಬಾಧಿತ 20 ಹಳ್ಳಿಗಳ ಪೂರ್ಣ ಪುನರ್ವಸತಿ ಕಾರ್ಯಕ್ರಮ ಪೂರ್ಣಗೊಳಿಸಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಅಗತ್ಯವಿರುವ 6,437 ಎಕರೆ ಪೈಕಿ 3,278 ಎಕರೆ ಪ್ರದೇಶವನ್ನು ಈಗಾಗಲೇ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಜೊತೆಗೆ ಅಗತ್ಯವಿರುವ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಉಪಕೇಂದ್ರ ಅಗತ್ಯವಿಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿಗಳಿಗೆ ಅವರು ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನಿವೃತ್ತ ಕಂದಾಯ ಅಧಿಕಾರಿಗಳನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿಸಲು ಇದೇ ವೇಳೆ ಅನುಮತಿ ನೀಡಲಾಯಿತು.












Click it and Unblock the Notifications