Karnataka Budget 2024: ರಾಜ್ಯದ ಎರಡು ಅತೀ ದೊಡ್ಡ ಜಿಲ್ಲೆಗಳ ವಿಭಜನೆ ಫಿಕ್ಸ್? ಬಜೆಟ್ನಲ್ಲಿ ಹೊಸ ಜಿಲ್ಲೆಗಳ ಘೋಷಣೆ?
ಬೆಂಗಳೂರು, ಫೆಬ್ರವರಿ 16: ರಾಜ್ಯದ ಅತಿ ದೊಡ್ಡ ಜಿಲ್ಲೆಗಳಾದ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳನ್ನು ವಿಭಜಿಸಿ ಹೊಸದಾಗಿ ಎರಡು ಜಿಲ್ಲೆಗಳನ್ನು ಘೋಷಿಸಲು ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.
ಹೌದು, ಫೆಬ್ರವರಿ 8ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಿಂದಾಗಿ ಈ ಎರಡು ಜಿಲ್ಲೆಗಳನ್ನ ವಿಭಜಿಸುವ ಕಾಲ ಕೂಡಿ ಬಂದಿದೆ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಲವು ಜಿಲ್ಲೆಗಳ ಮಿತಿಗಳನ್ನು (ಗಡಿಯನ್ನು) ಬದಲಾಯಿಸುವ ಬಗ್ಗೆ ಪ್ರಸ್ತಾಪ ಮಾಡಿದೆ.

ಹಾಗೆ ಪ್ರಸ್ತಾಪಿಸುವಾಗ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ ಹೆಸರನ್ನು ಪ್ರಸ್ತಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡನೆಯಲ್ಲಿ ಈ ಎರಡೂ ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳ ಹೆಸರುಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಮತ್ತೆ ಸದ್ದು ಮಾಡುತ್ತಿದೆ. ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಜಿಲ್ಲೆಗಳ ರಚನೆಗೆ ನೂತನ ಸಚಿವರೇ ಬೇಡಿಕೆ ಇಡುತ್ತಿದ್ದಾರೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಹೊಸ ಜಿಲ್ಲೆಗಳನ್ನು ರಚಿಸಬೇಕು ಎನ್ನುವ ಒತ್ತಡಗಳು ಕೇಳಿ ಬಂದಿವೆ. ಇತ್ತ ತುಮಕೂರು ಜಿಲ್ಲೆಯನ್ನೂ ಎರಡು ಅಥವಾ ಮೂರು ಭಾಗಗಳಾಗಿ ರೂಪಿಸುವ ಬೇಡಿಕೆಯೂ ಇದೆ.

ಬೆಳಗಾವಿ ವಿಭಜನೆ?
ಹಲವು ದಶಕಗಳಿಂದ ಕುಂದ ನಗರಿ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಾಕಷ್ಟು ಪ್ರಯತ್ನಗಳು ನಡೆದಿವೆ, ಇದೀಗ ಬೆಳಗಾವಿ ಭಾಗದಲ್ಲಿ ಜಾರಕಿಹೊಳಿ ಕುಟುಂಬಸ್ಥರ ಒತ್ತಡ ಹಾಗೂ ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿ ಸರ್ಕಾರ ಜಿಲ್ಲೆಯ ವಿಭಜನೆಗೆ ಮುಂದಾಗಿದೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಬೇಕು ಎನ್ನುವುದು ಜಿಲ್ಲಾ ಪುನರ್ ವಿಂಗಡಣಾ ಸಮಿತಿ ನೀಡಿರುವ ವರದಿ. ಅದರಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆ ರಚನೆಯಾಗಬೇಕು ಎನ್ನುವ ಸಲಹೆಯಿದೆ.
ಇನ್ನೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಮೂರನೇ ಜಿಲ್ಲೆಯಾಗಿ ಗೋಕಾಕ್ ಬದಲು ಬೈಲಹೊಂಗಲ ಆದರೆ ಸೂಕ್ತ ಎನ್ನುವ ಒತ್ತಡಗಳಿದ್ದರೆ, ಜಾರಕಿಹೊಳಿ ಸಹೋದರರು ಗೋಕಾಕ್ ಜಿಲ್ಲೆಗೆ ಪಟ್ಟು ಹಿಡಿದಿದ್ದಾರೆ.
ತುಮಕೂರು ಜಿಲ್ಲೆ ವಿಭಜನೆ?
ರಾಜ್ಯದಲ್ಲಿ ಭೌಗೋಳಿಕವಾಗಿಕುಂದ ನಗರಿ ಬೆಳಗಾವಿ ನಂತರ ದೊಡ್ಡ ಜಿಲ್ಲೆಯಾದ ತುಮಕೂರು ವಿಭಜನೆಯಾಗಬೇಕು ಎನ್ನುವ ಕೂಗು ಕೇಳಿ ಬಂದಿದ್ದು, ಮಧುಗಿರಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರ ಮಾಡುವ ಬೇಡಿಕೆಯಿದೆ. ಅಲ್ಲದೇ ತಿಪಟೂರನ್ನೂ ಪ್ರತ್ಯೇಕ ಜಿಲ್ಲೆಯಾಗಿಸುವ ಒತ್ತಾಯಗಳೂ ಇವೆ.
ಸಮಿತಿ ಶಿಫಾರಸ್ಸು ಏನು?
ಮೂರ್ನಾಲ್ಕು ದಶಕದಿಂದಲೂ ಜಿಲ್ಲಾ ವಿಂಗಡಣೆ ಕೂಗು ಕರ್ನಾಟಕದಲ್ಲಿ ಜೋರಾಗಿಯೇ ಇದೆ. ಜಿಲ್ಲೆಗಳ ವಿಂಗಡಣೆಗೆ 1980ರ ದಶಕದಲ್ಲಿಯೇ ಟಿ.ಎಂ.ಹುಂಡೇಕಾರ್, ಗದ್ದಿಗೌಡರ್ ಸಮಿತಿಗಳನ್ನು ರಚಿಸಲಾಗಿತ್ತು. ಇದರಲ್ಲಿ ನಾಲ್ಕೈದು ಜಿಲ್ಲೆ ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳ ವಿಂಗಡಣೆಗೆ ಸಲಹೆ ನೀಡಲಾಗಿತ್ತು.
ಕರ್ನಾಟಕದಲ್ಲಿ ಭೌಗೋಳಿಕವಾಗಿ ಹಲವು ಜಿಲ್ಲೆಗಳು ದೊಡ್ಡವಿದ್ದು, ಆಡಳಿತಾತ್ಮಕ ದೃಷ್ಟಿಯಿಂದ 12ರಿಂದ 13 ಜಿಲ್ಲೆಗಳ ರಚನೆಗೆ ಸಲಹೆ ನೀಡಲಾಗಿತ್ತು. ಕೊನೆಗೂ ವರದಿಯನ್ನು ಒಪ್ಪಿಕೊಂಡು ರಾಮಕೃಷ್ಣ ಹೆಗಡೆ 1987ರಲ್ಲಿ ಬೆಂಗಳೂರು ಜಿಲ್ಲೆ ವಿಭಜಿಸಿದ್ದರು. ನಂತರ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ 1997ರಲ್ಲಿ 7 ಹೊಸ ಜಿಲ್ಲೆಗಳು ರಚನೆಯಾದವು. ಉಡುಪಿ, ಬಾಗಲಕೋಟೆ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳನ್ನು ಘೋಷಿಸಲಾಯಿತು.
ಬೆಳಗಾವಿ, ಕಲಬುರಗಿ, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು ಜಿಲ್ಲೆಗಳ ವಿಭಜನೆ ಒತ್ತಡವಿದ್ದರೂ ರಾಜಕೀಯ ಕಾರಣದಿಂದ ಅದು ಈಡೇರಲೇ ಇಲ್ಲ. 2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳನ್ನು ರಚಿಸಿದರೆ ನಂತರ ಯಡಿಯೂರಪ್ಪಅವರು ಸಿಎಂ ಆಗಿದ್ದಾಗ 2009ರಲ್ಲಿ ಯಾದಗಿರಿ ಜಿಲ್ಲೆಯೂ ರಚನೆಯಾಯಿತು. ಎರಡು ವರ್ಷದ ಹಿಂದೆ ಯಡಿಯೂರಪ್ಪ ಅವರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ವಿಭಜಿಸಿ ರಚಿಸಿದ ವಿಜಯನಗರವೇ ಹೊಸ ಜಿಲ್ಲೆ. ಸದ್ಯ ವಿಭಜನೆ ಬಾಕಿ ಇರುವುದು ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಮಾತ್ರ. ಆದರೆ, ಇದೀಗ ಹಲವು ಜಿಲ್ಲೆಗಳ ವಿಭಜನೆಗಾಗಿ ಸಾಕಷ್ಟು ಒತ್ತಡಗಳು ಕೇಳಿ ಬರುತ್ತಿದೆ.












Click it and Unblock the Notifications