ರಾಜ್ಯದಲ್ಲಿ ಮುಷ್ಕರ ಕೈಬಿಡಲು ವೈದ್ಯರ ನಕಾರ: ಯಾರು ಏನಂದ್ರು?
ಬೆಂಗಳೂರು, ಸೆಪ್ಟೆಂಬರ್ 15: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆ ವೈದ್ಯರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರ ಜತಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಪ್ರತಿಭಟನೆಯನ್ನು ಮುನ್ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಅಸಹಕಾರ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.
ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸೆ.20ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರೆಯದಿದ್ದರೆ ಸೆ.21 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ (ಒಪಿಡಿ) ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್ಎಸ್) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೋನಾ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು.
ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ
ಇನ್ನು ವೈದ್ಯರ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ 15ರಿಂದ ಆರೋಗ್ಯ ಇಲಾಖೆಗೆ ಕೊವಿಡ್ ವರದಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಅಧಿಕಾರಿಗಳ ಸಂಘದ ಡಾ.ಪ್ರಕಾಶ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕೇವಲ ತುರ್ತು ಪರಿಸ್ಥಿತಿ ಬಿಟ್ಟು ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಬೆಂಗಳೂರು ಚಲೋ ಅಭಿಯಾನ ನಡೆಸುತ್ತೇವೆ ಎಂದು ಹೇಳಿದ್ದಾರೆ.

ವೈದ್ಯರ ಬೇಡಿಕೆಗಳು ಏನೇನು..?
- ವೇತನ ತಾರತಮ್ಯ ಸರಿ ಪಡಿಸಿ ವೇತನ ಹೆಚ್ಚಳ ಮಾಡಬೇಕು
- ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಬಿಬಿಎಂಪಿ ತೆಕ್ಕೆಗೆ ತೆಗೆದುಕೊಂಡಿರುವುದನ್ನ ಆರೋಗ್ಯ ಇಲಾಖೆಗೆ ಸೇರಿಸಬೇಕು
- ಸರ್ಕಾರದಿಂದ ವೈದ್ಯರ ದಿನಾಚರಣೆ ಆಚರಿಸಬೇಕು
- ಜಿಲ್ಲಾಸ್ಪತ್ರೆಗಳನ್ನ ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಕೂಡದು
- ವೈದ್ಯರ ವಿರುದ್ಧ ಆರೋಪ ಬಂದಾಗ ತನಿಖೆಗೂ ಮುನ್ನ ಅಮಾನತು ಮಾಡಬಾರದು
- ಕೊರೊನಾ ಕರ್ತವ್ಯದ ವೇಳೆ ಮೃತಪಟ್ಟಿರುವ ವೈದ್ಯರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು

ಅಶ್ವತ್ಥ ನಾರಾಯಣ ಹೇಳಿದ್ದೇನು?
ವೇತನ ಹೆಚ್ಚಳದ ಬಗ್ಗೆ ಒಂದು ನಿರ್ಧಾರ ಕೂಡಾ ಆಗಿದೆ, ಅದು ಯಾವ ರೀತಿ ಎಂದು ವೈದ್ಯರಿಗೆ ಹೇಳಿದ್ದೇವೆ.ವೈದ್ಯ ಸಂಘದ ಪದಾಧಿಕಾರಿಗಳು ಅವರ ಸ್ನೇಹಿತರ ಜೊತೆ ಮಾತನಾಡಿ ನಿರ್ಧಾರಕ್ಕೆ ಬರುತ್ತಾರೆ. ವೈದ್ಯರು ಕೊರೋನ ಸಂಧರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.
ಕಳೆದ ಏಳು ತಿಂಗಳ ಕಾಲ ರಜೆ ಇಲ್ಲದೆ ಹಗಲಿರುಳು ಸೇವೆ ಮಾಡಿದ್ದಾರೆ.ಅವರ ಸೇವೆ ಬಗ್ಗೆ ಎರಡು ಮಾತಿಲ್ಲ. ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ. ಸಂಬಳದ ಜೊತೆ ಇನ್ಸೆಂಟಿವ್ ಕೂಡಾ ಸೇರಿಸಬೇಕು ಎಂಬುದು ಅವರ ಬೇಡಿಕೆ ಆಗಿತ್ತು. ಅವರ ಬೇಡಿಕೆಯನ್ನು ಸರ್ಕಾರ ಗಮನಿಸಿ ಸ್ಪಂದಿಸುವ ಕೆಲಸ ಇಂದು ಆಗಿದೆ. ನಾಡಿನ ಜನಕ್ಕೆ ವೈದ್ಯರ ಸೇವೆ ಅಗತ್ಯವಿದೆ ಎಂದಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರ ಪ್ರತಿಕ್ರಿಯೆ
ನಾವು ಕಳೆದ ಕೆಲವು ತಿಂಗಳಿಗಳಿಂದ ವೈದ್ಯರ ಜೊತೆ ಸಂಪರ್ಕ ದಲ್ಲಿದ್ದೇವೆ. ಇಂದಿನ ಸಭೆ ಫಲಪ್ರದ ವಾಗಿದೆ. ವೈದ್ಯರು ಅವರ ಸಹೋದ್ಯೋಗಿಗಳ ಜೊತೆ ಮಾತನಾಡಿ ನಿರ್ಧಾರಕ್ಕೆ ಬರುತ್ತಾರೆ. ಮುಷ್ಕರ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ.
Recommended Video

ಕರ್ನಾಟಕ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು ಏನು ಹೇಳ್ತಾರೆ
ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ಸರ್ಕಾರ ಕೊಟ್ಟಿದೆ,ನಾವು ಎಲ್ಲಾ ಜಿಲ್ಲೆಗಳ ನಮ್ಮ ಪಧಾದಿಕಾರಿಗಳ ಜೊತೆ ಚರ್ಚೆ ಮಾಡಿ ತಿಳಿಸುತ್ತೇವೆ. ಶುಕ್ರವಾರ ನಮ್ಮ ನಿರ್ಧಾರ ತಿಳಿಸುತ್ತೇವೆ. ಸಚಿವರು ಗಳು ಪ್ರತಿಭಟನೆ ವಾಪಸ್ ಪಡೀತಾರೆ ಅನ್ನುತ್ತಾರೆ, ಆದರೆ ವೈದ್ಯರು ಸದ್ಯಕ್ಕೆ ಪ್ರತಿಭಟನೆ ವಾಪಸ್ ಇಲ್ಲ ಎನ್ನುತ್ತಾರೆ. ಶುಕ್ರವಾರದ ನಂತರ ನಿರ್ಧಾರ ಹೇಳುವುದಾಗಿ ವೈದ್ಯರು ಹೇಳಿಕೆ ನೀಡಿದ್ದಾರೆ. ಅಲ್ಲಿಯತನಕ ಕೊರೋನಾ ಬುಲೆಟಿನ್ ಸೇರಿದಂತೆ ಇತರ ಕಾಯಿಲೆಗಳ ಅಂಕಿ ಅಂಶ ಸಿಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications