ಪ್ರಯಾಣಿಕರಿಗೆ ಗುಡ್ನ್ಯೂಸ್: ವಾರಕ್ಕೆ 2 ಬಾರಿ ಬೆಂಗಳೂರು-ವಿಜಯಪುರ ನೇರ ರೈಲು ಸಂಚಾರ, ವೇಳಾಪಟ್ಟಿ ಹೀಗಿದೆ
ಬೆಂಗಳೂರು: ಉತ್ತರ ಕರ್ನಾಟಕದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆ ಬೆನ್ನಲ್ಲೆ ಮತ್ತೊಂದು ಖುಷಿ ಸುದ್ದಿಯೊಂದು ಲಭಿಸಿದೆ. ಯಶವಂತಪುರ-ವಿಜಯಪುರ-ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ಇತ್ತೀಚೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ವಾರದಲ್ಲಿ ಎರಡು ಬಾರಿ ಈ ರೈಲಿನ ಕಾರ್ಯಾಚರಣೇ ಮಾಡಲು ಅಹ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಈ ಮೂಲಕ ಎರಡು ಭಾಗದ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಿದಂತಾಗಿದೆ.
ಯಶವಂತಪುರ-ವಿಜಯಪುರ-ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲುಗಳ (ರೈಲು ಸಂಖ್ಯೆ 06577/06578) ಆವರ್ತನವನ್ನು ರೈಲ್ವೆ ಮಂಡಳಿಯು ಹೆಚ್ಚಿಸಿದೆ. ಇದೇ ಜೂನ್ 1 ರಿಂದ ಕಾರ್ಯಾಚರಣೆ ಆರಂಭವಾಗಲಿದೆ. ಪರಸ್ಪರ ಎರಡು ದಿಕ್ಕಿನಲ್ಲಿ ವಾರಕ್ಕೆ ಒಮ್ಮೆ ಸಂಚರಿಸಲು ಮೊದಲ ನಿರ್ಧರಿಸಲಾಗಿತ್ತು. ಇದೀಗ ವಾರಕ್ಕೆ ಎರಡು ಬಾರಿ ಸಂಚಾರ ಮಾಡುವಂತೆ ಮಾಡಲಾಗಿದೆ. ಇದರಿಂದ ರೈಲಿನ ನಿಲುಗಡೆಗಳು, ಸಮಯ ಮತ್ತು ಸಂಯೋಜನೆಯೊಂದಿಗೆ ಹೆಚ್ಚಾಗಲಿದ್ದು, ಸಾವಿರಾರು ಪ್ರಯಾಣಿಕರು ಅನುಕೂಲ ಪಡೆಯಲಿದ್ದಾರೆ.

ಸಂಚಾರ ಸಮಯ, ವೇಳಾಪಟ್ಟಿ ಹೀಗಿದೆ
ಯಶವಂತಪುರ-ವಿಜಯಪುರ ದ್ವೈವಾರ ಎಕ್ಸ್ಪ್ರೆಸ್ ವಿಶೇಷ ರೈಲು (06577) ಜೂನ್ 1 ರಿಂದ ಜೂನ್ 29ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರದಂದು ಬೆಂಗಳೂರಿನ ಯಶವಂತಪುರದಿಂದ ಚಲಿಸುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ವಿಜಯಪುರ-ಯಶವಂತಪುರ ದ್ವೈವಾರ ಎಕ್ಸ್ಪ್ರೆಸ್ ವಿಶೇಷ ರೈಲು (06578) ಜೂನ್ 2 ರಿಂದ ಜೂನ್ 30ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ವಿಜಯಪುರ ನಿಲ್ದಾಣದಿಂದ ಚಲಿಸುತ್ತದೆ.
ಯಶವಂತಪುರ-ವಿಜಯಪುರ ದ್ವಿವಾರ ಎಕ್ಸ್ಪ್ರೆಸ್ ವಿಶೇಷ ರೈಲು (06577) ಸಂಜೆ 4.15ಗಂಟೆಗೆ ಯಶವಂತಪುರ ನಿಲ್ದಾಣದಿಂದ ಸಂಚಾರ ಆರಂಭಿಸಿ ಮರುದಿನ ಬೆಳಗ್ಗೆ 5.15ಕ್ಕೆ ವಿಜಯಪುರ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ ವಿಜಯಪುರ-ಯಶವಂತಪುರ ದ್ವಿವಾರ ಎಕ್ಸ್ಪ್ರೆಸ್ ವಿಶೇಷ ರೈಲು (06578) ಸಂಜೆ 5.00 ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 4.10ಕ್ಕೆ ಯಶವಂತಪುರಕ್ಕೆ ಬರಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗ ಮಧ್ಯದ ನಿಲುಗಡೆ ನಿಲ್ದಾಣಗಳು
ಈ ರೈಲು ಯಶವಂತಪುರದಿಂದ ನೇರವಾಗಿ ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್ಎಂಎಂ ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರಸ್ತೆ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ನೀಡಲಿವೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರ್ಷ
ಬೆಂಗಳೂರು- ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಪ್ರಾರಂಭಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ವಿಜಯಪುರ ಭಾಗದ ಜನದ ಬಹುದಿನ ಬೇಡಿಕೆಯಾಗಿದ್ದ ಈ ವಿಶೇಷ ಹೈಸ್ಪೀಡ್ ರೈಲು ನೇರ ಸಂಪರ್ಕ ಒದಗಿಸಲಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದ ರೈಲ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಜೋಶಿ ಧನ್ಯವಾದ ತಿಳಿಸಿದರು.
ಹುಬ್ಬಳ್ಳಿ ಪ್ರವೇಶಿಸದೇ ವಿಜಯಪುರ ತಲುಪುತ್ತೆ
ಈ ರೈಲು ಉತ್ತರ ಕರ್ನಾಟಕಕ್ಕೆ ಬಂದರೂ ಸಹಿತ ಹುಬ್ಬಳ್ಳಿ ಜಂಕ್ಷನ್ ಬಿಟ್ಟು ಗದಗ ಬೈಪಾಸ್ ಮಾರ್ಗವಾಗಿ ಸಂಚಾರ ಮಾಡಲಿದೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ಒಟ್ಟು 9 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಕೊಡಲಿದೆ. ಇದರಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಕೇವಲ 11 ಗಂಟೆಗಳಲ್ಲಿ ತಲುಪಬಹುದಾಗಿದೆ. ಈ ಮಾರ್ಗದ ಉದ್ದಕ್ಕೂ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಅಪಾರ ಸಂಖ್ಯೆ ಪ್ರಯಾಣಿಕರಿಗೆ ಸುಗಮ ಮತ್ತು ವೇಗದ ರೈಲು ಸಾರಿಗೆ ಸಿಕ್ಕಂತಾಗಿದೆ ಎಂದು ಇತ್ತೀಚೆಗೆ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದರು.
ಈ ಸೇವೆ ಪ್ರಾಯೋಗಿಕ ಹಂತಕ್ಕೆ ಜೂನ್ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ, ಬೆಂಗಳೂರು-ವಿಜಯಪುರ ನಡುವಿನ ವೇಗದ ರೈಲು ಸೇವೆ ಶಾಶ್ವತವಾಗಬೇಕು ಎಂದು ಕೇಂದ್ರ ರೈಲ್ವೆ ಇಲಾಖೆಯನ್ನು ಸಚಿವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಇನ್ನೊಂದು ತಿಂಗಳಲ್ಲಿ ಅಧಿಕೃತ ಮಾಹಿತಿ ಸಿಗುವ ವಿಶ್ವಾಸವಿದೆ.














Click it and Unblock the Notifications