ಆಟೋ, ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಭಾರತ್ ಅಡಿ ಉಚಿತ ಚಿಕಿತ್ಸೆ: ಬಿ. ಶ್ರೀರಾಮುಲು
ಬೆಳಗಾವಿ,ಡಿಸೆಂಬರ್ 22: ಆಟೋ ಹಾಗೂ ಕ್ಯಾಬ್ ಚಾಲಕರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೊಗ್ಯ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬುಧವಾರ ನಡೆದ ಕಲಾಪದಲ್ಲಿ ಶಾಸಕ ಮಂಜುನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು,ರಾಜ್ಯ ಸರ್ಕಾರವು 2011-12 ನೇ ಸಾಲಿನಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಎನ್ನುವ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸುತಿದ್ದು 2016-17 ನೇ ಸಾಲಿನಲ್ಲಿ ಚಾಲಕರೊಂದಿಗೆ ನಿರ್ವಾಹಕರು ಹಾಗು ಕ್ಲೀನರ್ಸ್ಗಳಿಗೂ ಸಹ ಅಪಘಾತ ವಿಮಾ ಸೌಲಭ್ಯವನ್ನು ವಿಸ್ತರಿಸಲು ಪರಿಷ್ಕೃತ ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೆ ತರಲಾಗಿರುತ್ತದೆ.
ಈ ಯೋಜನೆಯಲ್ಲಿ ಅಪಘಾತದಿಂದ ಮರಣಹೊಂದಿದ ಪ್ರಕರಣಗಳಲ್ಲಿ ನಾಮನಿರ್ದೇಶಿತರಿಗೆ ರೂ. 5 ಲಕ್ಷ ಪರಿಹಾರ, ಸಂಪೂರ್ಣ ಶಾಶ್ವತ ದುರ್ಬಲತೆ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ 5 ಲಕ್ಷ ರೂ. ವರೆಗೆ ಪರಿಹಾರ ಮತ್ತು ಒಳರೋಗಿಯಾಗಿ ಚಿಕಿತ್ಸೆ ಪಡೆದ್ದಲ್ಲಿ 1 ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚದ ಮರುಪಾವತಿ ನೀಡಲಾಗುತ್ತದೆ. ಇನ್ನೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆಟೋಚಾಲಕ ಹಾಗೂ ಕ್ಯಾಬ್ ಚಾಲಕ ಒಳಗೊಂಡಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಅರ್ಹ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಕೋವಿಡ್-19ರ ಒಂದನೇ ಅಲೆಯ ಲಾಕ್ಡೌನ್ ಹಿನ್ನೆಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದ ಜೀವನೋಪಾಯಕ್ಕೆ ಒಮ್ಮೆ ಪರಿಹಾರ ಧನವನ್ನಾಗಿ 2020-21 ನೇ ಸಾಲಿನಲ್ಲಿ ರೂ. 5000 ಮತ್ತು ಎರಡನೇ ಅಲೆ ಹಿನ್ನೆಲೆಯಲ್ಲಿ 3000 ರೂ. ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಆನ್ಲೈನ್ನಲ್ಲಿ ಸಾರಿಗೆ ಸೇವೆಗಳ ಹೊಸ ಆರ್ಟಿಓ ಕಚೇರಿಗಳ ಸ್ಥಾಪನೆ ಇಲ್ಲ: ಸಚಿವ ಬಿ.ಶ್ರೀರಾಮುಲು
ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯು ಬಹುತೇಕ ಕಡೆಗಳಲ್ಲಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ.ಸುಮಾರು 30 ಸೇವೆಗಳನ್ನು ಆನ್ಲೈನ್ ಮೂಲಕವೇ ಒದಗಿಸಲಾಗುತ್ತಿದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕ ರಹಿತವಾಗಿ ಸೇವೆಗಳನ್ನು ಪಡೆಯುವ ಸೌಲಭ್ಯಗಳಿರುವುದರಿಂದ ರಾಜ್ಯದಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ (ಆರ್ಟಿಓ)ಕಚೇರಿಗಳನ್ನು ಸ್ಥಾಪಿಸುವುದಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿಂದು ಬೈಂದೂರು ಶಾಸಕ ಸುಕುಮಾರಶೆಟ್ಟಿ ಬಿ.ಎಂ.ಅವರ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಉಡುಪಿ ಜಿಲ್ಲೆಯ ಕುಂದಾಪುರ , ಬೈಂದೂರು ತಾಲೂಕುಗಳು ಮತ್ತು ಸುತ್ತಮುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಕುಂದಾಪುರದಲ್ಲಿ ಪ್ರತಿ ಮಂಗಳವಾರ ಸಾರಿಗೆ ಶಿಬಿರ ನಡೆಯುತ್ತಿದೆ. ರಾಜ್ಯದ ಇತರೆಡೆಗಳಲ್ಲಿಯೂ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಸಾರಿಗೆ ಶಿಬಿರಗಳು ನಡೆಯುತ್ತಿವೆ.

ಕುಂದಾಪುರದಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪಿಸಬೇಕೆಂಬ ಪ್ರಸ್ತಾವ ಸರ್ಕಾರದ ಗಮನಕ್ಕೆ ಬಂದಿದ್ದು,ಅಲ್ಲಿ ಕಚೇರಿ ಸ್ಥಾಪನೆಗೆ ಮಾನದಂಡಗಳು ಪೂರೈಕೆಯಾಗಿಲ್ಲ ಎಂಬ ಎಂದು ಉಡುಪಿ ಆರ್ಟಿಓ ವರದಿ ಸಲ್ಲಿಸಿದ್ದಾರೆ.
ಹೊಸ ಆರ್ಟಿಓ ಅಥವಾ ಎಆರ್ಟಿಓ ಕಚೇರಿಗಳನ್ನು ತೆರೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸುವ ಕುರಿತು ಪರಿಶೀಲಿಸಿ ವರದಿ ನೀಡಲು ಅಪರ ಸಾರಿಗೆ ಆಯುಕ್ತರು ಹಾಗೂ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು, ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಶಿಬಿರಗಳನ್ನು ನಡೆಸುತ್ತಿದೆ,ಸುಮಾರು 30 ಸೇವೆಗಳನ್ನು ಆನ್ಲೈನ್ ಸೇವೆಗಳನ್ನಾಗಿ ಮಾರ್ಪಡಿಸಲಾಗಿದೆ. ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡದೇ ಸಂಪರ್ಕರಹಿತವಾಗಿ ಸೇವೆಗಳನ್ನು ಪಡೆಯಲು ಅವಕಾಶಗಳಿರುವದರಿಂದ ಹೊಸ ಆರ್ಟಿಓ ಕಚೇರಿಗಳ ಸ್ಥಾಪನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಸಾರ್ವಜನಿಕರಿಗೆ ವಾಹನ ಅನುಜ್ಞಾ ಪತ್ರ,ವಾಹನ ನೋಂದಣಿಯ ಸ್ಮಾರ್ಟ್ ಕಾರ್ಡ್ಗಳನ್ನು ಅವರ ಮನೆಯ ವಿಳಾಸಗಳಿಗೆ ಅಂಚೆ ಮೂಲಕ ತಲುಪಿಸಲಾಗುತ್ತಿದೆ.ವಾಹನ-4,ಸಾರಥಿ-4 ಮತ್ತು ಇ-ಪೇಮೆಂಟ್ ಆಫ್ ಟ್ಯಾಕ್ಸ್ನಂತಹ ಆನ್ಲೈನ್ ಸೇವೆಗಳನ್ನು ರಾಜ್ಯದ ಎಲ್ಲಾ ಕಚೇರಿಗಳಲ್ಲಿ ಜಾರಿಗೊಳಿಸಲಾಗಿದೆ.ಕರ್ನಾಟಕ -1,ಬೆಂಗಳೂರು -1 ಮತ್ತು ಮೊಬೈಲ್-1 ಆ್ಯಪ್ಗಳ ಮೂಲಕವೂ ವಾಹನಗಳ ಮಾಹಿತಿ,ವಿವರಗಳನ್ನು ಪಡೆಯಬಹುದಾಗಿದೆ.ಇ-ಆಡಳಿತ ಇಲಾಖೆಯ ಗ್ರಾಮ ಒನ್ ಮತ್ತು ಜನಸೇವಕ ಯೋಜನೆಗಳಡಿಯೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಸಾರಿಗೆ ಇಲಾಖೆಯಲ್ಲಿ ಯಾವುದೇ ಹೊಸ ಕಚೇರಿಗಳನ್ನು ಪ್ರಾರಂಭಿಸುವ ಅವಶ್ಯಕತೆ ಉದ್ಭವಿಸುವುದಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಸದನದಲ್ಲಿ ವಿವರಿಸಿದರು.












Click it and Unblock the Notifications