ಆಪರೇಶನ್ ಕಮಲಕ್ಕೆ ಮೇ 7ರ ಮಹೂರ್ತ: 4 ಘಟಾನುಘಟಿಗಳು ಬಿಜೆಪಿಗೆ
ಬೆಂಗಳೂರು, ಮೇ 7: ಚುನಾವಣಾ ವರ್ಷದಲ್ಲಿ ಭ್ರಷ್ಟಾಚಾರ, ಅಕ್ರಮ ನೇಮಕಾತಿ ವಿಚಾರದಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ತಿರುಗಿ ಬೀಳುತ್ತಿದ್ದರೆ, ಬಿಜೆಪಿ ಸೈಲೆಂಟಾಗಿ ಬೇರೆ ಪಕ್ಷದ ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.
ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಮತ್ತು ಕೋಲಾರ ವಿಭಾಗದ ನಾಲ್ವರು ಮುಖಂಡರು ಶನಿವಾರ (ಮೇ 7) ಬಿಜೆಪಿ ಸೇರುವ ಮಹೂರ್ತ ಫಿಕ್ಸ್ ಆಗಿದೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ಆದರೆ, ಕೋಲಾರ ಜಿಲ್ಲೆಯ ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿರುವುದಕ್ಕೆ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ತೀವ್ರ ಪ್ರತಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸ್ಥಳೀಯ ನಾಯಕರ ದೊಡ್ಡ ದಂಡು ಬಿಜೆಪಿ ಪ್ರಮುಖರನ್ನು ಭೇಟಿಯಾಗಿ ಸೇರಿಸಿಕೊಳ್ಳದಂತೆ ಎಚ್ಚರಿಸಿದೆ. ಆದರೂ, ಪಕ್ಷ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದೆ.
ಬಿಜೆಪಿ ಪ್ರಭಾವ ಕಮ್ಮಿಯಿರುವ ಪ್ರದೇಶಗಳಲ್ಲಿ ಪಕ್ಷ ಬಲವರ್ಧನೆಗೆ ಗಮನ ಕೊಡಿ ಎನ್ನುವ ವರಿಷ್ಠರ ಫರ್ಮಾನಿಗೆ ರಾಜ್ಯ ನಾಯಕರು ಅಸಡ್ಡೆ ತೋರಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಟ್ಟಿಗೆ ಕಾರಣವಾಗಿದೆ ಎನ್ನುವ ಮಾತಿದೆ. ಈ ಕಾರಣಕ್ಕಾಗಿಯೇ ಅಮಿತ್ ಶಾ, ಬೆಂಗಳೂರು ಭೇಟಿಯ ವೇಳೆ ಕಾರ್ಯಕರ್ತರು/ಮುಖಂಡರನ್ನು ಭೇಟಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಸೇರ್ಪಡೆಗೊಳ್ಳುತ್ತಿರುವ ನಾಲ್ವರು ಮುಖಂಡರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಮಾಲೂರು ಕ್ಷೇತ್ರದಿಂದ ಸ್ಪ್ರಧಿಸಿದ್ದ ಜೆಡಿಎಸ್ ಯುವ ನಾಯಕ ಕೆ.ಎಸ್.ಮಂಜುನಾಥ ಗೌಡ
ಕಳೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಯುವ ನಾಯಕ ಕೆ.ಎಸ್.ಮಂಜುನಾಥ ಗೌಡ ಇಂದು ಬಿಜೆಪಿ ಸೇರಲಿದ್ದಾರೆ. ಆದರೆ, ಮಾಲೂರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮಂಜುನಾಥ ಗೌಡ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರು ಕಾಂಗ್ರೆಸ್ಸಿನ ಕೆ.ವೈ.ನಂಜೇಗೌಡ ವಿರುದ್ದ ಸೋಲುಂಡಿದ್ದರು. ಆದರೂ, ಬಿಜೆಪಿಯ ಕೃಷ್ಣಯ್ಯ ಶೆಟ್ಟಿಯವರನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಮಂಜುನಾಥ ಗೌಡ ಯಶಸ್ವಿಯಾಗಿದ್ದರು. ಹಲವು ದಿನಗಳಿಂದ ಮಂಜುನಾಥ ಗೌಡ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ನಿವೃತ್ತ IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ
2018ರ ಲೋಕಸಭಾ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ನಿವೃತ್ತ IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಕೂಡಾ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. 2018ರಲ್ಲಿ, ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ, ತೆರವಾದ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಲು ಅಶ್ವಿನ್ ಬಯಸಿದ್ದರು. ಆದರೆ, ಕುಮಾರಸ್ವಾಮಿ ಇವರ ಬದಲಿಗೆ ಎಲ್.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿದ್ದರು.

ವರ್ತೂರು ಪ್ರಕಾಶ್ ಕೂಡಾ ಇಂದು ಬಿಜೆಪಿ ಸೇರಲಿದ್ದಾರೆ
ಕರ್ನಾಟಕ ರಾಜಕಾರಣದಲ್ಲಿ ಹಲವು ಪಕ್ಷದಲ್ಲಿದ್ದು ರುಚಿ ನೋಡಿರುವ ವರ್ತೂರು ಪ್ರಕಾಶ್ ಕೂಡಾ ಇಂದು ಬಿಜೆಪಿ ಸೇರಲಿದ್ದಾರೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆಗೂಡಿ ಬಹಿರಂಗವಾಗಿಯೇ ಇವರು ಬಿಜೆಪಿ ಪರ ಕೆಲಸ ಮಾಡಿದ್ದರು. ಮಾಜಿ ಸಚಿವ ಮತ್ತು ಎರಡು ಬಾರಿ ಶಾಸಕರಾಗಿರುವ ವರ್ತೂರು ಪ್ರಕಾಶ್ ಸೇರ್ಪಡೆಯಿಂದ ಬಿಜೆಪಿಗೆ ಬಲ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ದಿವಂಗತ ಎಸ್.ಡಿ.ಜಯರಾಮ್ ಪುತ್ರ ಅಶೋಕ್ ಜಯರಾಂ
ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಮ್ ಪುತ್ರ ಅಶೋಕ್ ಜಯರಾಂ ಕೂಡಾ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ಜಯರಾಂ ಹೊಂದಿದ್ದರು, ಆದರೆ ಟಿಕೆಟ್ ಧಕ್ಕಿರಲಿಲ್ಲ. ಮಾರ್ಚ್ ನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಜಯರಾಂ ಭಾಗವಹಿಸುವ ಮೂಲಕ ಪಕ್ಷ ಸೇರ್ಪಡೆ ಖಚಿತ ಪಡಿಸಿದ್ದರು.












Click it and Unblock the Notifications