ಜೆಡಿಎಸ್ ಸಮಾವೇಶದಲ್ಲಿ ಮೋದಿ ಬಗ್ಗೆ ದೇವೆಗೌಡರಿಗೆ ಕಾಡಿದ ಪ್ರಶ್ನೆಗಳು
ಕಪ್ಪುಹಣದ ವಿಚಾರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಪ್ರಧಾನಿ ಮೋದಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ, ಪ್ರಧಾನಿ ಕಪ್ಪುಹಣವನ್ನು ಬಳಸಲಿಲ್ಲವೇ ಎಂದು ಗೌಡ್ರು, ಮೋದಿವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು, ಡಿ 19: ವಿಷಯಾಧಾರಿತವಾಗಿ ಕೇಂದ್ರದ ಮೋದಿ ಸರಕಾರವನ್ನು ಹೊಗಳುವ ಮತ್ತು ತೆಗಳುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕಪ್ಪುಹಣ ಹೊರತೆಗೆಯುತ್ತೇನೆ ಎನ್ನುವ ಪ್ರಧಾನಿ ಹೇಳಿಕೆಯ ವಿರುದ್ದ ಹರಿಹಾಯ್ದಿದ್ದಾರೆ.
ಭಾನುವಾರ (ಡಿ 18) ನಗರದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಗೌಡ್ರು, ಪ್ರಧಾನಿ ಮೋದಿಯವರಿಂದ ಇಂತಹ ಕೆಟ್ಟ ರಾಜಕಾರಣ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. (ಸೂಟು ಬೂಟಿನ ಸರಕಾರ ಕಿತ್ತೊಗೆಯುತ್ತೇವೆ)
ಜನಸಾಮಾನ್ಯರು ಎರಡು ಸಾವಿರ ರೂಪಾಯಿ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿಯನ್ನು ಮೋದಿ ನಿರ್ಮಿಸಿದ್ದಾರೆ. ಚೆಕ್ ನಲ್ಲಿ ಲಂಚ ತೆಗೆದುಕೊಂಡವರ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಳ್ಳುತ್ತಿದೆ, ಇದ್ಯಾವ ರಾಜ್ಯಭಾರ ಸ್ವಾಮಿ ಎಂದು ದೇವೇಗೌಡ್ರು, ಮೋದಿಯವರನ್ನು ಪ್ರಶ್ನಿಸಿದ್ದಾರೆ.
ನಾನು ಸತ್ತ ಮೇಲೆ ನನ್ನ ಸಮಾಧಿಗೆ ಬಂದು ಹಾರ ಹಾಕಿ ಎಂದು ಹೇಳಿದ ಮೇಲೆ ಮೋದಿ ಸರಕಾರ ಎಚ್ಚೆತ್ತುಗೊಂಡು ಕಾವೇರಿ ನಿರ್ವಹಣಾ ಮಂಡಲಿ ರಚಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿತ್ತು ಎಂದು ಗೌಡ್ರು ಹೇಳಿದ್ದಾರೆ.
ಮೋದಿಯವರ ಕಾರ್ಯವೈಖರಿಯಿಂದ ಬಿಜೆಪಿಯ ಹಿರಿಯ ಮುಖಂಡರು ಬೇಸರಗೊಂಡಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಅವರ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರದಿಂದ ಆಹ್ವಾನ ಬಂದಿದೆ. ಸಾಧ್ಯವಾದರೆ ಹೋಗುತ್ತೇನೆ ಎಂದು ಗೌಡ್ರು ಹೇಳಿದ್ದಾರೆ.
ಸಭೆಯಲ್ಲಿ ಅಡ್ವಾಣಿಯನ್ನು ಕೊಂಡಾಡಿದ ಗೌಡ್ರು ಮತ್ತು ಮೋದಿಗೆ ಕೇಳಿದ ಪ್ರಶ್ನೆಗಳು, ಮುಂದೆ ಓದಿ..

ಅಡ್ವಾಣಿ ಹೊಗಳಿದ ದೇವೇಗೌಡ
ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಎಲ್ ಕೆ ಅಡ್ವಾಣಿ, ಇಂದು ಅವರ ಮಾತನ್ನು ಕೇಳುವವರು ಯಾರೂ ಇಲ್ಲ. ರಾಜೀನಾಮೆ ನೀಡುತ್ತೇನೆಂದು ಅಡ್ವಾಣಿ ಹೇಳುತ್ತಿರುವುದು ನೋವಿನ ವಿಷಯ. ದೇಶದ ರಾಜಕಾರಣದಲ್ಲಿ ಅಡ್ವಾಣಿಯಂತಹ ವ್ಯಕ್ತಿ ಅಪರೂಪ. ನಮ್ಮ ಹೊಸ ಜೆಡಿಎಸ್ ಕಚೇರಿ ಉದ್ಘಾಟನೆಗೆ ಅಡ್ವಾಣಿಯವರನ್ನು ಆಹ್ವಾನಿಸುತ್ತೇನೆ - ದೇವೇಗೌಡ

ಗೌಡ್ರ ಹೇಳಿಕೆ
ಲೋಕಸಭಾ ಚುನಾವಣೆಯ ವೇಳೆಯಿಂದ ಈಗಿನವರೆಗೂ ಕಪ್ಪುಹಣ ಹೊರಗೆ ತೆಗೆಯುತ್ತೇನೆಂದು ಮೋದಿ ಹೇಳುತ್ತಿದ್ದಾರೆ. ಕಪ್ಪುಹಣ ಹೊರಗೆ ತೆಗೆಯಬೇಡಿ ಎಂದು ಯಾರಾದರೂ ಮೋದಿಯವರನ್ನು ತಡೆದಿದ್ದಾರೆಯೇ? ಯಾರದರೂ ತಡೆದಿದ್ದರೆ ಅವರ ಹೆಸರನ್ನು ಬಹಿರಂಗಗೊಳಿಸಿ - ದೇವೇಗೌಡ

ವೈಟ್ ಮನಿ
ಕಪ್ಪುಹಣದ ಬಗ್ಗೆ ಇಷ್ಟೊಂದು ಮಾತನಾಡುವ ಮೋದಿ, ಚುನಾವಣೆಯ ಖರ್ಚಿಗೆ ಕಪ್ಪುಹಣ ಬಳಸಲಿಲ್ಲವೇ? ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸಿತು., ವೈಟ್ ಮನಿಯಿಂದ ಅಷ್ಟೊಂದು ಖರ್ಚು ಮಾಡಲು ಸಾಧ್ಯವೇ? ಜನರನ್ನು ಯಾಕೆ ಮೂರ್ಖರನ್ನಾಗಿಸುತ್ತಿದ್ದೀರಿ - ಮೋದಿಗೆ ಎಚ್ಡಿಡಿ ಪ್ರಶ್ನೆ.

ಕಾರ್ಪೋರೇಟ್ ಕಂಪೆನಿಗಳು
ಮೋದಿ ಚುನಾವಣೆಯ ವೇಳೆ ಕಾರ್ಪೋರೇಟ್ ಕಂಪೆನಿಗಳಿಂದ ಸಹಾಯ ಪಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರೇನು, ವೈಟ್ ಮನಿಯನ್ನು ಬಿಜೆಪಿಗೆ ನೀಡಿದ್ದರೇ ಎಂದು ಮೋದಿಯನ್ನು ಗೌಡ್ರು ಪ್ರಶ್ನಿಸಿದ್ದಾರೆ.

ಹೆಲಿಕಾಪ್ಟರ್
ಚುನಾವಣೆಯ ಪ್ರಚಾರಕ್ಕೆ ಮೋದಿ ಎಂಟು ಹೆಲಿಕಾಪ್ಟರ್ ಬಳಸಿಕೊಂಡರಲ್ಲಾ, ಅದು ಕಪ್ಪು ಹಣವಲ್ಲವೇ? ಮೋದಿಯವರಿಂದ ಇಂತಹ ರಾಜಕಾರಣ ನಿರೀಕ್ಷಿಸಿರಲಿಲ್ಲ ಎಂದು ಗೌಡ್ರು, ಮೋದಿ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications