ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ಶ್ರೀನಾಥ್
ಬೆಂಗಳೂರು ಜುಲೈ 03: ಮಾಜಿ ಸಂಸದ ಎಚ್. ಜಿ. ರಾಮುಲು ಪುತ್ರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ್ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಂತಾದವರು ಉಪಸ್ಥಿತರಿದ್ದರು.
ಡಿ. ಕೆ. ಶಿವಕುಮಾರ್ ಮಾತನಾಡಿ, "ಏಳೆಂಟು ತಿಂಗಳ ಹಿಂದೆ ಶ್ರೀನಾಥ್ ಅವರ ತಂದೆ ಎಚ್. ಜಿ. ರಾಮುಲು ಭೇಟಿ ಮಾಡಲಾಗಿತ್ತು. ಹಳೇ ಕಹಿ ಘಟನೆಗಳನ್ನು ಮರೆತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ಮನವಿ ಮಾಡಿದ್ದೆ" ಎಂದರು.
"ಕಾಂಗ್ರೆಸ್ ಮುಖಂಡರ ಮಾತಿಗೆ ಬೆಲೆ ಕೊಟ್ಟು ಇದೀಗ ಶ್ರೀನಾಥ್ ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂಬ ಷರತ್ತನ್ನು ನಾವು ವಿಧಿಸಿದ್ದೇವೆ. ಎಚ್. ಜಿ. ರಾಮುಲು ಪ್ರತಿನಿಧಿಸಿದ್ದ ಕೊಪ್ಪಳ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷವಾದ ದಿನ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ
"ಶ್ರೀನಾಥ್ ಹಾಗೂ ಅವರ ಬೆಂಬಲಿಗರ ಸೇರ್ಪಡೆಗೆ ಹೈಕಮಾಂಡ್ ಕೂಡ ಒಪ್ಪಿದೆ. ಅಲ್ಲಂ ವೀರಭದ್ರಪ್ಪ ಸಮಿತಿ ಕೂಡ ಎಲ್ಲರ ಜೊತೆ ಮಾತನಾಡಿದೆ. ನಾನು ಜಿಲ್ಲಾಧ್ಯಕ್ಷರು, ಇಕ್ಬಾಲ್ ಅನ್ಸಾರಿ ಅವರ ಜತೆ ಮಾತುಕತೆ ನಡೆಸಿ, ಎಲ್ಲರ ಒಮ್ಮತದಿಂದ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಗಾಂಧಿ ಕುಟುಂಬದೊಂದಿಗೆ ಉತ್ತಮ ಸಂಬಂಧ
"ಗಾಂಧಿ ಕುಟುಂಬದ ಜೊತೆ ಮಾಜಿ ಸಂಸದ ಎಚ್. ಜಿ. ರಾಮುಲು ಕುಟುಂಬದ ಅತ್ಯುತ್ತಮ ಬಾಂಧವ್ಯ ಹೊಂದಿತ್ತು. ಇಂದಿರಾ ಗಾಂಧಿ ಅವರು ಅನೇಕ ಬಾರಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಕಾರಣಾಂತರಗಳಿಂದ ಕೆಲವು ವರ್ಷಗಳ ಹಿಂದೆ ಅವರು ಪಕ್ಷ ತೊರೆದಿದ್ದರು. ಒಂದೇ ಮನೆ ಎಂದ ಮೇಲೆ ಮುನಿಸು, ಕೋಪ ಎಲ್ಲ ಸಹಜ" ಎಂದು ಹಳೇ ಘಟನೆ ಕುರಿತು ಡಿ. ಕೆ. ಶಿವಕುಮಾರ್ ವಿವರಿಸಿದರು.

ಮೂರು ಕುಟುಂಬಗಳ ಭೇಟಿ
"ಎಸ್. ಎಂ. ಕೃಷ್ಣ ಸಿಎಂ ಆಗುವ ಮುನ್ನ ಸೋನಿಯಾ ಗಾಂಧಿ ಮೂರು ಕುಟುಂಬಗಳನ್ನು ಭೇಟಿ ಮಾಡಲು ಸೂಚಿಸಿದ್ದರು. ಅವುಗಳಲ್ಲಿ ಒಂದು ಎಚ್. ಜಿ. ರಾಮುಲು ಅವರ ಕುಟುಂಬವೂ ಒಂದು. ಅದರಂತೆ ಎಸ್. ಎಂ. ಕೃಷ್ಣ ಅವರೊಂದಿಗೆ ಎಚ್. ಜಿ. ರಾಮುಲು ಮನೆಗೆ ಭೇಟಿ ಮಾಡಿ ಮರಳಿ ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದ್ದೆವು. ಇವರ ಕುಟುಂಬದ ಜತೆಗೆ ಗೋವಿಂದ ರೆಡ್ಡಿ ಹಾಗೂ ಸಚ್ಚಿದಾನಂದ ಸ್ವಾಮಿ ಅವರ ಕುಟುಂಬಗಳಿಗೆ ನಾವು ಭೇಟಿ ನೀಡಿ ಮಾತುಕತೆ ನಡೆಸಿದ್ದೆವು" ಎಂದು ಡಿ. ಕೆ. ಶಿವಕುಮಾರ್ ನೆನೆಪಿಸಿಕೊಂಡರು.
Recommended Video

5 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ
"ಕಾಂಗ್ರೆಸ್ ಸಮೀಕ್ಷೆ ಪ್ರಕಾರ ಈ ಬಾರಿ ಕೊಪ್ಪಳ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಇದನ್ನು ನಿಜ ಮಾಡಲು ನೀವೆಲ್ಲರೂ ಕೆಲಸ ಮಾಡಬೇಕು ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಕರೆ ನೀಡಿದರು. ಪ್ರಸ್ತುತ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಕೊಪ್ಪಳದಲ್ಲೇ ದೊಡ್ಡ ಮಟ್ಟದಲ್ಲಿ ಮಾಡಿ ಶ್ರೀನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಆಲೋಚನೆ ಇತ್ತು. ಕಾರಣಾಂತರಗಳಿಂದ ಆಗಿಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶಿವರಾಜ್ ತಂಗಡಗಿ, ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಶಾಸಕರಾದ ಹುಲಗೇರಿ, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications