Siddaramaiah Government: ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಸಿಎಂ ಸೈಲೆಂಟ್ ಡಿಸಿಎಂ ವೈಲೆಂಟ್!: ಆರ್. ಅಶೋಕ್ ಕಿಡಿ
ಬೆಂಗಳೂರು, ಮೇ 26: ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟ್, ಡಿಸಿಎಂ ಡಿಕೆ ಶಿವಕುಮಾರ್ ವೈಲೆಂಟ್ ಇದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ಡಬಲ್ ಸ್ಟೇರಿಂಗ್ ಸರ್ಕಾರವಾಗಿದೆ. ಸಭೆಗಳಲ್ಲಿ ಮುಖ್ಯಮಂತ್ರಿಗಳು ಮಾತನಾಡುದಕ್ಕಿಂತ ಮೊದಲ ಡಿಸಿಎಂ ಮಾತನಾಡುತ್ತಾರೆ. ಹೊಸ ಸರ್ಕಾರದಲ್ಲಿ ಸಿಎಂ ಸೈಲೆಂಟ್ ಡಿಸಿಎಂ ವೈಲೆಂಟ್ ಆಗಿದ್ದಾರೆ. ಡಿಸಿಎಂ ಅವರು ಅಧಿಕಾರಿಗಳಿಗೆ, ಪೊಲೀಸರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಹೇಳಿದ ಆರ್ ಅಶೋಕ್ ಅವರು ಡಿ ಕೆ ಶಿವಕುಮಾರ್ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್ ಚುನಾವಣೆಗೆ ಮೊದಲು ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಈಡೇರಿಸಬೇಕು, ಅದನ್ನು ಈವರೆಗೆ ಜಾರಿ ಮಾಡದೇ ಇರುವುದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಉಚಿತ ಘೋಷಣೆ ಮಾಡಿ ಕರೆಂಟ್ ಉಚಿತ ಎಂದು ಹೇಳಿದೆ. ಇನ್ಮುಂದೆ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಆರ್. ಅಶೋಕ್ ಕರೆ ಕೊಟ್ಟರು. ಅಷ್ಟೇ ಅಲ್ಲದೆ, ಮಹಿಳೆಯರು ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬಂದು ಒಂದೊಂದು ಗ್ಯಾರಂಟಿ ಕಾರ್ಡ್ ಹಿಡಿದರು. 24 ಗಂಟೆಗಳ ಒಳಗಡೆ ಮೊದಲ ಕ್ಯಾಬಿನೆಟ್ ನಲ್ಲಿ ಈ ತೀರ್ಮಾನ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಆದರೆ ಇನ್ನೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆಗೆ ಈಡೇರಿಸಿಲ್ಲ, ಬದಲಾಗಿ ಖಾತೆಗಳಿಗೆ ಗ್ಯಾರಂಟಿ ಕೊಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಟೀಕೆ ಮಾಡಿದರು.
ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಡಲು ಸಾಧ್ಯವೇ ಎನ್ನುವ ಡಿಸಿಎಂ ದಾರಿಯಲ್ಲಿ ಹೋಗುವವರಿಂದ ಮತ ಹಾಕಿಸಿದ್ದಾರೆ ಅಲ್ಲವೇ? ಎಲ್ಲರಿಗೂ ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಟ್ಟು ಈಗ ಅಪಮಾನ ಮಾಡುತ್ತೀರಲ್ಲಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಪ್ರತಿಯೊಬ್ಬರ ಮನೆಗೂ 200 ಯೂನಿಟ್ ಉಚಿತ ಎಂದಿದ್ದ ಸಿದ್ದರಾಮಯ್ಯರವರು ಈಗ ಷರತ್ತು ವಿಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ಡಬಲ್ ಸ್ಟಾಂಡರ್ಡ್ ಎಂದು ಆರ್.ಅಶೋಕ್ ಅವರು ಟೀಕಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು.'ಮಾವನ ಮನೆಗೆ ಹೋಗುವವರಿಗೆ, ಸೊಸೆ ಕರೆದುಕೊಂಡು ಬರಲು ಅತ್ತೆ ಹೋದರೆ ಫ್ರೀ, ಹಾಸನಕ್ಕೆ ಹೋಗಲು ಫ್ರೀ' ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಹಿಳೆಯರು ಯಾರೂ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ದ್ವಿಮುಖ ನೀತಿ ಅನಾವರಣ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಆರ್ಥಿಕ ಸಂಪನ್ಮೂಲದ ಬಗ್ಗೆ ಈಗ ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯನವರು 13 ಬಜೆಟ್ ಮಂಡಿಸಿದವರು. ನಿಮಗೆ ಮಾಹಿತಿ- ಜ್ಞಾನ ಇರಲಿಲ್ಲವೇ? ವಿದ್ಯುತ್ ಬಗ್ಗೆ ಅರಿವಿಲ್ಲವೇ? ಜ್ಞಾನ ಇಲ್ಲದೆ ನಿಮ್ಮ ಪ್ರಣಾಳಿಕೆ ಪ್ರಿಂಟ್ ಮಾಡಿದ್ದೀರಾ? ಎಂದು ಕೇಳಿದರು. ಜನ ನಗುವಂತಾಗಿದೆ ಅಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಪದವಿ ಪಡೆದ ನಿರುದ್ಯೋಗಿ ಯುವಕರಿಗೆ 3 ಸಾವಿರ, ಡಿಪ್ಲೊಮಾ ಆದವರಿಗೆ 1,500 ರೂಪಾಯಿ ಎಂದಿದ್ದೀರಿ. ಪ್ರಣಾಳಿಕೆಯಲ್ಲಿ ಎಲ್ಲರಿಗೆ ಎಂದು ಹೇಳಿದವರು ಈಗ ಶರ್ತಗಳಿವೆ ಎನ್ನುತ್ತೀರಿ. ಹೊಸದಾಗಿ ಪಾಸ್ ಆದವರಿಗೆ ಎನ್ನುತ್ತೀರಿ. ಗೆದ್ದ ಮೇಲೆ ಎಲ್ಲ ಕಂಡಿಷನ್. ಗೃಹಿಣಿಯರಿಗೆ 2 ಸಾವಿರ ವಿಷಯದಲ್ಲೂ ಹೀಗೆ ಮಾಡುತ್ತಿದ್ದೀರಿ. ಇದೆಲ್ಲವೂ ರಾಜ್ಯದ ಜನತೆಗೆ ಮಾಡಿದ ಮೋಸ. ಇದಕ್ಕೆ ಜನತೆ ಸಕಾಲದಲ್ಲಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಫ್ರೀ ಫ್ರೀ ವಿಚಾರವನ್ನು ದೂರವಿಟ್ಟು ವಿಷಯಾಂತರ ಮಾಡಲು ಆರೆಸ್ಸೆಸ್ ಬ್ಯಾನ್ ಮಾಡುವ ಮಾತನಾಡುತ್ತಿದ್ದಾರೆ. ನೀವು ಬಿಡಿ. ನಿಮ್ಮಪ್ಪ, ನಿಮ್ಮ ಅಜ್ಜಿ, ಮುತ್ತಾತನಿಗೇ ಬ್ಯಾನ್ ಮಾಡಲು ಆಗಲಿಲ್ಲ. ಸಂಸತ್ತಿನಲ್ಲಿ ಮೆಜಾರಿಟಿ ಇತ್ತು. ಆಗಲೇ ಬೇಳೆ ಬೇಯಲಿಲ್ಲ. ನೀವು ತಾಕತ್ತಿದ್ದರೆ, ದಮ್ಮಿದ್ರೆ, ಶಕ್ತಿ ಇದ್ರೆ ಬ್ಯಾನ್ ಮಾಡಿ. ನಿಮ್ಮ ಸರಕಾರ ಮೂರು ರಾಜ್ಯಗಳಲ್ಲಿವೆ. ಆರೆಸ್ಸೆಸ್ನ ಲಕ್ಷಾಂತರ ಶಾಖೆಗಳಿವೆ. ಆರೆಸ್ಸೆಸ್ ಮತ್ತು ಬಜರಂಗದಳ ಹಿಂದೂಗಳ ಧ್ವನಿ. ಹಿಂದೂಗಳ ಪರವಾಗಿ ನಿಲ್ಲುವ ಸಾರ್ವಜನಿಕ ಸಂಸ್ಥೆ ಎಂದು ತಿಳಿಸಿದರು.












Click it and Unblock the Notifications