ಅನಾರೋಗ್ಯ; ಆಸ್ಪತ್ರೆಯಲ್ಲಿಯೇ ರಾತ್ರಿ ಕಳೆದ ಡಿಕೆಶಿ
ಬೆಂಗಳೂರು, ಸೆಪ್ಟೆಂಬರ್ 13 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ. ಇಡಿ ವಶದಲ್ಲಿರುವ ಅವರು ಆಸ್ಪತ್ರೆಯಲ್ಲಿಯೇ ರಾತ್ರಿ ಕಳೆದಿದ್ದಾರೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ಗುರುವಾರ ಬೆಳಗ್ಗೆ ಇಡಿ ಅಧಿಕಾರಿಗಳು ಡಿ. ಕೆ. ಶಿವಕುಮಾರ್ರನ್ನು ಇಡಿ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರ ಸೂಚನೆಯಂತೆ ರಾತ್ರಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಲೋ ಬಿಪಿ, ಹೊಟ್ಟೆನೋವಿನಿಂದ ಬಳಲುತ್ತಿರುವ ಡಿ. ಕೆ. ಶಿವಕುಮಾರ್ರನ್ನು ರಾತ್ರಿ ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಯಿತು. ಅವರನ್ನು ಭೇಟಿ ಮಾಡಲು ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾವ ನಾಯಕರಿಗೂ ಅವಕಾಶವನ್ನು ನೀಡಿಲಿಲ್ಲ.

ಡಿ. ಕೆ. ಶಿವಕುಮಾರ್ ಸೆಪ್ಟೆಂಬರ್ 3ರಿಂದ ಇಡಿ ವಶದಲ್ಲಿದ್ದಾರೆ. ಇಂದು ಅವರ ಕಸ್ಟಡಿ ಅಂತ್ಯಗೊಳ್ಳಲಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ. ಡಿ. ಕೆ. ಶಿವಕುಮಾರ್ ಆರೋಗ್ಯ ಸುಧಾರಣೆಯಾಗದಿದ್ದಲ್ಲಿ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.
10 ದಿನಗಳ ಕಾಲ ಡಿ. ಕೆ. ಶಿವಕುಮಾರ್ ಇಡಿ ವಿಚಾರಣೆ ಎದುರಿಸಿದ್ದಾರೆ. ಆದ್ದರಿಂದ, ಇಂದು ಅವರ ಪರ ವಕೀಲರು ಜಾಮೀನು ನೀಡುವಂತೆ ಪ್ರಬಲವಾದ ವಾದ ಮಂಡಿಸುವ ನಿರೀಕ್ಷೆ ಇದೆ. ಇಡಿ ಇನ್ನೂ ವಿಚಾರಣೆ ಅಗತ್ಯವಿದೆ ಎನಿಸಿದರೆ 4 ದಿನಗಳ ಕಾಲ ವಶಕ್ಕೆ ಕೇಳಬಹುದು.
ಡಿ. ಕೆ. ಶಿವಕುಮಾರ್ಗೆ ಜಾಮೀನು ಸಿಕ್ಕಿದರೆ ಇಂದು ಇಡಿ ವಶದಿಂದ ಬಿಡುಗಡೆಯಾಗಲಿದ್ದಾರೆ. ಒಂದು ವೇಳೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದರೆ ತಿಹಾರ್ ಜೈಲು ಸೇರಬೇಕಾಗುತ್ತದೆ. ನ್ಯಾಯಾಲಯ ಕನಿಷ್ಠ 14 ದಿನಗಳ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಅವಕಾಶವಿದೆ.
ಮತ್ತೊಂದು ಕಡೆ ಡಿ. ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ವಿಚಾರಣೆ ಗುರುವಾರ ಪೂರ್ಣಗೊಂಡಿಲ್ಲ. ಶುಕ್ರವಾರ ಬೆಳಗ್ಗೆ 11ಗಂಟೆಗೆ ಇಡಿ ಕಚೇರಿಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.












Click it and Unblock the Notifications