ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನ
ಬೆಂಗಳೂರು, ಜುಲೈ 27: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಧರಂ ಸಿಂಗ್ ಗುರುವಾರ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ.
ತೀವೃ ಹೃದಯ ಸ್ತಂಭನದಿಂದ ಧರಂಸಿಂಗ್ ಮೃತಪಟ್ಟಿದ್ದಾರೆ. ಡಿಸೆಂಬರ್ 25, 1936ರಲ್ಲಿ ಗುಲ್ಬರ್ಗಾದ ಜೇವರ್ಗಿಯಲ್ಲಿ ಜನಿಸಿದ ಧರಂ ಸಿಂಗ್, ಕರ್ನಾಟಕದ ಹದಿನೇಳನೇ ಮುಖ್ಯಮಂತ್ರಿ ಆಗಿದ್ದರು. ಮೇ 28, 2004ರಿಂದ ಫೆಬ್ರವರಿ 3,2006ರವರೆಗೆ ಅವಧಿ ಮಧ್ಯೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರು.

ಬೆಂಗಳೂರಿನ ಆರ್ ಟಿ ನಗರದ ಮನೆಯಲ್ಲಿ ಗುರುವಾರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತದೆ. ಆ ನಂತರ ಅಂದರೆ ಶುಕ್ರವಾರ ಜೇವರ್ಗಿಗೆ ತೆಗೆದುಕೊಂಡು ಹೋಗಿ ಅಲ್ಲೇ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಸಿಂಗ್ ಅವರ ಮಗ ಡಾ.ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಧರಂ ಸಿಂಗ್, ಅಜಾತಶತ್ರು ಎಂದೇ ಹೆಸರಾಗಿದ್ದವರು. ಧರಂ ಸಿಂಗ್ ನಿಧನಕ್ಕೆ ವಿವಿಧ ಪಕ್ಷಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications