'ಕಾವೇರಿ ಕೂಗು' ನಮ್ಮದಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ
ಬೆಂಗಳೂರು, ಮಾರ್ಚ್ 4: ಕಾವೇರಿ ನದಿ ಹರಿಯುವ ತೀರಗಳಲ್ಲಿ ಗಿಡಗಳನ್ನು ನೆಡುವ 'ಕಾವೇರಿ ಕೂಗು' ಕಾರ್ಯಕ್ರಮಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. 'ಕಾವೇರಿ ಕೂಗು' ಅಭಿಯಾನವು ಸರ್ಕಾರದ ಕಾರ್ಯಕ್ರಮ ಎಂಬಂತೆ ಬಿಂಬಿಸಿ ಜಗ್ಗಿ ವಾಸುದೇವ್ ಅವರ ಈಶಾ ಪ್ರತಿಷ್ಠಾನವು ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಅರಣ್ಯ ಇಲಾಖೆ ಈ ಸ್ಪಷ್ಟನೆ ನೀಡಿದೆ.
ಈ ಕುರಿತು ಪತ್ರಿಕೆಗಳಲ್ಲಿ ಸಾರ್ವಜನಿಕ ಸುತ್ತೋಲೆ ಹೊರಡಿಸಿರುವ ರಾಜ್ಯ ಅರಣ್ಯ ಇಲಾಖೆ, ''ಈಶಾ ಫೌಂಡೇಷನ್/ಈಶಾ ಔಟ್ರೀಚ್ ಆರಂಭಿಸಿರುವ 'ಕಾವೇರಿ ಕೂಗು' ಎಂಬ ಹೆಸರಿನ ಯೊಜನೆಯು ಕರ್ನಾಟಕ ಸರ್ಕಾರದ ಯೋಜನೆಯಲ್ಲ ಎಂದು ಪ್ರತಿಯೊಬ್ಬರಿಗೂ ಸ್ಪಷ್ಟೀಕರಣ ನೀಡುತ್ತಿದ್ದೇವೆ'' ಎಂದು ತಿಳಿಸಿದೆ.
''ಇನ್ನೂ ಮುಂದುವರಿದು, ಅವರ ಈ ಯೋಜನೆಯ ಭಾಗವಾಗಿ ಗಿಡಗಳನ್ನು ನೆಡಲು ಕರ್ನಾಟಕ ಸರ್ಕಾರವು ಯೋಜನೆಗೆ ಅನುದಾನವನ್ನಾಗಲೀ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನಾಗಲೀ ನೀಡಿಲ್ಲ ಮತ್ತು ಗಿಡಗಳನ್ನು ನೆಡುವುದು ರೈತರ ಖಾಸಗಿ ಜಮೀನಿನಲ್ಲಿ ಮಾತ್ರವೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸುತ್ತೇವೆ'' ಎಂದು ಹೇಳಿದೆ.

ಕೋಟ್ಯಂತರ ರೂ ಹಣ ಸಂಗ್ರಹ
ಕಾವೇರಿ ಕೂಗು ಅಭಿಯಾನ ಯೋಜನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಕಳೆದ ವರ್ಷ ಸ್ಪಷ್ಟನೆ ನೀಡಿತ್ತು. ಕಾವೇರಿ ಕೂಗು ಅಭಿಯಾನವು ಸರ್ಕಾರದ ಕಾರ್ಯಕ್ರಮ ಎಂಬಂತೆ ಬಿಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲ. ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿಯೂ ಇಲ್ಲ ಎಂದು ಈಶಾ ಫೌಂಡೇಷನ್ ವಿರುದ್ಧ ಆರೋಪ ಕೇಳಿಬಂದಿತ್ತು.

ಸರ್ಕಾರದ ಪಾತ್ರವಿಲ್ಲ ಎಂದಿದ್ದ ಈಶಾ
ಈಶಾ ಔಟ್ರೀಚ್ ಈ ಯೋಜನೆ ಕೈಗೊಂಡಿದ್ದು, ನದಿ ತಪ್ಪಲಿನ ರೈತರ ಭೂಮಿಗಳಲ್ಲಿ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಇದರ ಬಗ್ಗೆ ವೆಬ್ಸೈಟ್ನಲ್ಲಿ ಕೂಡ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕಳೆದ ತಿಂಗಳು ಈಶಾ ಪ್ರತಿಷ್ಠಾನ ಹೈಕೋರ್ಟ್ಗೆ ತಿಳಿಸಿತ್ತು.

ಅನಧಿಕೃತ ಹಣ ಸಂಗ್ರಹ
ಈಶಾ ಫೌಂಡೇಷನ್ನ ಅಭಿಯಾನದಲ್ಲಿ ಜನರಿಂದ ಅನಧಿಕೃತ ಮತ್ತು ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲ ಎ.ವಿ. ಅಮರನಾಥನ್ ಕಳೆದ ವರ್ಷ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಭಿಯಾನಕ್ಕೆ ಸಾರ್ವಜನಿಕರಿಂದ ಬಲವಂತವಾಗಿ ದೇಣಿಗೆ ಸಂಗ್ರಹಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಅಧ್ಯಾತ್ಮದ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಹೇಳಿತ್ತು.
Recommended Video

ಯಾವ ಅಧಿಕಾರವಿದೆ?
ನೀವು ಹಣ ಸಂಗ್ರಹಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕಾರ ಪಡೆದುಕೊಂಡಿಲ್ಲ. ಯಾವ ಅಧಿಕಾರದಲ್ಲಿ ನೀವು ರೈತರಿಂದ ಹಣ ಸಂಗ್ರಹಿಸುತ್ತಿದ್ದೀರಿ? ನಿಮ್ಮದು ನೋಂದಾಯಿತ ಸಂಸ್ಥೆಯಲ್ಲ. ಅದನ್ನು ಯಾರು ಯಾವ ಕಾನೂನಿನ ಅಡಿಯಲ್ಲಿ ಸ್ಥಾಪಿಸಿದರು? ನದಿ ಪುನಶ್ಚೇತನದ ಕುರಿತು ಅರಿವು ಮೂಡಿಸುವುದು ಒಳ್ಳೆಯ ಉದ್ದೇಶ ಸರಿ. ಆದರೆ ಅದಕ್ಕಾಗಿ ಜನರು ಹಣ ನೀಡುವಂತೆ ಒತ್ತಾಯ ಮಾಡುವುದು ಸರಿಯಲ್ಲ ಎಂದು ಕಳೆದ ವರ್ಷ ತರಾಟೆಗೆ ತೆಗೆದುಕೊಂಡಿತ್ತು.












Click it and Unblock the Notifications