ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆ ಬಿಸಾಕಬೇಕಿದೆ: ದೇವನೂರು
ಮಂಗಳೂರು, ಡಿ 20: ಭಗವದ್ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕುವೆಂಪು ದರ್ಶನದ ಪ್ರತಿಮಾ ದೃಷ್ಠಿ ಪಡೆದರೆ ಇದು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಪ್ರತಿಕೃತಿ ದೃಷ್ಠಿಗೆ ಕಟ್ಟುಬಿದ್ದು ಒದ್ದಾಡುತ್ತಿದ್ದೇವೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.
ನಗರದ ನಂತೂರು ಶಾಂತಿಕಿರಣದಲ್ಲಿ ಅಭಿಮತ ಸಂಸ್ಥೆಯು ದೇಶ ಕಾಲ ಮುಖಾಮುಖಿ ಎಂಬ ಆಶಯದೊಂದಿಗೆ ಆಯೋಜಿಸಿರುವ ಎರಡು ದಿನಗಳ 'ಜನನುಡಿ-2015' ಕಾರ್ಯಕ್ರಮವನ್ನು ಶನಿವಾರ (ಡಿ19) ಬೆಳಿಗ್ಗೆ ಉದ್ಘಾಟಿಸಿ ಮಾತನಾಡುತ್ತಿದ್ದ ದೇವನೂರು, ನಾನು ಭಗವದ್ಗೀತೆಯ ಮೇಲೆ ಕಣ್ಣಾಡಿಸಿದೆ.
ಅದರೊಳಗೆ 'ಬುದ್ದಿಸಂ'ನ ಅಂಶಗಳು ಬಹಳಷ್ಟಿವೆಯಲ್ಲಾ ಅಂತ ಅನ್ನಿಸಿತು. ಆಳಕ್ಕೆ ಹೋಗುವ ಪಾಂಡಿತ್ಯ ನನಗಿರಲಿಲ್ಲ. ಆದರೆ ಇಲ್ಲಿ ಏನೋ ಒಂದು ವಂಚನೆ ನಡೆದಿದೆ ಎಂದು ನನಗೆ ಅನಿಸತೊಡಗಿತು ಎಂದು ದೇವನೂರು ಬೇಸರ ವ್ಯಕ್ತ ಪಡಿಸಿದ್ದಾರೆ. (ಪ್ರಶಸ್ತಿ ಸಿಕ್ಕಿರುವುದು ನನಗಲ್ಲ, ನನ್ನ ಕೃತಿಗೆ: ತಿರುಮಲೇಶ್)
ಕುವೆಂಪು ಅವರು ಗೀತೆಯನ್ನು ಒಪ್ಪಿಕೊಳ್ಳುತ್ತಾರೆ. ಮನಃಶಾಸ್ತ್ರ ಪ್ರಾಕೃತಿಕ ಎಂಬಂತೆ ಇಡೀ ಜಗತ್ತಿಗೆ ಅವರು ಅನ್ವಯಿಸುತ್ತಾರೆ. ಹಿಂದೂಗಳ ವರ್ಣ ಜಾತಿಗಳಿಗೆ ಹುಟ್ಟನ್ನು ಅನ್ವಯಿಸಿ ಗೀತೆ ಹಾಡುವವರಿಗೆ ಕುವೆಂಪು ಹೀಗೆ ಕರೆ ಕೊಡುತ್ತಾರೆ. ಹಾಗಾದರೆ ನಿಮ್ಮ ಶ್ರೀಕೃಷ್ಣ ಭಗವಂತನಲ್ಲ. ಆವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ ಎಂದು ದೇವನೂರು ಹೇಳಿದ್ದಾರೆ. (ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ)
ಒಂದು ವೇಳೆ ನೀವು ಹೇಳಿದಂತೆ ವರ್ಣ, ಜಾತಿ, ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲಾ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತ ಹೇಳಿ ಸುಮ್ಮನಿರುವುದಕ್ಕೆ ಆದೀತೆ ಎಂದು ಕುವೆಂಪು ಸಾಲುಗಳನ್ನು ಉಲ್ಲೇಖಿಸಿ ದೇವನೂರು ಹೇಳಿದ್ದಾರೆ. ಮುಂದೆ ಓದಿ.
ಅನುಪಮಾ ಅವರ ಪ್ರಾಸ್ತಾವಿಕ ನುಡಿ
ಆಶಯ ಭಾಷಣ ಮಾಡಿದ ಲೇಖಕಿ ಡಾ. ಎಚ್.ಎಸ್. ಅನುಪಮ ಅವರು, ಇಂದು ಒಂದು ಬರೆಯುವ ಮೊದಲೇ ನಮ್ಮ ಸಾಲುಗಳನ್ನು ಕತ್ತರಿಸುವಂತಹ, ಮಾತಿಗೇ ಮೊದಲೇ ಬಾಯಿಗೆ ಬೀಗ ಹಾಕುವಂತದ್ದು ಸಾಧ್ಯವಾಗಿರುವುದು ಹೇಗೆ? ಕಲಬುಗಿರ್ಯ ವ್ಯಕ್ತಿಯ ಕೊಲೆ ಕೇವಲ ಒಬ್ಬ ವ್ಯಕ್ತಿಯ ಕೊಲೆಯೇ? ಇದು ಹಲವು ಪ್ರತಿಕ್ರಿಯೆಗಳ ಪರಿಣಾಮ ಎಂದರೆ ಹೆದರಬೇಕಾಗಿಲ್ಲ. ಧರ್ಮ ಮತ್ತು ರಾಜಕೀಯ ಭ್ರಷ್ಟಗೊಂಡಿವೆ. ಒಳಗಿನ ಹೂರಣವನ್ನು ತೆಗೆದು ಹೊರಗಿನದನ್ನು ತುಂಬಲಾಗಿದೆ. ನಾನಾ ಕಾರಣಗಳಿಗೆ ಕೆರಳಿಸುವಿಕೆ ರಾಜಕಾರಣದ ತಂತ್ರವಾಗಿರುವಾಗ ಕೆರಳುವಿಕೆಯನ್ನು ಜಾಗೃತಿಯನ್ನಾಗಿ ಬದಲಾಯಿಸುವುದು ಹೇಗೆ ಎಂದು ನಾವು ಚರ್ಚಿಸಬೇಕಾಗಿದೆ ಅನುಪಮ ಹೇಳಿದ್ದಾರೆ.
ಭಾರತಕ್ಕೆ ದೇವರು ಮುಖ್ಯವಲ್ಲ, ಚಾತುರ್ವರ್ಣ ಮುಖ್ಯ
ಭಾರತಕ್ಕೆ ದೇವರು ಮುಖ್ಯವಲ್ಲ, ಚಾತುರ್ವರ್ಣ ಮುಖ್ಯ. ಹುಟ್ಟಿನಿಂದ ನಿರ್ಧರಿತವಾಗುವ ಚಾತುವರ್ಣವೇ ಧರ್ಮ ಅನ್ನುವುದು ತಿಳಿಯಿತು. ಇದನ್ನು ಒಪ್ಪದ ಬುದ್ದಿಸಂ ಪರದೇಶಿಯಾಗಬೇಕಾಯಿತು. ಜೈನ, ಲಿಂಗಾಯಿತಗಳು ಜಾತಿಯಾಗಿ ಹಿಡ ಮಾಡಿಸಿಕೊಂಡು ಇಲ್ಲಿ ಉಳಿದವು. ಹೀಗಾಗಿ ಗೀತೆಯೊಳಗೆ ಜರುಗಿರಬಹುದಾದ ವಂಚನೆ ಏನಿರಬಹುದು ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿತು. ಬುದ್ದಿಸಂನಲ್ಲಿ ಆಗ ಪ್ರಚಲಿತವಿದ್ದ ಉನ್ನತ ಮೌಲ್ಯಗಳನ್ನು ಹುಟ್ಟಿನಿಂದ ನಿರ್ಧರಿತವಾಗುವ ಜಾತಿವರ್ಣ ರೋಗಕ್ಕೆ ಗೀತೆಯಲ್ಲಿ ಬಲಿ ಕೊಟ್ಟಿರಬಹುದಾ? ಈಗ ನಾವೇನು ಮಾಡಬೇಕು ಎಂದು ಪ್ರಶ್ನಿಸಿಕೊಂಡ ದೇವನೂರು, ಗೀತೆಯಲ್ಲಿರುವ ತಾರತಮ್ಯದ ರೋಗದ ಗೆಡ್ಡೆಗಳಿಗೆ ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ - ದೇವನೂರು ಮಹಾದೇವ.
ಕಡಿದಾಳು ಶಾಮಣ್ಣ
ರೈತ ನಾಯಕ ಕಡಿದಾಳು ಶಾಮಣ್ಣ ಅವರು ಮಾತನಾಡುತ್ತಾ, ನುಡಿ ಎನ್ನುವುದು ಜನರ ಬದುಕಿನಿಂದ ಹೊರಹೋಗುತ್ತಿದೆ. ಸರ್ಕಾರಿ ಶಾಲೆಗಳು ಬಾಗಿಲು ಹಾಕುತ್ತಿವೆ. ಇಂತಹ ಸಂದರ್ಭದಲ್ಲಿ ನುಡಿಯನ್ನು ಬೆಳೆಸುವಂತಹ ಜನನುಡಿ ಕಾರ್ಯಕ್ರಮಗಳು ನಾಡಿನುದ್ದಗಲಕ್ಕೂ ನಿರಂತರವಾಗಿ ನಡೆಯಬೇಕು ಎಂದಿದ್ದಾರೆ.
ಫಾ. ಜಾನ್ ಫರ್ನಾಂಡಿಸ್
ಫಾ. ಜಾನ್ ಫರ್ನಾಂಡಿಸ್ ಮಾತನಾಡುತ್ತಾ, 2006ರಲ್ಲಿ ಮಂಗಳೂರು ವಿವಿಯಯಲ್ಲಿ 21ನೆಯ ಶತಮಾನದ ಅಂದಿನಲ್ಲಿ ದಕ್ಷಿಣ ಕನ್ನಡದ ಕುರಿತು ವಿಚಾರಗೋಷ್ಠಿ. ಪ್ರಗತಿ ಎಂದು ಹೇಳುತ್ತಾರೆ. 20 ವರ್ಷದ ಹಿಂದೆ ಮಂಗಳೂರು ಒಂದು ಚಿಕ್ಕ ಹಳ್ಳಿಯೋ ಪಟ್ಟಣವೋ ಎನಿಸುತ್ತಿತ್ತು. ಇಂದು ಕಾಣುವುದು ಕಾಂಕ್ರೀಟ್ ಜಂಗಲ್ ಮಾತ್ರ. ರಸ್ತೆಯಲ್ಲಿ ನಡೆದು ಹೋಗಲಿಕ್ಕೂ ಕಷ್ಟ. ಕೆಲ ದಿನಗಳಲ್ಲಿ ಒಳ್ಳೆಯ ಗಾಳಿಗಾಗಿ ಪರದಾಡಬೇಕಾಗುತ್ತದೆ. ಇದನ್ನು ಪ್ರಗತಿ ಎಂದು ಹೇಳಲಾಗುತ್ತದೆ ಎಂದು ಜಾನ್ ಫರ್ನಾಂಡಿಸ್ ವಿಷಾದ ವ್ಯಕ್ತ ಪಡಿಸಿದ್ದಾರೆ.
ಶ್ರೀನಿವಾಸ್ ಕಕ್ಕಿಲ್ಲಾಯ
ಲೇಖಕ ಡಾ.ಶ್ರೀನಿವಾಸ್ ಕಕ್ಕಿಲ್ಲಾಯ ಅವರು ಮಾತನಾಡುತ್ತಾ, ತನ್ನ ಭಯವನ್ನು ಇನ್ನೊಬ್ಬರ ಮೇಲೆ ಹಂಚಿ ಹರಡಿ ಹಿಂಸೆ ಉಂಟುಮಾಡುವುದು ಮತ್ತೊಂದು ಭಯ. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿಯವರಿಗೆ ಯಾವ ಭಯವೂ ಇರಲಿಲ್ಲ. ಅವರೆಲ್ಲ ಸತ್ಯ ಹೇಳುವಾಗ, ಸಂಶೋಧನೆ ಮಾಡುವಾಗ ಅವರಿಗೆ ಯಾವ ಭಯವೂ ಇರಲಿಲ್ಲ. ಆದರೆ ಅವರನ್ನು ಕೊಲೆ ಮಾಡಿದವರಿಗೆ ಈ ಹಿರಿಯರು ಆಡುವ ಸತ್ಯದ ಬಗ್ಗೆ ಭಯ ಇತ್ತು ಎಂದು ಕಕ್ಕಿಲ್ಲಾಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಭಾನು ಮುಷ್ತಾಕ್ ಅವರ ಅಧ್ಯಕ್ಷೀಯ ಭಾಷಣ
ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಾನು ಮುಷ್ತಾಕ್ ಮಾತನಾಡುತ್ತಾ, ಇಂದು ಮುಸ್ಲಿಮರು ಧಾರ್ಮಿಕ ಐಡೆಂಡಿಟಿಯೇ ಮುಖ್ಯವಾಗಬೇಕಾ ಅಥವಾ ಸಾಮಾಜಿಕ ಐಡೆಂಟಿಟಿಯಾ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಈ ಸಮಯದಲ್ಲಿ ಮುಸ್ಲಿಂ ಸಮುದಾಯದ ವಿವೇಕ ಮುಖ್ಯವಾಗುತ್ತದೆ. ಐಸಿಸ್ನ್ನು ಇಡೀ ಜಗತ್ತಿನ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಆದರೆ ಇದು ನಮ್ಮ ಪತ್ರಿಕೆಗಳ ಮುಖಪಟದ ಸುದ್ದಿಯಾಗಲಿಲ್ಲ. ಮುಸ್ಲಿಂ ಸಮುದಾಯ ಮತ್ತೆ ಒಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.