ಸಕಲೇಶಪುರದಲ್ಲಿ ಬಸ್ ಗೆ ಬೆಂಕಿ, ಹೂವಿನ ಹಡಗಲಿಯಲ್ಲಿ ಅಪಘಾತಕ್ಕೆ 3 ಸಾವು
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದರೆ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ
ಸಕಲೇಶಪುರ/ಹೂವಿನಹಡಗಲಿ, ಏಪ್ರಿಲ್ 1: ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದ ಘಟನೆ ಶನಿವಾರ ಮಧಾಹ್ನ ಹಾಸನ ಜಿಲ್ಲೆಯ ಸಕಲೇಶಪುರದ ಮಾರನಹಳ್ಳಿ ಬಳಿ ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಶಾರ್ಟ್ ಸರ್ಕೀಟ್ ಆಗಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ.
ಬಸ್ಸಿನಲ್ಲಿ ಮೂವತ್ತು -ಮೂವತ್ತೈದರಷ್ಟಿದ್ದ ಪ್ರಯಾಣಿಕರು ಕೂಡಲೇ ಇಳಿದುಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಬಸ್ಸು ಸಂಪೂರ್ಣ ಹೊತ್ತು ಉರಿದಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ.[ನೆಲಮಂಗಲ ಬಸ್ ಬೆಂಕಿಯಲ್ಲಿ ಗಾಯಗೊಂಡಿದ್ದ ಮಮತಾ ಸಾವು]

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಕೂಡಲೇ ಇಳಿಯಲು ಸಾಧ್ಯವಾಗಿದೆ. ಈ ಬಸ್ಸು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬೆಂಕಿ ನಂದಿಸುವ ಪ್ರಯತ್ನ ಸಫಲವಾಗಲಿಲ್ಲ.
ಅಪ್ಪ-ಮಗಳು ಸೇರಿ ಮೂವರು ಸಾವು: ಕೆಎಸ್ಆರ್ ಟಿಸಿ ಬಸ್ ಟೈರ್ ಸ್ಫೋಟವಾಗಿ ನಡೆದ ಸರಣಿ ಅಪಘಾತದಲ್ಲಿ ತಂದೆ-ಮಗಳು ಸೇರಿ ಮೂವರು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಮೈಲಾರ ಬಳಿ ಶನಿವಾರ ಸಂಭವಿಸಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಹೊನ್ನಪ್ಪ, ನಂದಾ ತಂದೆ-ಮಗಳು, ಮತ್ತೊಬ್ಬ ಬೈಕ್ ಸವಾರ ಮಹಾಂತೇಶ್ ಮೃತಪಟ್ಟಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications