ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್ಗೆ ಸಿಕ್ಕಿತು ಭೂಮಿ
ಬೆಂಗಳೂರು, ಫೆಬ್ರವರಿ 15; ಅಂತೂ ಇಂತೂ ರಕ್ಷಣಾ ಕ್ಷೇತ್ರದಲ್ಲಿ ಒಂದು ಉದ್ಯಮವಾಗಿರುವ ಎಡಿಡಿ ಇಂಜಿನಿಯರಿಂಗ್ ಭಗೀರಥ ಪ್ರಯತ್ನ ಮಾಡಿ ಸರ್ಕಾರದಿಂದ ತನ್ನ ಉತ್ಪಾದನಾ ಘಟಕ ಸ್ಥಾಪನೆಗೆ ತುಂಡು ಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭೂಮಿಯನ್ನು ನೀಡುವಂತೆ ಅರ್ಜಿ ಸಲ್ಲಿಸಿ 2018ರಿಂದ ಕೆಎಸ್ಐಐಡಿಸಿ ಕಚೇರಿಗೆ ಎಡತಾಕಿದರೂ ಅಧಿಕಾರಿಗಳ ರೆಡ್ ಟೇಪಿಸಂಗೆ ಬಲಿಯಾಗಿ ಭೂಮಿ ಲಭ್ಯವಾಗದೇ ಬರಿಗೈಲಿ ಕುಳಿತುಕೊಳ್ಳುವಂತಾಗಿತ್ತು.
ಆದರೆ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ತುಮಕೂರಿನ ಮಶಿನ್ ಟೂಲ್ ಪಾರ್ಕ್ ನಲ್ಲಿ ಭೂಮಿ ಮಂಜೂರು ಮಾಡುವ ಮೂಲಕ ಕಂಪನಿಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಬೆಂಬಲ ನೀಡಿದೆ.
ದೇಶೀಯವಾಗಿ ವಿಮಾನಗಳನ್ನು ತಯಾರಿಸುತ್ತಿರುವ ಎಚ್ಎಎಲ್ಗೆ ಈ ಎಡಿಡಿ ಇಂಜಿನಿಯರಿಂಗ್ ಕಂಪನಿಯು ಅಗತ್ಯವಿರುವ ಬಿಡಿ ಭಾಗಗಳನ್ನು ತಯಾರಿಸಿ ಪೂರೈಕೆ ಮಾಡುತ್ತದೆ. ಸುದೀರ್ಘ ಕಾಲದ ಹೋರಾಟದ ನಂತರ ಎಡಿಡಿ ಇಂಜಿನಿಯರಿಂಗ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್ (ಎಇಐಪಿಎಲ್) ಗೆ ಧನಾತ್ಮಕವಾದ ಸುದ್ದಿ ಸಿಕ್ಕಿದೆ.
"ಕೆಐಎಡಿಬಿ ಕಂಪನಿಯ ಯೋಜನೆಗೆ ಭೂಮಿ ನೀಡಲು ಹಸಿರು ನಿಶಾನೆ ತೋರಿದೆ. ದೇಶೀಯವಾಗಿ ತಯಾರಿಸುತ್ತಿರುವ ಯುದ್ಧ ವಿಮಾನ ತೇಜಸ್ ಎಂಕೆ1ಎ ಮತ್ತು ಎಂಕೆ2 ಶ್ರೇಣಿಯ ವಿಮಾನಗಳ ತಯಾರಿಕೆಗೆ ಅಗತ್ಯವಾದ ಕಟ್ಟಿಂಗ್ ಟೂಲ್ ಪರಿಹಾರವನ್ನು ಈ ಯೋಜನೆಯಡಿ ಉತ್ಪಾದಿಸಲಾಗುತ್ತದೆ" ಎಂದು ಎಇಐಪಿಎಲ್ ನಿರ್ದೇಶಕ ಗಿರೀಶ್ ಎಲ್. ತಿಳಿಸಿದ್ದಾರೆ.

ಅಂತಿಮ ಹಂತದ ಪ್ರಕ್ರಿಯೆ
"ಕರ್ನಾಟಕ ಉದ್ಯೋಗ ಮಿತ್ರದ ಏಕಗವಾಕ್ಷಿಯಲ್ಲಿ ಭೂಮಿಗಾಗಿ ಕಂಪನಿಯು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಭೂಮಿ ನೀಡುವಂತೆ ಕೆಐಎಡಿಬಿಗೆ ಸೂಚನೆ ನೀಡಲಾಗಿದೆ. ಇದೀಗ ಭೂಮಿಯನ್ನು ಮಂಜೂರು ಮಾಡುವ ಪ್ರಕ್ರಿಯೆ ಅಂತಿಮ ಹಂತವನ್ನು ತಲುಪಿದೆ" ಎಂದು ಎಇಐಪಿಎಲ್ ನಿರ್ದೇಶಕ ಗಿರೀಶ್ ಎಲ್. ಹೇಳಿದ್ದಾರೆ.

ಕಟ್ಟಿಂಗ್ ಟೂಲ್ ಪೂರೈಕೆ
ಎಡಿಡಿ ಇಂಜಿನಿಯರಿಂಗ್ ಜರ್ಮನ್ ಮೂಲದ ಎಡಿಎಇ ಇಂಜಿನಿಯರಿಂಗ್ ಜಿಎಂಬಿಎಚ್ನ ಅಂಗಸಂಸ್ಥೆಯಾಗಿದೆ. ಇದು ಹಲವಾರು ರಕ್ಷಣಾ ಸಂಸ್ಥೆಗಳಿಗೆ ಕಟ್ಟಿಂಗ್ ಟೂಲ್ ಸಲೂಶನ್ಸ್ ಅನ್ನು ಪೂರೈಕೆ ಮಾಡುತ್ತದೆ. ಎಚ್ಎಎಲ್, ಬಿಇಎಂಎಲ್, ಆರ್ಡಿನೆನ್ಸ್ ಫ್ಯಾಕ್ಟರಿ ಮತ್ತು ಹಲವಾರು ಪ್ರಮುಖ ಕಂಪನಿಗಳಾದ ಬಾಷ್, ಜೆಎಸ್ ಡಬ್ಲ್ಯೂ ಮತ್ತು ಇತರೆ ಕಂಪನಿಗಳಿಗೆ ಉತ್ಪನ್ನಗಳನ್ನು ಪೂರೈಕೆ ಮಾಡುತ್ತದೆ. ಇದಲ್ಲದೇ, ಕಂಪನಿಯು ಎಐಟಿಯಲ್ಲದೇ, ಲಾಕ್ಹೀಡ್ ಮಾರ್ಟಿನ್ ನಂತಹ ವೈಮಾನಿಕ ಕ್ಷೇತ್ರದ ದೈತ್ಯ ಕಂಪನಿಗಳ ಜೊತೆಗೆ ಎಡಿಡಿ ಎಂಜಿನಿಯರಿಂಗ್ ಸಹಯೋಗವನ್ನು ಹೊಂದಿದೆ.

ಮೇಕ್ ಇನ್ ಇಂಡಿಯಾ ಯೋಜನೆ
ಕಂಪನಿಯು ತನ್ನ ಯಶಸ್ಸಿನ ನಂತರ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಯುದ್ಧ ವಿಮಾನಗಳಿಗೆ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಅನ್ನು ಪೂರೈಕೆ ಮಾಡುವ ಒಂದು ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿತು. ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಉಪಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ಎಡಿಡಿ ಇಂಜಿನಿಯರಿಂಗ್ ಮೆಟಲ್ ಕಟ್ಟಿಂಗ್ ಕ್ಷೇತ್ರದಲ್ಲಿ ದೇಶೀಯವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.

ವಿಳಂಬ ಧೋರಣೆಗೆ ಬಲಿ
ಕಂಪನಿಯು ಏರೋಸ್ಪೇಸ್ ನಲ್ಲಿ ಡಾಕ್ಟರೇಟ್ ಪಡೆದಿರುವ ವರ್ನರ್ ಗ್ರಿಕ್ಸಾ, ಅಲೆಕ್ಸಾಂಡರ್ ಲಾಕ್ಟೆವ್ ನಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ನೊರ್ಬರ್ಟ್ ಕ್ರೆಲ್ಲರ್ ಅವರಂತಹ ಅತ್ಯಂತ ಅನುಭವಿಗಳನ್ನು ಹೊಂದಿದೆ. ಆದರೆ, ವಿಪರ್ಯಾಸವೆಂದರೆ ಪ್ರಧಾನಮಂತ್ರಿಗಳ ಕನಸಿನ ಅಥವಾ ಪರಿಕಲ್ಪನೆಯ ವಿರುದ್ಧವಾಗಿ ರೆಡ್ ಟೇಪಿಸಂ ಸರ್ಕಾರದ ನೀತಿಯ ಮೇಲೆ ಮೇಲುಗೈ ಸಾಧಿಸಿತು. ಒಂದು ಉದ್ಯಮವನ್ನು ಸ್ಥಾಪಿಸಲು ಕಂಪನಿಯು ಮಾಡಿಕೊಂಡ ಮನವಿಯು ಕಳೆದ ಮೂರು ವರ್ಷಗಳಿಂದ ಕಡತದಲ್ಲಿಯೇ ಉಳಿದುಕೊಂಡದ್ದು ದುರದೃಷ್ಟಕರವಾದ ಸಂಗತಿಯಾಗಿದೆ.
Recommended Video

ಅರ್ಜಿ ವಿಲೇವಾರಿ ಮಾಡಿರಲಿಲ್ಲ
ಗಿರೀಶ್ ಅವರು ಈ ಕ್ಷೇತ್ರದಲ್ಲಿ ಎರಡು ದಶಕಕ್ಕೂ ಹೆಚ್ಚು ಅನುಭವವನ್ನು ಹೊಂದಿದವರಾಗಿದ್ದು, ನೆಲಮಂಗಲ ಕೈಗಾರಿಕಾ ಎಸ್ಟೇಟ್ ನಲ್ಲಿ ತುಂಡು ಭೂಮಿಗಾಗಿ ಅರ್ಜಿ ಸಲ್ಲಿಸಿದ್ದರು. ಹಿಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂಮಿಯನ್ನು ಮಂಜೂರು ಮಾಡುವಂತೆ ಸ್ಪಷ್ಟ ಆದೇಶ ನೀಡಿದ್ದರೂ ಕೆಎಸ್ಎಸ್ಐಡಿಸಿ ಅರ್ಜಿಯನ್ನು ವಿಲೇವಾರಿ ಮಾಡದೇ ವಿಳಂಬ ಧೋರಣೆ ಅನುಸರಿಸಿತ್ತು.
ಹಲವಾರು ಸಚಿವರು, ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಶಿಫಾರಸು ಮಾಡಿದ್ದಾಗ್ಯೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಮಾತ್ರ ಬೆಲೆಯನ್ನೇ ಕೊಡಲಿಲ್ಲ. ಇದರ ಬದಲಿಗೆ ಮಂಜೂರು ಮಾಡಬೇಕಿದ್ದ ಜಾಗದ ಮೇಲೆ ಮೊಕದ್ದಮೆ ಇದೆ ಎಂಬುದು ಸೇರಿದಂತೆ ಹಲವಾರು ಕುಂಟುನೆಪಗಳನ್ನು ಹೇಳುತ್ತಾ ಅರ್ಜಿಯನ್ನು ವಿಲೇವಾರಿ ಮಾಡದೇ ಕೈಕಟ್ಟಿ ಕುಳಿತರು.












Click it and Unblock the Notifications