ದಸರಾ ಹಬ್ಬಕ್ಕೆ ರೈತರಿಗೆ ಸಿಹಿಸುದ್ದಿ ಕೊಟ್ಟ ಸಚಿವ ಎಂ ಬಿ ಪಾಟೀಲ್!
ವಿಜಯಪುರ, ಅಕ್ಟೋಬರ್ 25: ರೈತರಿಗೆ ಕೃಷಿಗಾಗಿ ಇನ್ನು ಮುಂದೆ ಒಂದು ಗಂಟೆ ಹೆಚ್ಚಿಗೆ ವಿದ್ಯುತ್ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಡಿಸಿ, ಜಿ. ಪಂ. ಸಿ ಇ ಓ, ಎಸ್ಪಿ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈವರೆಗೆ ರೈತರಿಗೆ ಐದು ಗಂಟೆ ತ್ರಿ- ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇನ್ನು ಮುಂದೆ ದಸರಾ ಕೊಡುಗೆಯಾಗಿ ಒಂದು ಗಂಟೆ ಹೆಚ್ಚಿಗೆ ವಿದ್ಯುತ್ ನೀಡಲಾಗುವುದು. ಇದರಿಂದ ರೈತರಿಗೆ ಆಯಾ ಪ್ರದೇಶಗಳಲ್ಲಿ ಲಭ್ಯತೆಗೆ ಅನುಗುಣವಾಗಿ ಹಾಗೂ ನಿಗದಿಯಿಂದ ಹಗಲು ಮತ್ತು ರಾತ್ರಿ ಸೇರಿ ಒಟ್ಟು ಆರು ಗಂಟೆ ವಿದ್ಯುತ್ ನೀಡಲಾಗುವುದು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ಈ ಮುಂಚೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೈಕೊಟ್ಟಿದ್ದರಿಂದಾಗಿ ಬರ ಉಂಟಾಗಿದೆ. ಇದರ ಪರಿಣಾಮ ಜಲವಿದ್ಯುತ್ ಉತ್ತಾದನೆ ಕಡಿಮೆಯಾಗಿದೆ. ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು ಕೇವಲ ಶೇ. 5ರಷ್ಟು ಮಾತ್ರ ಉತ್ಪಾದನೆಯಾಗುತ್ತಿದೆ. ಮೇಲಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಗುಣಮಟ್ಟದ ಕಲ್ಲಿದ್ದಲು ದೊರೆಯದ ಕಾರಣ ಅಲ್ಲೂ ಕೂಡ ಉತ್ಪಾದನೆ ಕಡಿಮೆಯಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಅದು 16000 ಮೆಗಾವ್ಯಾಟ್ ಗೆ ಹೆಚ್ಚಾಗಿದೆ. ಇನ್ನೊಂದೆಡೆ ಉತ್ಪಾದನೆಯೂ ಕುಸಿದಿರುವುದರಿಂದ ಒಟ್ಟಾರೆ ಸುಮಾರು 10 ಸಾವಿರ ಮೆಗಾವ್ಯಾಟ್ ಬೇಡಿಕೆ ಹೆಚ್ಚಾಗಿದೆ. ಸರಕಾರ ಕೂಡ ಕಲ್ಲಿದ್ದಲು ಆಮದಿಗೆ ನಿರ್ದರಿಸಿದ್ದು, ಶೀಘ್ರದಲ್ಲಿ ಗುಣಮಟ್ಟದ ಕಲ್ಲಿದ್ದಲು ಖರೀದಿ ಪ್ರಕ್ರಿಯೆ ಟೆಂಡರ್ ಕಾರ್ಯ ಮುಗಿಯಲಿದೆ ಎಂದು ಸಚಿವರು ತಿಳಿಸಿದರು. ಇನ್ನೂ ಈ ಸಂದರ್ಭದಲ್ಲಿ ವಿಜಯಪುರ ಡಿಸಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಾಹುಲ ಶಿಂದೆ, ಜಿಲ್ಲಾ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಹೆಸ್ಕಾಂ ಎಸ್. ಇ. ಗುರುನಾಥ ಗೋಟ್ಯಾಳ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications