ಕಳಸಾ-ಬಂಡೂರಿ ತಡೆಗೋಡೆ ಒಡೆಯಲು ಹೋರಾಟಗಾರರು ಸಿದ್ಧ
ಹುಬ್ಬಳ್ಳಿ,ಅಕ್ಟೋಬರ್, 26 : ಕಳಸಾ ಬಂಡೂರಿ ಹೋರಾಟಗಾರರು ಕಣಕಂಬಿಯಲ್ಲಿರುವ ತಡೆಗೋಡೆ ಒಡೆಯಲು ನಿರ್ಧರಿಸಿದ್ದು, ಈ ನಿಮಿತ್ತ ಅಕ್ಟೋಬರ್ 26ರ ಸೋಮವಾರದಂದು ಗುದ್ದಲಿ ಚಳುವಳಿ ನಡೆಸುತ್ತಿದ್ದಾರೆ. ಹಾಗಾಗಿ ಕಳಸಾ-ಬಂಡೂರಿ ಕಾಮಗಾರಿ ಸ್ಥಳದಲ್ಲಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಣಕಂಬಿಯಲ್ಲಿ ಕಳಸಾ-ಬಂಡೂರಿ ನಾಲಾಗೆ ತಡೆಗೋಡೆ ನಿರ್ಮಿಸಲಾಗಿದೆ. ಈ ಹಿಂದೆಯೂ ರೈತ ಹೋರಾಟಗಾರರು ತಡೆಗೋಡೆ ಒಡೆಯಲು ನಿರ್ಧರಿಸಿದ್ದರು. ಆದರೆ ನಂತರ ಕೆಲವೇ ದಿನಗಳಲ್ಲಿ ಹಿಂದೆ ಸರಿದಿದ್ದರು. ಈಗ ಸುಮಾರು 10,000ಕ್ಕೂ ಹೆಚ್ಚು ರೈತರು ತಡೆಗೋಡೆ ಒಡೆಯಲು ಕಣಕಂಬಿಗೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ.[ಉತ್ತರ ಕರ್ನಾಟಕದ ಸಮಸ್ಯೆ ತಿಳಿಸಲಿದೆ 'ಮಹಾಮರಣ' ಸಾಕ್ಷ್ಯಚಿತ್ರ]
ಈ ಹಿನ್ನೆಲೆಯಲ್ಲಿ ಮಾತನಾಡಿದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು,'ಕಳಸಾ ನಾಲೆಗೆ ತಡೆಗೋಡೆ ನಿರ್ಮಾಣ ಮಾಡಿರುವುದೇ ತಪ್ಪು. ಅಲ್ಲದೇ ನಮ್ಮದೇ ರಾಜ್ಯದಲ್ಲಿನ ತಡೆಗೋಡೆಯನ್ನು ನಾವು ಒಡೆಯುತ್ತಿದ್ದೇವೆ. ಗೋವಾ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ ಎಂದ ಮಾತ್ರಕ್ಕೆ ನಮ್ಮ ಪಾಲಿನ ಕುಡಿಯುವ ನೀರಿನ ಹಕ್ಕು ಕೈ ಬಿಡಲು ಸಾಧ್ಯವಿಲ್ಲ' ಎಂದು ಹೇಳಿದರು.
ನಾಯಕ ನಟ ಶರಣ್ ನಿಂದ ಮೋದಿಗೆ ಪತ್ರ :
ಕನ್ನಡದ ಹೆಸರಾಂತ ನಾಯಕ ನಟ ಶರಣ್ ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ನವಲಗುಂದದ ಹೋರಾಟಗಾರರೊಂದಿಗೆ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಉಪವಾಸ ನಿರತರಾಗಿದ್ದ ಶರಣ್, ನವಲಗುಂದ-ನರಗುಂದ ಬಂಡಾಯ ನಾಡಿನ ರೈತರನ್ನು ಸರ್ಕಾರ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದರು.
ಎರಡನೇ ಬಾರಿ ಹೋರಾಟದಲ್ಲಿ ಪಾಲ್ಗೊಂಡ ನಟ ಶರಣ್ ತಮ್ಮ ರಕ್ತದಲ್ಲಿ ಪ್ರಧಾನಿ ಮೋದಿಗೆ ತಮ್ಮ ರಕ್ತದಲ್ಲಿ ಪತ್ರ ಬರೆದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ರೈತರಿಗೆ ಹುರುಪು ನೀಡಿತು.