ಎಸ್ಎಸ್ಎಲ್ಸಿಯಲ್ಲಿ ಫೇಲ್ ಆದರೆ ಧೃತಿಗೆಡಬೇಕಿಲ್ಲ!ನಿಮಗೂ ಇದೆ ಬಹಳಷ್ಟು ಆಯ್ಕೆ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಕುತೂಹಲಕ್ಕೆ ತೆರೆಬಿದ್ದಿದೆ. ಪರೀಕ್ಷಾ ಫಲಿತಾಂಶ ಅಂದ ಕೂಡಲೇ ಪ್ರತಿಯೊಬ್ಬರೂ ರ್ಯಾಂಕ್ ಪಡೆದೇ ಪಡೆಯುತ್ತಾರೆ, ಡಿಸ್ಟಿಕ್ಷನ್ ಪಡೆಯುತ್ತಾರೆ ಎಂದಲ್ಲ, ಜಸ್ಟ್ ಪಾಸ್ ಆದವರೂ ಇರುತ್ತಾರೆ. ಇನ್ನು ಕೆಲವರು ಫೇಲ್ ಆಗಲೂ ಬಹುದು. ಹಾಗಂದ ಮಾತ್ರಕ್ಕೆ ಅವರ ಜೀವನ ಇಲ್ಲಿಗೇ ಮುಗಿದು ಹೋಯಿತು ಎಂದೇನಲ್ಲ. ಎಸ್ಎಸ್ಎಲ್ಸಿ ಫೇಲ್ ಆದ ತಕ್ಷಣ ಮುಂದಿನ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ಬಿತ್ತು ಎಂದೂ ಅಲ್ಲ. ನಿಮಗೆ ಗೊತ್ತಿರಲಿ. ಹತ್ತನೇ ತರಗತಿಯಲ್ಲಿ ಫೇಲ್ ಆದರೂ, ಧೃತಿಗೆಡದೇ ಓದಿ, ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವ ಉದಾಹರಣೆಗಳು ಕಣ್ಣೆದುರೇ ಇವೆ. ನಿರಂತರ ಶ್ರಮ, ಗೆಲ್ಲಲೇ ಬೇಕೆಂಬ ಹಠ, ಪ್ರತಿಭೆಗಳು ಸಾಧಕನ ಸ್ವತ್ತು. ಪುಸ್ತಕಗಳ ಹೊರಗೆಯೂ ಅತಿದೊಡ್ಡ ಜಗತ್ತಿದೆ. ಆ ಜಗತ್ತು ಕೂಡಾ ನಮ್ಮನ್ನು ಕೈಬೀಸಿ ಕರೆಯುತ್ತವೆ. ಅಲ್ಲಿಯೂ ಅವಕಾಶಗಳಿವೆ. ಕಣ್ಣರಳಿಸಿ ನೋಡಿ ಎಸ್ಎಸ್ಎಲ್ಸಿ ಫೇಲ್ ಆದವರಿಗೂ ಬಹಳಷ್ಟು ಆಯ್ಕೆಗಳಿವೆ.
ಎಸ್ಎಸ್ಎಲ್ಸಿ ಫೇಲ್ ಆದ್ರೆ ಮುಂದೇನು?
ಪೂರಕ ಪರೀಕ್ಷೆ ಬರೆಯಿರಿ:
ವಿದ್ಯಾರ್ಥಿಗಳೇ ಗಮನಿಸಿ, ಒಂದು ವೇಳೆ ಮೊದಲ ಫಲಿತಾಂಶದಲ್ಲಿ ನೀವು ಫೇಲ್ ಆಗಿದ್ದೀರಿ ಎಂದಾದರೆ ಎರಡನೇ ಪ್ರಯತ್ನ ಮಾಡಬಹುದು. ಫೇಲ್ ಆದ ವಿಷಯಕ್ಕೆ ಸ್ವಲ್ಪ ಹೆಚ್ಚು ಒತ್ತು ನೀಡಿ ಪಾಸ್ ಮಾರ್ಕ್ ತೆಗೆದುಕೊಳ್ಳಲು ಪ್ರಯತ್ನಿಸಿ. ಅಲ್ಲಿದೆ ನಿಮ್ಮ ವರ್ಷವೂ ವೇಸ್ಟ್ ಆಗುವುದಿಲ್ಲ. ಎಲ್ಲರ ಹಾಗೆ ನೀವು ಕೂಡಾ ಇದೇ ಶೈಕ್ಷಣಿಕ ಅವಧಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಂದುವರೆಸಬಹುದು.

ಪೂರಕ ಪರೀಕ್ಷೆಗೆ ಸಿದ್ಧತೆ ಹೇಗೆ?: ಎಸ್ಎಸ್ಎಲ್ಸಿ ಫೇಲ್ ವಿದ್ಯಾರ್ಥಿಗಳಿಗಾಗಿಯೇ ಒಂದಷ್ಟು ಸ್ಪೆಷಲ್ ಕ್ಲಾಸ್ಗಳು ನಡೆಯುತ್ತವೆ. ರಾತ್ರಿ ಟ್ಯೂಶನ್ಗಳು ನಡೆಯುತ್ತವೆ. ಸರ್ಕಾರ ಕೂಡಾ ಅಂತಹ ಮಕ್ಕಳ ನೆರವಿಗೆ ಬರುತ್ತವೆ. ಇವಕ್ಕೆಲ್ಲಾ ತುಂಬಾ ಖರ್ಚು ಮಾಡಬೇಕಾಗಿಲ್ಲ. ಹಲವು ಕಡೆ ಉಚಿತ ನೆರವು ಸಿಗುತ್ತವೆ. ರಾತ್ರಿ ಶಾಲೆಗಳು, ಸ್ಲೆಶಲ್ ಕ್ಲಾಸ್ಗಳು, ಟ್ಯೂಶನ್ ನೆರವಿನಿಂದ ಪೂರಕ ಪರೀಕ್ಷೆ ಬರೆಯಿರಿ. ಖಂಡಿತ ಯಶಸ್ಸು ಸಿಗುತ್ತದೆ.
ಇದರ ನಂತರವೂ, ಎಸ್ಎಸ್ಎಲ್ಸಿ ಫೇಲ್ ಆದವರಿಗಾಗಿಯೇ ಹಲವಾರು ಕೋರ್ಸ್ಗಳು ಜಗತ್ತಿನಲ್ಲಿ ಇವೆ. ಆ ಕೋರ್ಸ್ಗಳನ್ನು ಕಲಿತರೂ ಜೀವನ ಸಾಂಗವಾಗಿ ನಡೆಯುತ್ತದೆ. ನಿಮ್ಮ ಆಸಕ್ತಿಯ ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ಆ ಕೋರ್ಸ್ನಲ್ಲಿ ನಿಮಗೆ ಎಕ್ಸೆಲೆನ್ಸಿ ಬರಲಿ. ಆಗ ಯಶಸ್ಸು ನಿಮ್ಮ ಪದತಲಕ್ಕೆ ಶರಣಾಗುತ್ತದೆ. ಇದಕ್ಕೆ ಬೇಕಾಗುವುದು ಬರೀ ಆತ್ಮವಿಶ್ವಾಸ, ಧೈರ್ಯ.
ಎಸ್ಎಸ್ಎಲ್ಸಿ ಫೇಲ್ ಆದವರಿಗೆ ಇರುವ ಕೋರ್ಸ್ಗಳು:
ಜೇನು ಸಾಕಣೆ ತರಬೇತಿ: ಎಸ್ಎಸ್ಎಲ್ಸಿ ಫೇಲ್ ಆಯಿತು. ಮುಂದೆ ಓದುವುದು ಸಾಧ್ಯವಿಲ್ಲ. ವಿದ್ಯೆ ತಲೆಗೆ ಹತ್ತುವುದೇ ಇಲ್ಲ ಎನ್ನುವವರು ಜೇನು ಸಾಕಣೆ ಕೋರ್ಸ್ ಕಲಿಯಬಹುದು. ಇದು ಸ್ವಯಂ ಉದ್ಯೋಗಕ್ಕೆ ಮೊದಲ ಹೆಜ್ಜೆ. ಇದಕ್ಕೆ ಸರ್ಕಾರದ ಸಬ್ಸಿಡಿ ಕೂಡಾ ಲಭ್ಯವಿದೆ. ಇದರಲ್ಲಿಯೇ ಬದುಕು ರೂಪಿಸಿಕೊಳ್ಳಬಹುದು.
ಡ್ರೈವಿಂಗ್ ಕಲಿಯಿರಿ: ಫೇಲ್ ಆಯಿತು ಇನ್ನು ಮುಂದೆ ಏನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ವಾಹನ ಚಾಲನೆ ತರಬೇತಿ ಪಡೆದುಕೊಳ್ಳಿ. ಈ ಮೂಲಕ ಸ್ವಂತ ಉದ್ಯೋಗ ಕಂಡುಕೊಳ್ಳಲೂ ಬಹುದು. ಸರ್ಕಾರದ ವತಿಯಿಂದಲೂ ಉಚಿತ ವಾಹನ ಚಾಲನೆ ತರಬೇತಿ ನೀಡಲಾಗುತ್ತದೆ.
ನರ್ಸಿಂಗ್: ನರ್ಸಿಂಗ್ ಕೋರ್ಸ್ ಓದಲು ಸಾಕಷ್ಟು ಅವಕಾಶಗಳಿವೆ. ಮೂರು ತಿಂಗಳು, ಆರು ತಿಂಗಳು, ಒಂದು ವರ್ಷ ಅಥವಾ ಡಿಪ್ಲೊಮೋ ಮೂಲಕ ಈ ಕೋರ್ಸ್ ಮಾಡಬಹುದು. ಒಮ್ಮೆ ನರ್ಸಿಂಗ್ ಕೋರ್ಸ್ ಮುಗಿಯಿತು ಎಂದಾದರೆ ಉತ್ತಮ ಸಂಪಾದನೆಗೂ ಒಂದು ದಾರಿಯಾಗುತ್ತದೆ.
ಬೇಕರಿ ತಂತ್ರಜ್ಞಾನ ಕೋರ್ಸ್: ಬೇಕರಿ ಉದ್ಯಮ ಸ್ವಯಂ ಉದ್ಯೋಗಕ್ಕೆ ರಹದಾರಿ. ೧೪ ದಿನಗಳ ಬೇಕರಿ ತಂತ್ರಜ್ಞಾನ ಕೋರ್ಸ್ ಲಭ್ಯವಿದೆ. ಕೇಕ್, ಕುಕೀಸ್ ಮುಂತಾದ ಬೇಕರಿ ಉತ್ಪನ್ನಗಳನ್ನು ಕಲಿತರೆ ಆಕಾಶದಷ್ಟಿದೆ ಅವಕಾಶ. ಯಾರ ಕೈಅಡಿಯಲ್ಲಿ ದುಡಿಯಬೇಕಾದ ಅಗತ್ಯವಿರಲ್ಲ. ಉದ್ಯಮಿಯಾಗಿ ಬೆಳೆಯುವ ಅವಕಾಶ ಅಂಗೈಯಲ್ಲಿರುತ್ತದೆ. ಬೇಕರಿ ಕೋರ್ಸ್ಗಳಿಗೆ ಸರ್ಕಾರವೂ ನೆರವಾಗುತ್ತದೆ.
ಹೊಟೇಲ್ ಮ್ಯಾನೇಜ್ಮೆಂಟ್:
ಹೊಟೇಲ್ ಮ್ಯಾನೇಜ್ಮೆಂಟ್ನಲ್ಲಿ ಈಗ ಅವಕಾಶಗಳು ಅಪರಿಮಿತವಾಗಿವೆ. ಜೊತೆಗೆ ಉತ್ತಮ ಸಂಪಾದನೆಯೂ ಹೆಚ್ಚು. ಎಸ್ಎಸ್ಎಲ್ಸಿ ಫೇಲ್ ಆದರೆ ಹೊಟೇಲ್ ಮ್ಯಾನೇಜ್ಮೆಂಟ್ ಸೇರಿ. ಒಂದು ವರ್ಷಗಳ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳಿವೆ. ಹೌಸ್ ಕೀಪಿಂಗ್, ಕ್ಯಾಟರಿಂಗ್ ತರಬೇತಿ ನೀಡಲಾಗುತ್ತದೆ.ತರಹೇವಾರಿ ಅವಕಾಶಗಳು ನಿಮ್ಮದಾಗಲಿವೆ.
ಹೈನುಗಾರಿಕೆ:
ಎಸ್ಎಸ್ಎಲ್ಸಿ ಫೇಲಾದವರು ಸುಲಭವಾಗಿ ಮಾಡಬಹುದಾದ ಕೋರ್ಸ್. ಇದನ್ನು ಉದ್ಯಮಕ್ಕೆ ಅಳವಡಿಸಿದರೆ ಕೈತುಂಬಾ ಕಾಸು. ಹೈನುಗಾರಿಕೆ ಈಗ ಅತ್ಯಾಧುನಿಕವಾಗುತ್ತಿದೆ. ಹಾಗಾಗಿ, ರಿಸ್ಕ್ ಕಡಿಮೆ, ಲಾಭ ಜಾಸ್ತಿ. ಸರ್ಕಾರವೇ ಹೈನುಗಾರಿಕೆ ತರಬೇತಿ ನೀಡುತ್ತದೆ. ಜೊತೆಗೆ ಉದ್ಯಮ ಸ್ಥಾಪಿಸುವುದಾದರೆ ಕಡಿಮೆ ಬಡ್ಡಿ, ಸಬ್ಸಿಡಿ ಜೊತೆ ಸಾಲ ನೀಡುತ್ತದೆ. ಸಿಕ್ಕ ಅವಕಾಶ ಬಳಸಿಕೊಳ್ಳಿ.
ಮತ್ಸ್ಯೋದ್ಯಮ:
ಮೀನುಗಾರಿಕೆ ತರಬೇತಿಗೆ ಸರಕಾರ ಸಾಕಷ್ಟು ಉತ್ತೇಜನ ನೀಡುತ್ತದೆ. ಸುಲಭ ಮತ್ತು ಉಚಿತ ತರಬೇತಿ ಕೂಡಾ ಲಭ್ಯವಿದೆ. ಸಾಲ, ಸಬ್ಸಿಡಿ, ತಂತ್ರಜ್ನಾನವನ್ನೂ ಒದಗಿಸುತ್ತದೆ.
ಬ್ಯೂಟಿಷನ್ ಮತ್ತು ಮೇಕಪ್ ಕೋರ್ಸ್:
ಇದಂತೂ ಪ್ರಸ್ತುತ ಟ್ರಿಂಡಿಂಗ್ನಲ್ಲಿ ಇರುವ ಕೋರ್ಸ್ ಅಂತಾನೇ ಹೇಳಬಹುದು. ಒಂದು ವರ್ಷ, ಆರು ತಿಂಗಳ ಕೋರ್ಸ್ ಮಾಡಬಹುದು. ಇದು ಕೇವಲ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ. ಹುಡುಗರೂ ಕೂಡ ಈ ಕೋರ್ಸ್ ಆಯ್ಕೆ ಮಾಡಬಹುದು. ಕೈ ತುಂಬಾ ಹಣವನ್ನು ಸಂಪಾದಿಸಬಹುದು.
ಕುಕ್ಕುಟೋದ್ಯಮ, ಕುರಿಸಾಕಣೆ ತರಬೇತಿ, ಮೊಬೈಲ್ ದುರಸ್ತಿ ಇತ್ಯಾದಿ ಹಲವು ತರಬೇತಿಗಳನ್ನು ಸರ್ಕಾರವೇ ಆಯೋಜಿಸುತ್ತದೆ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಈ ತರಬೇತಿಗಳಿಗೆ ಸೇರಬಹುದು. ಹಲವಾರು ಕಡೆ ಈ ರೀತಿಯ ಕೋರ್ಸ್ಗಳು ಉಚಿತವಾಗಿರುತ್ತವೆ ಅಥವಾ ತೀರಾ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರವೇ ಸ್ವಯಂ ಉದ್ಯೋಗಕ್ಕೆ ಹತ್ತು ಹಲವು ರೀತಿಯಲ್ಲಿ ನೆರವು ನೀಡುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೆ ಧೃತಿಗೆಡಬೇಡಿ. ಸರ್ಕಾರದ ಎಲ್ಲಾ ನೆರವುಗಳ ಸದುಪಯೋಗಪಡೆದುಕೊಳ್ಳಿ. ಯಾರಿಗೆ ಗೊತ್ತು.ಮುಂದೆ ನೀವು ಕೂಡಾ ಅಂಬಾನಿ, ಅದಾನಿಗಳಂತಹ ಉದ್ಯಮಪತಿಗಳಾಗಲೂ ಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications