ಕೆಟಿಪಿಪಿ ಕಾಯ್ದೆಯಡಿ ಕೆಆರ್ ಐಡಿಸಿಎಲ್ಗೆ ವಿನಾಯ್ತಿ: ಸರ್ಕಾರದಿಂದ ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು ಮಾ.11. ಎರಡು ಕೋಟಿ ರೂ.ವರೆಗಿನ ಸರಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಸಿಎಲ್)ಗೆ ಕರ್ನಾಟಕ ಪಾರದರ್ಶಕ ಕಾಯಿದೆ 1999ರಿಂದ ವಿನಾಯ್ತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ , ರಾಜ್ಯ ಸರ್ಕಾರದಿಂದ ವಿವರಣೆಯನ್ನು ಕೇಳಿದೆ.
ಕರ್ನಾಟಕ ರಾಜ್ಯ ಎಸ್ ಸಿ/ಎಸ್ ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್ .ಮಹದೇವಸ್ವಾಮಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ.ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಅರ್ಜಿದಾರರ ಪರ ವಕೀಲರು, ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಸಿಎಲ್)ಕ್ಕೆ ಸಾರ್ವಜನಿಕ ಖರೀದಿಯಲ್ಲಿನ ಕರ್ನಾಟಕ ಪಾರದರ್ಶಕ ಕಾಯಿದೆ 1999ರಿಂದ ವಿನಾಯ್ತಿ ನೀಡಲಾಗಿದೆ. ಅದಕ್ಕಾಗಿ 2021ರಲ್ಲಿ ಕೆಟಿಪಿಪಿ ಕಾಯಿದೆ ತಿದ್ದುಪಡಿ ಮಾಡಿರುವುದು ಸಂವಿಧಾನಬಾಹಿರ ಕ್ರಮ ಎಂದರು.

ಸರ್ಕಾರಿ ಯೋಜನೆಗಳ ಗುತ್ತಿಗೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೇ ತಂದಿರುವ ಕಾಯಿದೆಯಿಂದ ಕೆಆರ್ಐಡಿಸಿಎಲ್ ಗೆ ಸುಮಾರು 2 ಕೋಟಿ ರೂ.ವರೆಗಿನ ಕಾಮಗಾರಿಗೆ ವಿನಾಯಿತಿ ನೀಡಲಾಗಿದೆ. ಆ ಮೂಲಕ ಬಹುತೇಕ ಕಾಮಗಾರಿಗಳನ್ನು ಅದೇ ಸಂಸ್ಥೆಗೆ ನೀಡಲಾಗುತ್ತಿದೆ, ಇದರಿಂದ ಇತರೆ ಗುತ್ತಿಗೆದಾರರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ:
ಹಿಂದೆಯೂ ಕೆಆರ್ ಐಡಿಸಿಎಲ್ ಗೆ ನೀಡಿದ್ದ ವಿನಾಯ್ತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು, ಆಗ ನ್ಯಾಯಾಲಯ ವಿನಾಯ್ತಿ ಆದೇಶಕ್ಕೆ ತಡೆ ನೀಡಿತ್ತು. ಹಾಗಾಗಿ ನ್ಯಾಯಾಲಯದ ಆದೇಶವನ್ನು ಹತ್ತಿಕ್ಕಲು ಕೆಟಿಪಿಪಿಗೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ. ಪಾರದರ್ಶಕತೆ ಸಂಪೂರ್ಣ ಮಾಯವಾಗಲಿದೆ ಎಂದು ವಿವರಿಸಿದರು.
ಸದ್ಯ 50 ಲಕ್ಷ ರೂ.ಗಳವರೆಗಿನ ಕಾಮಗಾರಿಗಳಲ್ಲಿ ಶೇ. 17.15ರಷ್ಟು ಎಸ್ ಸಿ ಗುತ್ತಿಗೆದಾರರಿಗೆ ಮತ್ತು ಶೇ.6.95ರಷ್ಟು ಗುತ್ತಿಗೆಗಳನ್ನು ಎಸ್ ಟಿ ಗುತ್ತಿಗೆದಾರರಿಗೆ ನೀಡಲು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಅವಕಾಶ ನೀಡಲಾಗಿದೆ. ಕೆಆರ್ ಐಡಿಸಿಎಲ್ ಗೆ ವಿನಾಯ್ತಿ ನೀಡಿದರೆ ಅದರಿಂದ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಸಂಪೂರ್ಣ ಅನ್ಯಾಯವಾಗಲಿದೆ ಎಂದು ಅವರು ಹೇಳಿದರು.
ಭಾರಿ ವಿವಾದ:
ಹಿಂದೆ ಬಿಜೆಪಿ ಸರ್ಕಾರ 2020ರಲ್ಲಿ ಕರ್ನಾಟಕ ಪಾರದರ್ಶಕ ಕಾಯಿದೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಸಿಎಲ್)ಕ್ಕೆ ವಿನಾಯ್ತಿ ನೀಡಿ ಹೊರಡಿಸಿದ್ದ ಆದೇಶ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರ ವಿರುದ್ಧ ಇತರೆ ಗುತ್ತಿಗೆದಾರರು ತಿರುಗಿಬಿದ್ದರು. ಮೂಲತಃ ರಾಜಕೀಯ ಪಕ್ಷದ ಕಾರ್ಯಕರ್ತರೇ ಅಧ್ಯಕ್ಷರಾಗಿರುವ ಆ ನಿಗಮ ಮೂಲಕ ಸರ್ಕಾರ ಬಹುತೇಕ ಎಲ್ಲ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅದರಿಂದ ಸರ್ಕಾರದ ಉನ್ನತ ಸ್ಥಾನದಲ್ಲಿರುವವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
ಆನಂತರ ಹೈಕೋರ್ಟ್, ಆ ರೀತಿ ಕೆಟಿಪಿಪಿ ಕಾಯ್ದೆಯಿಂದ ವಿನಾಯ್ತಿ ನೀಡಿರುವುದು ಕಾನೂನು ಬಾಹಿರವೆಂದು ಅಭಿಪ್ರಾಯಪಟ್ಟು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications