ರಾಹುಲ್ ಭೇಟಿಯ ಹಿಂದೆ ರಾಜಕೀಯ ಇಲ್ಲವಾದರೆ...!
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಬಿಟ್ಟರೆ ನೀರು, ಬೆಳೆ, ಮೇವು, ಆದಾಯವಿಲ್ಲದೆ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು. ಒಂದು ಅಂದಾಜಿನ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕವೊಂದರಲ್ಲಿಯೇ ಸತ್ತ ರೈತರ ಸಂಖ್ಯೆ 850ಕ್ಕೂ ಹೆಚ್ಚು.
ಕರ್ನಾಟಕದಲ್ಲಿ ಮೇಲಧಿಕಾರಿಗಳ ದರ್ಪಕ್ಕೆ ಬೇಸತ್ತು ನೇಣು ಹಾಕಿಕೊಂಡ ಪೊಲೀಸ್ ಅಧಿಕಾರಿಗಳು, ರಾಜೀನಾಮೆ ಬಿಸಾಕಿದವರ ಸಂಖ್ಯೆ ಎಷ್ಟು? ಲೆಕ್ಕಹಾಕಿ ಹೇಳಿ. ಕೆಲ ದಿನಗಳ ಹಿಂದೆ ಬೆಳಗಾವಿಯ ಝಂಜರವಾಡದಲ್ಲಿ 6 ವರ್ಷದ ಕಾವೇರಿ ಬೋರ್ವೆಲ್ ನಲ್ಲಿ ಬಿದ್ದು ಸತ್ತೇಹೋದಳು.
ರಾಜಕೀಯ ಉದ್ದೇಶದಿಂದ ರಾಹುಲ್ ನಮ್ಮ ಮನೆಗೆ ಬಂದಿದ್ದಲ್ಲ: ಶಿವಣ್ಣ
ಇವರಲ್ಲಿ ಕೆಲವರು ದೇಶಕ್ಕೆ ಅನ್ನ ನೀಡುತ್ತಿರುವವರಾದರೆ, ಕೆಲವರು ಜನರ ರಕ್ಷಣೆಯ ಹೊಣೆ ಹೊತ್ತವರು. ಇಂಥವರನ್ನು ಕಳೆದುಕೊಂಡ ಕುಟುಂಬದವರ ನೋವಿಗೆ ಯಾವುದೇ ಬೆಲೆಯಿಲ್ಲವೆ? ಇನ್ನು ಉತ್ತರ ಕರ್ನಾಟಕದಲ್ಲಿ ಕಳಸಾಬಂಡೂರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಅದು ಇನ್ನೆಷ್ಟು ಜನರನ್ನು ಬಲಿ ಪಡೆಯುತ್ತದೋ?
ಇವರ ಕುಟುಂಬದವರ್ಯಾರನ್ನೂ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಸದ್ಯದಲ್ಲೇ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿಯವರು ಭೇಟಿಯಾಗಲೇ ಇಲ್ಲವಲ್ಲ? ಆದರೆ, ಇದ್ದಕ್ಕಿದ್ದ ಹಾಗೆ, ದೀಢೀರನೆ ಪಾರ್ವತಮ್ಮ ಅವರ ನಿಧನಾನಂತರ ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದು ಏಕೆ?
ಕಾಂಗ್ರೆಸ್ಸಿಗರಿಗೆ ಕಲಾಪಕ್ಕಿಂತ ರಾಹುಲ್ ಗಾಂಧಿ ಪೋಗ್ರಾಂ ಮುಖ್ಯವಾಯ್ತು
ರಾಜ್ ಕುಮಾರ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದು ಒಪ್ಪತಕ್ಕ ಮಾತು. ಆದರೆ, ಇದರ ರಾಜಕೀಯ ಇಲ್ಲವೇ ಇಲ್ಲ ಎಂಬುದು ಖಂಡಿತ ಒಪ್ಪತಕ್ಕ ಮಾತಲ್ಲ. ಯಾವುದೇ ರಾಜಕೀಯ ಲೆಕ್ಕಾಚಾರವಿಲ್ಲದೆ, ಕೇವಲ ಮಾನವೀಯತೆಯ ದೃಷ್ಟಿಯಿಂದ ರಾಜ್ ಕುಟುಂಬವನ್ನು ರಾಹುಲ್ ಭೇಟಿಯಾಗಿದ್ದೇ ಆದರೆ, ಅವರು ಇತರ ರೈತರ ಕುಟುಂಬವನ್ನೂ ಭೇಟಿಯಾಗಬೇಕಿತ್ತಲ್ಲ?
ರಾಹುಲ್ ಭೇಟಿಯ ಹಿಂದಿನ ಹುನ್ನಾರ
ಅದೇನೇ ಇರಲಿ, ರಾಹುಲ್ ಗಾಂಧಿಯವರು ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿದ್ದರ ಹಿಂದೆ ನಾನಾ ಊಹಾಪೋಹಗಳು ಕೇಳಿಬರುತ್ತಿವೆ. ಸಾವಿನ ಮನೆಯಲ್ಲಿ ಯಾರಾದರೂ ರಾಜಕೀಯ ಮಾಡುತ್ತಾರಾ ಎಂದು ಶಿವರಾಜ್ ಕುಮಾರ್ ಅವರು ಕೇಳಿದ್ದು ಕೂಡ ಸಮಂಜಸವಾಗಿದೆ. ಆದರೆ...
ಚಿತ್ರರಂಗದೊಡನೆ ಸಂಪರ್ಕವಿಲ್ಲ
ರಮ್ಯಾ ಅವರು ರಾಹುಲ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಬಿಟ್ಟರೆ, ಇಲ್ಲಿಯವರೆಗೆ ರಾಹುಲ್ ಗಾಂಧಿಯವರು ರಾಜ್ ಕುಟುಂಬದೊಡನೆಯಾಗಲಿ, ಕನ್ನಡ ಚಿತ್ರರಂಗದ ಜೊತೆಯಾಗಲಿ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಪಾರ್ವತಮ್ಮ ಅವರ ನಿಧಾನಂತರ ರಾಜ್ ಮಕ್ಕಳನ್ನು ಭೇಟಿಯಾಗಿದ್ದೇಕೆ? ಹಿಂದೆ ರಾಜ್, ವಿಷ್ಣು ಸತ್ತಾಗಲಾಗಲಿ ಅವರು ಏಕೆ ಭೇಟಿ ನೀಡಿರಲಿಲ್ಲ ಎಂಬ ಪ್ರಶ್ನೆಯನ್ನು ಓದುಗರು ಕೇಳುತ್ತಿದ್ದಾರೆ.
ಗೀತಾ ಅವರನ್ನು ಕಾಂಗ್ರೆಸ್ಸಿಗೆ ಸೆಳೆಯುವ ಪ್ರಯತ್ನ?
ಗೀತಾ ಅವರನ್ನು ಕಾಂಗ್ರೆಸ್ಸಿಗೆ ಸೆಳೆಯುವ ಪ್ರಯತ್ನವಾಗಿ ರಾಹುಲ್ ಗಾಂಧಿಯವರು ರಾಜ್ ಮನೆಗೆ ಭೇಟಿ ನೀಡಿರಬಹುದೆ ಎಂಬ ಅನುಮಾನ ಹುಟ್ಟದಿರಲು ಸಾಧ್ಯವೇ ಇಲ್ಲ. ಈ ಸಂಗತಿಯನ್ನು ಶಿವರಾಜ್ ಅವರು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಈ ಕುರಿತು ಈ ಸಮಯದಲ್ಲಿ ಮಾತುಕತೆ ಆಗುವುದು ಸಮಂಜಸವೂ ಅಲ್ಲ. ಆದರೆ, ರಾಹುಲ್ ದೂರದೃಷ್ಟಿಕೋನವುಳ್ಳವರು.
ರಾಜ್ ಕುಟುಂಬ ರಾಜಕೀಯದಿಂದ ದೂರ
ರಾಜ್ ಕುಟುಂಬ ಯಾವತ್ತೂ ರಾಜಕೀಯದಿಂದ ದೂರವೇ. ಅದಕ್ಕಾಗಿ ಅವರನ್ನು ಗೌರವಿಸಲೇಬೇಕು. ದಶಕಗಳ ಕಾಲ ಕಾಪಾಡಿಕೊಂಡು ಬಂದಿದ್ದ ಈ ಸಂಪ್ರದಾಯವನ್ನು ಮೀರಿ ಗೀತಾ ಶಿವರಾಜ್ ಕುಮಾರ್ ಅವರು, ಕುಟುಂಬದಲ್ಲಿ ವಿರೋಧವಿದ್ದರೂ ಜೆಡಿಎಸ್ ಟಿಕೆಟ್ ಪಡೆದು ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆಗೆ ನಿಂತು ಯಡಿಯೂರಪ್ಪನವರ ವಿರುದ್ಧ ಹೀನಾಯವಾಗಿ ಸೋತಿದ್ದರು.
ದೊಡ್ಮನೆಯಿಂದ ದೊಡ್ಡ ನ್ಯೂಸ್ ಬರಬಹುದೆ?
ಇದೆಲ್ಲಕ್ಕಿಂತ ಹೆಚ್ಚಾಗಿ ಇನ್ನೊಂದು ದೊಡ್ಡ ನ್ಯೂಸ್ ದೊಡ್ಮನೆಯಿಂದ ಇಣುಕುಹಾಕಿದೆ. ಅದೇನೆಂದರೆ, ರಾಹುಲ್ ಗಾಂಧಿಯವರು ಪುನೀತ್ ರಾಜ್ ಕುಮಾರ್ ಅವರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಇಳಿಸುವ ಯತ್ನಗಳೂ ನಡೆಯುತ್ತಿವೆ ಎಂಬುದು. ಪುನೀತ್ ಅವರು ರಾಜಕೀಯದಿಂದ ದೂರವೇ ಉಳಿದವರು. ಅವರು ಅತ್ತಿಗೆ ಪರವಾಗಿಯೂ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ, ಮುಂದೇನು ಕಾದಿದೆಯೋ ಬಲ್ಲವರಾರು?
ಅಂಬರೀಶ್ ಮತ್ತು ರಮ್ಯಾ ಗಟ್ಟಿಯಾಗಿ ತಳವೂರಿದ್ದಾರೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಕೂಡ ಬಾಕಿಯಿಲ್ಲ. ಕಾಂಗ್ರೆಸ್ ಕೂಡ ಭರ್ಜರಿ ಸಿದ್ಧತೆಯಲ್ಲಿ ಮುಳುಗಿದೆ. ಅಂಬರೀಶ್ ಮತ್ತು ರಮ್ಯಾ ಅವರನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷ ತಾರಾಮಣಿಗಳನ್ನು ಸೆಳೆದದ್ದು ಕಡಿಮೆಯೆ. ಕುಮಾರ್ ಬಂಗಾರಪ್ಪ ಇದ್ದರೂ ಇಲ್ಲದಂತೆ ಇದ್ದು, ಈಗ ಬಿಜೆಪಿ ಸೇರಿಕೊಂಡಿದ್ದಾರೆ. ಅಲ್ಲದೆ, ಗೀತಾ ಮತ್ತು ಅಣ್ಣ ಕುಮಾರ್ ನಡುವಿನ ಸಂಬಂಧವೂ ಅಷ್ಟಕ್ಕಷ್ಟೇ. ಪರಿಸ್ಥಿತಿ ಹೀಗಿರುವಾಗ ಗೀತಾ ಕಾಂಗ್ರೆಸ್ ಸೇರಿಕೊಂಡರೂ ಅಚ್ಚರಿಯಿಲ್ಲ.