ಕೊನೆಗೂ ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್!
ಬೆಂಗಳೂರು, ಮಾರ್ಚ್. 12 : ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಬಿಜೆಪಿ ಸೇರ್ಪಡೆಯಾಗುವ ದಿನಾಂಕ ನಿಗದಿಯಾಗಿದೆ.
ಉತ್ತರಪ್ರದೇಶದಲ್ಲಿನ ಚುನಾವಣೆಯ ಭರ್ಜರಿ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮುಂದಿನ ತಿಂಗಳ 9ರಂದು ನಡೆಯುವ ರಾಜ್ಯದ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ.[ಬಿಜೆಪಿಯಲ್ಲಿ ಎಸ್ ಎಂ ಕೃಷ್ಣ ಪಾಂಚಜನ್ಯ? ಯಡಿಯೂರಪ್ಪ ನೇರ ನುಡಿ]
ಅದಕ್ಕೆ ಪೂರಕವಾಗಿ ಕೃಷ್ಣ ಅವರೂ ವಿಳಂಬ ಮಾಡದೆ ಸೇರ್ಪಡೆಯಾಗಲಿ ಎಂಬ ನಿಲುವು ರಾಜ್ಯ ಬಿಜೆಪಿ ನಾಯಕರದ್ದಾಗಿದೆ. ಈ ಹಿನ್ನಲೆಯಲ್ಲಿ ಇದೇ ಮಾರ್ಚ್ 15ರಂದು (ಬುಧವಾರ) ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಅದಕ್ಕೂ ಮೊದಲು 14ರಂದು ಕೃಷ್ಣ ಅವರು ದೆಹಲಿಗೆ ತೆರಳಿ ಅಮಿತ್ ಶಾ ಅವರೊಂದಿಗೆ ಪೂರ್ವಭಾವಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿಯ ಹಿರಿಯ ಎಲ್ಲಾ ನಾಯಕರೂ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.