ಸಿಎಂ ಸಹಿ ಇದ್ದ ಮಾತ್ರಕ್ಕೆ ವರ್ಗಾವಣೆ ಕಾನೂನು ಬದ್ಧವಲ್ಲ; ಕೋರ್ಟ್
ಬೆಂಗಳೂರು, ಡಿಸೆಂಬರ್ 01: ಮುಖ್ಯಮಂತ್ರಿಗಳು ಸಹಿಯಿದ್ದ ಮಾತ್ರಕ್ಕೆ ಆ ವರ್ಗಾವಣೆ ಕಾನೂನುಬದ್ಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕಿರಿಯ ಶ್ರೇಣಿ ವೃಂದದ (ಕೇಡರ್) ಅಧಿಕಾರಿಯನ್ನು ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿ ವರ್ಗಾಯಿಸುವ ಆದೇಶಕ್ಕೆ ಸರಿಯಾದ ಕಾರಣ ನಮೂದಿಸುವುದು ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರು-1 ಹುದ್ದೆಗೆ ತಮ್ಮನ್ನು ನಿಯೋಜಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ಪ್ರಶ್ನಿಸಿ ಹಿರಿಯ ಶ್ರೇಣಿ ವೃಂದದ ಕೆಎಎಸ್ ಅಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಮಾರ್ಗಸೂಚಿಗೆ ಆದೇಶ: ಅಲ್ಲದೆ, ಕಿರಿಯ ಶ್ರೇಣಿ ವೃಂದದ ಅಧಿಕಾರಿಗಳನ್ನು ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿ ವರ್ಗಾಯಿಸುವಾಗ ಅನುಸರಿಸಬೇಕಾದ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸುವಂತೆ ಇದೇ ವೇಳೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಇದೀಗ ಹೈಕೋರ್ಟ್, ಪಾತರಾಜು ಅವರ ಆರಂಭಿಕ ನಿಯೋಜನೆ (ಪೋಸ್ಟಿಂಗ್) ಅನ್ನು ಪರಿಗಣಿಸಿದರೆ, ಪ್ರಜ್ಞಾ ಸಹ ಹಿರಿಯ ಶ್ರೇಣಿ ವೃಂದದ ಕೆಎಎಸ್ ಅಧಿಕಾರಿಯಾಗಿದ್ದಾರೆ. ಅದರಂತೆ ಪಾತರಾಜು ಹುದ್ದೆಯನ್ನು ಮೇಲ್ದರ್ಜೆಗೇರಿಸಿದಾಗ ಅವರು ಪ್ರಯೋಜನ ಪಡೆಯುವುದಾದರೆ, ಅದೇ ಪ್ರಯೋಜನ ಹೊಂದಲು ಪ್ರಜ್ಞಾ ಅರ್ಹರಾಗಿರುತ್ತಾರೆ.
ಪಾತರಾಜು ಅವರನ್ನು ನಿರ್ದೇಶಕರ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿತ್ತು. ಆ ಹುದ್ದೆಗೆ ಮತ್ತೊಬ್ಬ ಅರ್ಹರು ಲಭ್ಯವಾಗುವರೆಗೆ ಮಾತ್ರ. ಇದರಿಂದ ಪ್ರಜ್ಞಾ ಅವರಿಗಿಂತ ಪಾತರಾಜು ಆ ಹುದ್ದೆ ಹೊಂದಲು ಹೆಚ್ಚು ಅರ್ಹರು ಎನ್ನಲಾಗದು ಎಂದು ತಿಳಿಸಿತು.
ಅಲ್ಲದೆ, ಪ್ರಜ್ಞಾ ಅವರ ವರ್ಗಾವಣೆ ಆದೇಶಕ್ಕೆ ಮುಖ್ಯಮಂತ್ರಿಗಳ ಅನುಮೋದನೆ ಪಡೆಯಲಾಗಿತ್ತು. ಮೇಲಾಗಿ ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಅಗತ್ಯಗಾಗಿ ವರ್ಗಾಯಿಸಲಾಗಿತ್ತು. ಆದ್ದರಿಂದ ಅವರ ವರ್ಗಾವಣೆ ಅದೇಶ ಸೂಕ್ತವಾಗಿದೆ ತಿಳಿಸಿ ಅವರ ವರ್ಗಾವಣೆ ಆದೇಶ ಎತ್ತಿಹಿಡಿದಿದೆ. ಜತೆಗೆ, ಪಾತರಾಜು ಅವರು ಸರ್ಕಾರದ ಮುಖ್ಯ ಕಚೇರಿಗೆ ವರದಿ ಮಾಡಿಕೊಳ್ಳಬೇಕು. ಸರ್ಕಾರ ಅವರಿಗೆ ಕೂಡಲೇ ಹುದ್ದೆ ನೀಡಬೇಕೆಂದು ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಡಾ. ಪ್ರಜ್ಞಾ ಅಮ್ಮೆಂಬಳ ಅವರು 2006ರಲ್ಲಿ ನೇರ ನೇಮಕಾತಿ ಮೂಲಕ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು. ಅವರಿಗೆ 2015ರಲ್ಲಿ ಕೆಎಎಸ್ ಕಿರಿಯ ಶ್ರೇಣಿಗೆ ಮತ್ತು 2021ರ ಜನವರಿಯಲ್ಲಿ ಕೆಎಎಸ್ ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಲಾಗಿತ್ತು. 2023ರ ಜು.6ರಂದು ಅವರನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾಯಿಸಲಾಗಿತ್ತು.
ಈ ಹುದ್ದೆಯಲ್ಲಿದ್ದ ಅಧಿಕಾರಿ ಪಾತರಾಜು ಕೆಎಟಿಗೆ ತಕರಾರು ಅರ್ಜಿ ಸಲ್ಲಿಸಿ, ಮುಖ್ಯಮಂತ್ರಿಗಳ ಪೂರ್ವಾನುಮತಿಯಿಲ್ಲದೆ ಡಾ. ಪ್ರಜ್ಞಾ ಅವರನ್ನು ವರ್ಗಾಯಿಸಲಾಗಿದೆ ಎಂದಿದ್ದರು. ರಾಜ್ಯ ಸರ್ಕಾರ ವಾದ ಮಂಡಿಸಿ, ಪ್ರಜ್ಞಾ ವರ್ಗಾವಣೆಗೆ ಸಿಎಂ ಅವರು ಪೂರ್ವಾನುಮತಿ ನೀಡಿದ್ದರು ಎಂದು ಸಮರ್ಥಿಸಿಕೊಂಡಿತ್ತು.
ಆದರೆ, ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆ ಹೊಂದಲು ಪ್ರಜ್ಞಾ ಅನರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ ಕೆಎಟಿ, ಅವರ ವರ್ಗಾವಣೆ ಆದೇಶ ರದ್ದುಪಡಿಸಿತ್ತು. ಜತೆಗೆ, ಪಾತರಾಜು ಅವರನ್ನು ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿಸಲು ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಜ್ಞಾ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications