ವಿದ್ಯುತ್ ಬಿಲ್ ಕಟ್ಟಲ್ಲ ಎಂದವರ ವಿರುದ್ಧ ಪವರ್ ಕಟ್ ಅಸ್ತ್ರ: ಇಂಧನ ಇಲಾಖೆಯ ಹೊಸ ಪ್ಲಾನ್
ಬೆಂಗಳೂರು, ಜೂನ್ 1: ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ, ನಮ್ಮ ಮನೆಗೆ ಕರೆಂಟ್ ಬಿಲ್ ಕೊಡಲು ಬರಬೇಡಿ, ನಾವು ಬಿಲ್ ಕಟ್ಟಲ್ಲ, ಕರೆಂಟ್ ಬಿಲ್ ಅನ್ನು ಸಿದ್ದರಾಮಯ್ಯ, ಡಿಕೆಶಿ ಬಳಿ ಕೇಳಿ ಎಂದು ಪಟ್ಟು ಹಿಡಿದವರ ವಿರುದ್ಧ ರಾಜ್ಯ ಇಂಧನ ಇಲಾಖೆ ಹೊಸ ಅಸ್ತ್ರ ಉಪಯೋಗಿಸಲು ಮುಂದಾಗಿದೆ. ಕಾಂಗ್ರೆಸ್ ಭರವಸೆ ನೀಡಿದೆ ನಾವು ವಿದ್ಯುತ್ ಬಿಲ್ಲ ಕಟ್ಟಲ್ಲ ಎಂದವರಿಗೆ ಬಿಸಿ ಮುಟ್ಟಿಸಲು ಇಂಧನ ಇಲಾಖೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ.
ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಹಾಗೂ ಪ್ರಣಾಳಿಕೆಯಲ್ಲಿ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದರು. ಫ್ರೀ..ಫ್ರೀ..ಫ್ರೀ ಎಂದು ಕಾಂಗ್ರೆಸ್ ನಾಯಕರು ಮತದಾರರ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಜನ ಕೂಡ 200 ಯುನಿಟ್ ವಿದ್ಯುತ್ ಉಚಿತ ಎಂಬ ಭರವಸೆಗೆ ಕಟ್ಟು ಬಿದ್ದಿದ್ದು, ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನೂರಾರು ಮನೆಗಳ ವಿದ್ಯುತ್ ಬಿಲ್ ಬಾಕಿಯಾಗುತ್ತಿದ್ದು, ಇಂಧನ ಇಲಾಖೆಗೆ ಹೊಸ ತಲೆ ನೋವು ಆರಂಭವಾಗಿತ್ತು. ಹೀಗಾಗಿ ಇಲಾಖೆ ದೃಢ ನಿರ್ಧಾರ ಮಾಡಿದ್ದು, ವಿದ್ಯುತ್ ಬಿಲ್ ಕಟ್ಟಲ್ಲ ಎಂದವರ ಮನೆಯ ಪವರ್ ಕಟ್ ಮಾಡುವಂತೆ, ಮನೆಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಗೃಹ ಜ್ಯೋತಿ ಯೋಜನೆ ಇನ್ನು ಜಾರಿಗೆ ಬಂದಿಲ್ಲ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧೀಕೃತ ಆದೇಶ ಬಂದಿಲ್ಲ. ಹೀಗಾಗಿ ಆದೇಶ ಬರುವವವರೆಗೂ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟಬೇಕು. ಒಂದು ವೇಳೆ ಬಿಲ್ ಕಟ್ಟಲ್ಲ ಎಂದು ವಾಗ್ವಾದಕ್ಕಿಳಿದರೆ ಅವರ ಮನೆಯ ಪವರ್ ಕಟ್ ಮಾಡಿ ಎಂದು ಇಂಧನ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಇಂಧನ ಇಲಾಖೆ ಎರಡು ತಿಂಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡವರ ಮನೆಯ ಪವರ್ ಕಟ್ ಮೂರು ಹಾಗೂ ಅದಕ್ಕಿಂತ ಜಾಸ್ತಿ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡವರ ಮನೆಯ ವಿದ್ಯುತ್ ಲೈಸೆನ್ಸ್ ರದ್ದು ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ವಿದ್ಯುತ್ ಬಿಲ್ ಕಟ್ಟುವ ವಿಚಾರಕ್ಕೆ ನಡೆದ ಅವಾಂತರಗಳು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಜನ ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದಿದ್ದರು. ವಿದ್ಯುತ್ ಬಿಲ್ ಕೊಡಲು ಬಂದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಬಿಲ್ ಅನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಬಳಿಯೇ ಕೇಳಿ ಎಂದು ಬಹಿರಂಗವಾಗಿ ಕಿಡಿಕಾರಿದ್ದರು.
ಇದೆಲ್ಲದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತೆ ಕೊಪ್ಪಳದಲ್ಲಿ ನಡೆದ ಘಟನೆಯಿಂದ ವಿಷಯ ತಾರಕ್ಕೇರಿರುವ ಬಿಸಿ ಇಂಧನ ಇಲಾಖೆಗೆ ತಟ್ಟಿತ್ತು. ಜೆಸ್ಕಾಂ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿದ್ಯುತ್ ಬಿಲ್ ಕೇಳಲು ಹೋದ ಸಿಬ್ಬಂದಿ ಮೇಲೆ ವ್ಯಕ್ತಿ ಮನಬಂದಂತೆ ಹಲ್ಲೆ ನಡೆಸಿದ್ದರು. ಇಂತಹ ಘಟನೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಮೇಲೆ ಗೃಹ ಜ್ಯೋತಿ ಯೋಜನೆ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದು ಇಂಧನ ಇಲಾಖೆಗೆ ದೊಡ್ಡ ತಲೆ ನೋವಾಗಿತ್ತು. ದಿನ ನಿತ್ಯ ವಿದ್ಯುತ್ ಬಿಲ್ ವಿಚಾರಕ್ಕೆ ಲೈನ್ಮ್ಯಾನ್ ಸಿಬ್ಬಂದಿ ಹಾಗೂ ಜನರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಹೀಗಾಗಿ ಸರ್ಕಾರದಿಂದ ಆದೇಶ ಬರುವರೆಗೂ ಇಂಧನ ಇಲಾಖೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಜನರಿಗೆ ತಿಳಿಸಿದೆ.












Click it and Unblock the Notifications