ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪುಂಡಾನೆ ಪ್ರತ್ಯಕ್ಷ
ರಾಮನಗರ, ಸೆ. 19 : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಧ್ಯಾಹ್ನ ಪುಂಡಾನೆಯೊಂದು ಕಾಣಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಕುಂಬಳಗೋಡಿನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪುಂಡಾನೆ ಪ್ರತ್ಯಕ್ಷವಾಗಿತ್ತು. ಆನೆ ರಸ್ತೆಗೆ ಬಂದಾಗ ಎದುರು ಸಿಕ್ಕ ಕಾರನ್ನು ಅದು ಗುದ್ದಿ ಉರುಳಿಸಿದೆ. ಕಾರಿನಲ್ಲಿದ್ದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ.

ಕಾರನ್ನು ಗುದ್ದಿ ಬೀಳಿಸಿದ ಆನೆ, ನಂತರ ರಸ್ತೆ ಬದಿಯ ತಡೆಗೋಡೆಯನ್ನು ಧ್ವಂಸಗೊಳಿಸಿದೆ. ಕಾರಿನಲ್ಲಿದ್ದವರನ್ನು ರಕ್ಷಿಸಲು ಬಂದವರ ಬೈಕ್ ಅನ್ನು ಜಖಂಗೊಳಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು. [ಮೈಸೂರಿನಲ್ಲಿ ಇನ್ನು ಸಿಗೋದು 3 ಆನೆಗಳು ಮಾತ್ರ!]
ಒಂದು ಆನೆ ಮಾತ್ರ ರಸ್ತೆಗೆ ಬಂದಿತ್ತು. ಬಹುಶಃ ಗುಂಪಿನಿಂದ ಅದು ತಪ್ಪಿಸಿಕೊಂಡು ಬಂದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಕಾಡಾನೆ ಕಾಣಿಸಿಕೊಂಡಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸುತ್ತಮುತ್ತಲ ಕಾಡಿನಲ್ಲೂ ಎಲ್ಲೂ ಆನೆಗಳ ಸಂಚಾರವಿಲ್ಲ, ಜನರು ನಿರಾತಂಕವಾಗಿ ಹೆದ್ದಾರಿಯಲ್ಲಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. [ಮೈಸೂರು ಜಂಬೂ ಸವಾರಿ ಆನೆಗಳ ಬಯೋಡೇಟಾ]












Click it and Unblock the Notifications