ಕಾಂಗ್ರೆಸ್ಸಿನ ಕುಟುಂಬ ರಾಜಕೀಯದಿಂದ ಟಿಕೆಟ್ ಹಂಚಿಕೆ ಗೊಂದಲ
ಬೆಂಗಳೂರು, ಏಪ್ರಿಲ್ 11: ಸಾವಿರಾರು ಅರ್ಜಿಯನ್ನು ಪರಿಶೀಲಿಸಿದ ಬಳಿಕವೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುವಲ್ಲಿ ಮತ್ತೆ ವಿಳಂಬವಾಗಿದೆ. ಏಪ್ರಿಲ್ 14ರ ನಂತರ ಮೊದಲ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ಕೊನೆಕ್ಷಣದಲ್ಲಿ ಕುಟುಂಬ ರಾಜಕೀಯದ ದೆಸೆಯಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಗೊಂದಲ ಇನ್ನಷ್ಟು ಹೆಚ್ಚಾಗಿದೆ.
ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಹೆಸರು ಘೋಷಣೆ, ಕಾಂಗ್ರೆಸ್ಸಿಗೆ ಹಿನ್ನಡೆಯೆ?
ಮುಖ್ಯವಾಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಲೋಕೋಪಯೋಗಿ ಸಚಿವ ಡಾ. ಎಚ್. ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಹಾಗೂ ಪಶುಸಂಗೋಪನಾ ಸಚಿವ ಎ ಮಂಜು ಅವರ ಪುತ್ರ ಮಂಥರ್ ಗೌಡ ಅವರಿಗೆ ನಿರಾಶೆ ಕಾದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಮೂಲ ಪ್ರಕಾರ,ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ಪುತ್ರ ಸಂತೋಷ್ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಕ್ರಮವಾಗಿ ಚಿಕ್ಕನಾಯಕನಹಳ್ಳಿ ಹಾಗೂ ಜಯನಗರದಲ್ಲಿ ಸ್ಪರ್ಧಿಸಲು ಸೂಚಿಸುವ ಸಾಧ್ಯತೆ ನಿಚ್ಚಳವಾಗಿದೆ.
ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ
ಏಪ್ರಿಲ್ 13ರಂದು ಸ್ಕ್ರೀನಿಂಗ್ ಕಮಿಟಿ ನೀಡಿರುವ ಶಿಫಾರಸ್ಸಿನ ಬಗ್ಗೆ ಚುನಾವಣಾ ಸಮಿತಿ ಅಂತಿಮ ಸಭೆ ನಡೆಸಲಿದ್ದು, ಏಪ್ರಿಲ್ 13 ಅಥವಾ 14ರಂದು ಅಧಿಕೃತವಾಗಿ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ.
ಎಲ್ಲಾ ಶಾಸಕರಿಗೂ ಟಿಕೆಟ್ ಇಲ್ಲ
ಹಾಲಿ 122 ಶಾಸಕರ ಪೈಕಿ 119 ಶಾಸಕರಿಗೆ ಟಿಕೆಟ್ ಖಚಿತ ಎನ್ನಲಾಗಿತ್ತು. ಆದರೆ, ಕೊಳ್ಳೇಗಾಲದ ಶಾಸಕ ಜಯಣ್ಣ, ಮಾಜಿ ಸಚಿವ ಮನೋಹರ್ ಎಚ್. ತಹಶೀಲ್ದಾರ್ (ಹಾನಗಲ್), ಕೆ.ಶಿವಮೂರ್ತಿ (ಮಾಯಕೊಂಡ), ಜಿ. ರಾಮಕೃಷ್ಣ (ಕಲಬುರಗಿ ಗ್ರಾಮಾಂತರ), ಬಿ.ಬಿ. ಚಿಮ್ಮನಕಟ್ಟಿ (ಬಾದಾಮಿ) ಸೇರಿದಂತೆ ಹತ್ತು ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡದಿರಲು ಹೈಕಮಾಂಡ್ ನಿರ್ಧರಿಸಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ, ಮಾಯಕೊಂಡ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಹೀರಾ ನಾಯಕ್ ಹೆಸರು ಅಂತಿಮಗೊಳಿಸಲಾಗಿದೆ
10 ವಲಸಿಗರಿಗೆ ಟಿಕೆಟ್ ಖಚಿತ
ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಕಾಂಗ್ರೆಸ್ಸಿಗೆ ವಲಸೆ ಬಂದಿರುವವರಿಗೆ ಟಿಕೆಟ್ ಖಚಿತವಾಗಿದೆ. ಈ ಪೈಕಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಬಾಲಕೃಷ್ಣ, ಉದ್ಯಮಿ ಅಶೋಕ್ ಖೇಣಿ ಪ್ರಮುಖರು.
122 ಹಾಲಿ ಶಾಸಕರಿದ್ದಾರೆ ಅವರ ಕಾರ್ಯಕ್ಷಮತೆ, ಅವರ ಮೌಲ್ಯಮಾಪನ ಮಾಡಿ, ಟಿಕೆಟ್ ನೀಡಲಾಗುತ್ತದೆ. ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಹೀಗಾಗಿ , 91 ಅಭ್ಯರ್ಥಿಗಳ ಪಟ್ಟಿ ಮಾತ್ರ ಕುತೂಹಲ ಕೆರಳಿಸಿದೆ.ಅಭ್ಯರ್ಥಿ ಆಯ್ಕೆಗೆ ಮಾನದಂಡ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಸಾವಿರ ಮತಗಳಿಗಿಂತ ಕಡಿಮೆ ಅಂತರದಲ್ಲಿ ಪರಾಭವಗೊಂಡು ಕ್ಷೇತ್ರದ ಜೊತೆ ಒಡನಾಟ ಇಟ್ಟುಕೊಂಡಿರುವ 40 ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ವಯೋಮಿತಿ, ಅನಾರೋಗ್ಯ ಹಾಗೂ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವು ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್ ನೀಡುವ ತೀರ್ಮಾನ ಕೈಗೊಂಡಿರುವ ಸ್ಕ್ರೀನಿಂಗ್ ಕಮಿಟಿ ವರಿಷ್ಠರಿಗೆ ಶಿಫಾರಸ್ಸು ಮಾಡಿದೆ.
ಕೆಲ ಹಿರಿಯರಿಗೆ ವಿನಾಯಿತಿ
ವಯೋಮಿತಿಯನ್ನು ಸಡಿಲಿಸಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಮಾಲಕರೆಡ್ಡಿ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ಪ್ರತಿ ಕ್ಷೇತ್ರಗಳ ಬಗ್ಗೆ ಪರಿಶೀಲನೆ ನಡೆಸಿ, ಸರಿ ಸುಮಾರು 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಆಸಕ್ತ ಅಭ್ಯರ್ಥಿಗಳ ಪರಮರ್ಶನಾ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ. ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಸೇರಿದಂತೆ 16 ಮಂದಿ ಇದ್ದಾರೆ. ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ