ಉಪ ಚುನಾವಣೆ ಫಲಿತಾಂಶ; 8ಕ್ಕೆ ಮತ ಎಣಿಕೆ ಆರಂಭ
ಬೆಂಗಳೂರು, ಡಿಸೆಂಬರ್ 8 : ಕರ್ನಾಟಕ ಸರ್ಕಾರದ ಭವಿಷ್ಯ ತೀರ್ಮಾನಿಸುವ 15 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಚುನಾವಣಾ ಆಯೋಗ ಸಿದ್ಧವಾಗಿದೆ. ಗುರುವಾರ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 67.90ರಷ್ಟು ಮತದಾನವಾಗಿತ್ತು.
ಸೋಮವಾರ ಬೆಳಗ್ಗೆ 8 ಗಂಟೆಗೆ 15 ಕ್ಷೇತ್ರಗಳಲ್ಲಿಯೂ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಯಾರಿಗೆ ಎಷ್ಟು ಸ್ಥಾನ ಸಿಗಲಿದೆ? ಎಂಬ ಚರ್ಚೆ ಜೋರಾಗಿದೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಪಡೆಯಲು 7 ಸ್ಥಾನಗಳಲ್ಲಿ ಜಯಗಳಿಸಲೇಬೇಕು. ಒಂದು ವೇಳೆ ಬಹುಮತ ಬಾರದಿದ್ದರೆ ಮುಂದೇನು? ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.
ಅಭ್ಯರ್ಥಿಗಳ ಏಜೆಂಟರು, ಕೌಟಿಂಗ್ ಏಜೆಂಟರು ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಅಥವ ಕೈ ಚೀಲಗಳನ್ನು ತರುವಂತಿಲ್ಲ. ಏಜೆಂಟರು, ಕೌಟಿಂಗ್ ಏಜೆಂಟ್ಗಳಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 6.30ಕ್ಕೆ ಮತ ಎಣಿಕೆ ಸಿಬ್ಬಂದಿ ಕೇಂದ್ರಕ್ಕೆ ಆಗಮಿಸಲಿದ್ದು, 7.30ಕ್ಕೆ ಸ್ಟ್ರಾಂಗ್ ರೂಂ ತೆರಯಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್ ಬಳಕೆ ಮಾಡಲು ಅವಕಾಶವಿದ್ದು, ಅವರಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ.

ಬೆಟ್ಟಿಂಗ್ ಭರಾಟೆ ಜೋರು
ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ? ಎಂಬ ಲೆಕ್ಕಾಚಾರ ಜೋರಾಗಿದೆ. ಹಲವು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಹೊಸಕೋಟೆ, ಹುಣಸೂರು, ಗೋಕಾಕ್, ಕೆ. ಆರ್. ಪೇಟೆ ಕ್ಷೇತ್ರಗಳಲ್ಲಿ ಪರ, ವಿರುದ್ಧವಾಗಿ ಬೆಟ್ಟಿಂಟ್ ಕಟ್ಟಲಾಗಿದ್ದು, ಹಣ, ಕೋಳಿ, ಕುರಿಯನ್ನು ಪಣಕ್ಕೆ ಇಡಲಾಗಿದೆ.

ಬೆಂಗಳೂರಿನ 4 ಕ್ಷೇತ್ರಗಳು
ಬೆಂಗಳೂರಿನ ಕೆ.ಆರ್. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ ಕ್ಷೇತ್ರದ ಮತ ಎಣಿಕೆಯೂ ಸೋಮವಾರ ನಡೆಯಲಿದೆ. ಮತ ಎಣಿಕೆ ಭದ್ರತೆಗಾಗಿ 1,300 ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಎಣಿಕೆ ಕೇಂದ್ರದ ಸುತ್ತಲಿನ ಭದ್ರತೆಯ ಹೊಣೆಯನ್ನು ಇಬ್ಬರು ಡಿಸಿಪಿಗಳು ನೋಡಿಕೊಳ್ಳಲಿದ್ದಾರೆ.

ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಹೋರಾಟ
ಸದ್ಯ ಬಿಜೆಪಿ ಕರ್ನಾಟಕ ವಿಧಾನಸಭೆಯಲ್ಲಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕು. ಆಗ ಮಾತ್ರ ಸರ್ಕಾರ ಬಹುಮತ ಪಡೆಯಲು ಸಾಧ್ಯ. ಇನ್ನೂ 2 ಕ್ಷೇತ್ರದ ಉಪ ಚುನಾವಣೆ ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಲಿದೆ.

ಕ್ಷೇತ್ರ ಉಳಿಸಿಕೊಳ್ಳುವ ಚಿಂತೆ
ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಕ್ಷೇತ್ರ ಉಳಿಸಿಕೊಳ್ಳುವ ಚಿಂತೆ. 12 ಕಾಂಗ್ರೆಸ್, 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಯಾವ ಕ್ಷೇತ್ರದಲ್ಲಿ ಸೋತರೂ ಎರಡೂ ಪಕ್ಷಗಳಿಗೆ ನಷ್ಟವಾದಂತೆಯೇ ಲೆಕ್ಕ.












Click it and Unblock the Notifications