ರಾಜ್ಯದಲ್ಲಿ ಮತ್ತೊಂದು ಚುನಾವಣೆ ಪ್ರಕಟ: ಡಿಸೆಂಬರ್ 12 ಕ್ಕೆ ಮತದಾನ
ಬೆಂಗಳೂರು, ನವೆಂಬರ್ 25: ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾದ ಉಪಚುನಾವಣೆ ರಂಗೇರಿರುವ ಹೊತ್ತಿನಲ್ಲಿಯೇ ಚುನಾವಣಾ ಆಯೋಗವು ಮತ್ತೊಂದು ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ.
ರಾಜ್ಯಸಭಾ ಸದಸ್ಯರಾಗಿದ್ದ ರಾಮಮೂರ್ತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಕೇಂದ್ರ ಚುನಾವಣೆ ಆಯೋಗವು ಚುನಾವಣೆ ದಿನಾಂಕ ಘೋಷಿಸಿದ್ದು, ಕರ್ನಾಟಕ ವಿಧಾನಸಭೆಯು ಈ ಕುರಿತು ಇಂದು ಅಧಿಸೂಚನೆ ಹೊರಡಿಸಿದೆ.
ಉಪ ಚುನಾವಣೆ ದಿನ ಮರುನಿಗದಿ: ಡಿ. 5ಕ್ಕೆ ಚುನಾವಣೆ
ಅಧಿಸೂಚನೆ ಹೊರಡಿಸಿರುವಂತೆ ಡಿಸೆಂಬರ್ 2 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 3 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ ಡಿಸೆಂಬರ್ 5 ಆಗಿದೆ.
ಅವಶ್ಯಕತೆ ಇದ್ದಲ್ಲಿ ಡಿಸೆಂಬರ್ 12 ರಂದು ಮತದಾನ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 4 ವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತಗಳ ಎಣಿಕೆಯೂ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಡಿಸೆಂಬರ್ 16 ರಕ್ಕೆ ಕೊನೆ ಆಗಲಿದೆ.
ನಿವೃತ್ತ ಪೊಲೀಸ್ ಅಧಿಕಾರಿ ರಾಮಮೂರ್ತಿ ಅವರು ಕಳೆದ ತಿಂಗಳಷ್ಟೆ ಕಾಂಗ್ರೆಸ್ ನಿಂದ ರಾಜ್ಯಸಭೆ ಗೆ ಆಯ್ಕೆ ಆಗಿದ್ದರು. ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಈ ಚುನಾವಣೆಗೆ ಅವರು ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ.