ಪರಮೇಶ್ವರ್ ಸಮ್ಮುಖದಲ್ಲಿ ಮಂಡ್ಯ ಕಾಂಗ್ರೆಸ್ಸಿಗರ ಬಡಿದಾಟ

ಮಂಡ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನೀಡುವ ಕುರಿತು ಮಾಹಿತಿ ನೀಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶುಕ್ರವಾರ ಪ್ರತಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಸತ್ಯಾನಂದ ಮತ್ತು ಅಂಬರೀಶ್ ಬೆಂಬಲಿಗರು ಪರಸ್ಪರ ಕಿತ್ತಾಡಿಕೊಂಡರು. ಸತ್ಯಾನಂದ ಅವರನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಕಳಿಸಬೇಕು ಎಂದು ಕುರ್ಚಿಗಳನ್ನು ಎಸೆದು ತಮ್ಮ ಆಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಠಿ ಪ್ರಾರಂಭವಾದ ತಕ್ಷಣ ಪರಮೇಶ್ವರ್ ಜೊತೆ ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಸತ್ಯಾನಂದ ಇದ್ದರು. ಮಂಡ್ಯ ನಗರಸಭೆ ಕಾಂಗ್ರೆಸ್ ಸ್ಥಾನವನ್ನು ಅಂಬರೀಶ್ ಬೆಂಬಲಿಗರು ಮಾರಿಕೊಂಡಿದ್ದಾರೆ ಎಂದು ಸತ್ಯಾನಂದ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನೀಡಿದ ಸತ್ಯಾನಂದ ವೇದಿಕೆ ಹತ್ತಿರ ಸುಳಿಯಬಾರದು ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆಯಬೇಕು ಎಂದು ಅಂಬರೀಶ್ ಬೆಂಬಲಿಗರು ಒತ್ತಾಯಿಸಿದರು.
ಇದರಿಂದ ಅಂಬರೀಶ್ ಮತ್ತು ಸತ್ಯಾನಂದ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ಹೆಚ್ಚಾಗಿ ವೇದಿಕೆಯಲ್ಲಿದ್ದ ಮೈಕ್ ಅನ್ನು ಕಿತ್ತೆಸೆದ ಅಂಬರೀಶ್ ಬೆಂಬಲಿಗರು, ಸತ್ಯಾನಂದ ಬೆಂಬಲಿಗರ ಮೇಲೆ ಕುರ್ಚಿಗಳನ್ನು ಎಸೆದರು. ಸ್ವತಃ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬೆಂಬಲಿಗರನ್ನು ಸಮಾಧಾನ ಪಡಿಸಲು ವಿಫಲರಾದರು.
ವೇದಿಕೆಯಲ್ಲಿದ್ದ ಪರಮೇಶ್ವರ್, ಸಂಸದೆ ರಮ್ಯಾ ಮುಂತಾದವರು ಮನವಿ ಮಾಡಿದರು ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ಕಡಿಮೆ ಆಗಲಿಲ್ಲ. ಅಂತಿಮ ಹಂತವಾಗಿ ಸತ್ಯಾನಂದ ಪತ್ರಿಕಾಗೋಷ್ಠಿಯಿಂದ ಹೊರನಡೆದ ಮೇಲೆ ವಿವಾದ ತಣ್ಣಗಾಯಿತು. ಈ ಮೂಲಕ ಮಂಡ್ಯ ಜಿಲ್ಲಾ ಕಾಂಗ್ರೆಸ್ ಭಿನ್ನಮತ ಮತ್ತೊಮ್ಮೆ ಬೀದಿಗೆ ಬಂದಂತಾಯಿತು.
ಸತ್ಯಾನಂದ ಪ್ರತಿಕ್ರಿಯೆ : ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವಅಂಬರೀಶ್ ಹಣ ಮತ್ತು ತೋಳ್ಬಲಬಳಸಿ ನನ್ನನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಅಂಬರೀಶ್ ಬೆಂಬಲಿಗರು ಮಂಡ್ಯ ನಗರಸಭೆ ಸ್ಥಾನವನ್ನು ಮಾರಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದರಿಂದ ನನ್ನ ಮೇಲೆ, ಹಲ್ಲೆ ನಡೆಸಿದ್ದಾರೆ ಎಂದು ಸತ್ಯಾನಂದ ಅವರು ದೂರಿದರು.












Click it and Unblock the Notifications