ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?
ಬೆಂಗಳೂರು, ಜೂನ್ 07: ನಿನ್ನೆಯಷ್ಟೆ ಸಚಿವ ಸಂಪುಟ ವಿಸ್ತರಣೆ ಆಗಿದೆ. ರಾಜ್ಯದ ಏಳು ಕೋಟಿ ಜನರ ಭವಿಷ್ಯವನ್ನು ನಿರ್ಧಾರ ಮಾಡುವ ಘಣ ಸ್ಥಾನದಲ್ಲಿ ಅವರು ಕೂತಿದ್ದಾರೆ.
ರಾಜ್ಯದ ಬಗ್ಗೆ ಅತ್ಯಂತ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವ ಈ ಮಂತ್ರಿಗಳ ವಿದ್ಯಾರ್ಹತೆ ಏಷ್ಟು?. ಎಷ್ಟು ಜನ ಮಂತ್ರಿಗಳು ಕನಿಷ್ಠ ಪಿಯುಸಿಯನ್ನಾದರೂ ಪಾಸು ಮಾಡಿದ್ದಾರೆ?
ಹಾಗೆ ನೋಡಿದರೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ 25 ಮಂತ್ರಿಗಳಲ್ಲಿ 8 ಜನ ಮಂತ್ರಿಗಳು ಪಿಯುಸಿ ದಾಟಿ ಮುಂದೆ ಓದಿಲ್ಲ. ಆದರೂ ಇವರುಗಳು ಕೋಟ್ಯಾತರ ಜನರ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಬನ್ನಿ ನಮ್ಮ ಮಂತ್ರಿಗಳು ಎಷ್ಟು ಓದಿದ್ದಾರೆ ತಿಳಿಯೋಣ....

ಪ್ರಮುಖ ಮಂತ್ರಿ ಎಚ್ಡಿ ರೇವಣ್ಣ ಓದಿರುವುದೆಷ್ಟು?
ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಬುಟ್ಟಿಗೆ ಹಾಕಿಕೊಳ್ಳಲಿರುವ ಜೆಡಿಎಸ್ನ ಎಚ್.ಡಿ.ರೇವಣ್ಣ ಓದಿರುವುದು ಎಸ್ಎಸ್ಎಲ್ಸಿ ಅಷ್ಟೆ. ದೇವೇಗೌಡರ ಮಗನಿಗೆ ವಿದ್ಯೆ ಅಷ್ಟಾಗಿ ತಲೆಗೆ ಹೋದಂತೆ ಕಾಣುತ್ತಿಲ್ಲ. ಆದರೆ ಇವರು ಈ ವರೆಗೆ ಮೂರು ಬಾರಿ ಮಂತ್ರಿ ಆಗಿದ್ದಾರೆ. ಕಂದಾಯ, ಇಂಧನದಂತಹಾ ಖಾತೆಗಳನ್ನು ನಿಭಾಯಿಸಿದ್ದಾರೆ.

ಸೂಟು ಬೂಟಿನ ಪ್ರಿಯಾಂಕ್ ಓದಿರುವುದು ಎಷ್ಟು?
ಕೇವಲ ಪಿಯುಸಿ ಪಾಸಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಳೆದ ಸರ್ಕಾರದಲ್ಲಿ ಐಟಿ-ಬಿಟಿ ಸಚಿವರಾಗಿದ್ದರು. ಸೂಟು ಬೂಟಿನಲ್ಲಿ ಮಿಂಚುವ ಪ್ರಿಯಾಂಕ್ ಖರ್ಗೆ ಓದಿರುವುದು ಪಿಯುಸಿ ಮಾತ್ರ ಎಂದರೆ ಅಚ್ಚರಿಯೇ ಸರಿ. ಆದರೆ ಅವರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು.

ಜಮೀರ್ ಅಹ್ಮದ್ ಕಲಿತಿರುವುದು ಕಡಿಮೆಯೇ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಾಂಗ್ರೆಸ್ನ ಜಮೀರ್ ಅಹ್ಮದ್ ಪಾಸಾಗಿರುವುದು 8ನೇ ತರಗತಿ ಮಾತ್ರ. ಹೌದು ಮೊದಲ ಬಾರಿಗೆ ಸಚಿವರಾಗುತ್ತಿರುವ ಜಮೀರ್ ಅಹ್ಮದ್ ಹತ್ತನೇ ತರಗತಿ ಮೆಟ್ಟಿಲನ್ನೇ ಹತ್ತಿಲ್ಲ.

ಚಾಮುಂಡೇಶ್ವರಿ ಶಾಸಕ ಕಲಿತಿರುವುದು ಎಷ್ಟು?
ಮುಖ್ಯಮಂತ್ರಿಗೇ ಸೋಲುಣಿಸಿದ ಜಿಟಿ ದೇವೇಗೌಡ ಪಾಸಾಗಿರುವುದು 8 ನೇ ತರಗತಿ ಮಾತ್ರ. ಇವರೂ ಸಹ ಸಂಪುಟದಲ್ಲಿ ಪ್ರಭಾವಿ ಖಾತೆಯನ್ನು ಪಡೆಯಲಿರುವ ಸಚಿವರಲ್ಲೊಬ್ಬರು. ಆದರೆ ಇವರ ವಿದ್ಯಾರ್ಹತೆ ಮಾತ್ರ ಕಡಿಮೆ.

ಸಚಿವ ಸ್ಥಾನಕ್ಕೆ ಅನುಭವವೊಂದೇ ಸಾಕೆ?
ಸಿಂದಗಿಯಿಂದ ಗೆದ್ದು ಬಂದಿರುವ ಜೆಡಿಎಸ್ನ ಎಂಸಿ ಮನಗುಳಿ ಅವರು ಸಂಪುಟದಲ್ಲಿರುವ ಹಿರಿಯ ಸಚಿವರು. ಇವರು ಓದಿರುವುದು 10ನೇ ತರಗತಿ ವರೆಗೆ ಮಾತ್ರ. ಸಚಿವ ಸ್ಥಾನ ನಿಭಾಯಿಸಲು ಕೇವಲ ಅನುಭವ ಇದ್ದರೆ ಮಾತ್ರ ಸಾಕೆ. ವಿದ್ಯಾಭ್ಯಾಸ ಬೇಡವೇ?

ಕೆ.ಜೆ.ಜಾರ್ಜ್ ಸಾಹೇಬರು ಓದಿರುವುದೆಷ್ಟು?
ಐಟಿ ನಗರ ಬೆಂಗಳೂರಿನ ಉಸ್ತುವಾರಿ ವಹಿಸಿದ್ದ ಕೆ.ಜೆ.ಜಾರ್ಜ್ ಅವರು ಪಿಯುಸಿ ಪಾಸಾಗಿದ್ದಾರೆ. ಈ ಬಾರಿ ಮತ್ತೆ ಅವರು ಸಚಿವರಾಗಿದ್ದು ಮತ್ತೆ ಬೆಂಗಳೂರು ಉಸ್ತುವಾರಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವಕ್ಕೆ ಸಾಫ್ಟ್ವೇರ್ ರಫ್ತು ಮಾಡುವ ಬೆಂಗಳೂರಿನ ಉಸ್ತುವಾರಿ ಮಾಡುವ ಜವಾಬ್ದಾರಿ ಅವರ ಹೆಗಲ ಮೇಲೆ ಬೀಳುವ ಸಾಧ್ಯತೆ ಇದೆ.

ಸಿಎಸ್ ಪುಟ್ಟರಾಜು ಓದಿರುವುದು ಕಡಿಮೆಯೇ
ಮೇಲುಕೋಟೆಯಿಂದ ಗೆದ್ದು ಬಂದಿರುವ ಜೆಡಿಎಸ್ನ ಸಿಎಸ್ ಪುಟ್ಟರಾಜು ಅವರು ಸಂಪುಟದಲ್ಲಿ ಪ್ರಮುಖ ಖಾತೆ ಪಡೆದುಕೊಳ್ಳುವ ಸಚಿವರಲ್ಲೊಬ್ಬರು ಎನ್ನಲಾಗುತ್ತಿದೆ. ಇವರು ಪಿಯುಸಿ ಪಾಸಾಗಿದ್ದಾರೆ. ಇವರ ಎದುರು ಸೋತ ದರ್ಶನ್ ಪುಟ್ಟಣಯ್ಯ ಅವರು ಎಂಜಿನಿಯರ್ ಪದವಿದರರಾಗಿದ್ದು ಅಮೆರಿಕದಲ್ಲಿ ಸಾಫ್ಟ್ವೇರ್ ಸಂಸ್ಥೆ ನಡೆಸುತ್ತಿದ್ದರು.

ರಾಜಶೇಕರ್ ಪಾಟೀಲ್ ಓದಿರುವುದು ಇಷ್ಟು
ಹುಮನಾಬಾದ್ ನಿಂದ ಆರಿಸಿ ಬಂದಿರುವ ಕಾಂಗ್ರೆಸ್ನ ರಾಜಶೇಖರ ಪಾಟೀಲ್ ಅವರು ಮೊದಲ ಬಾರಿಗೆ ಸಚಿವರಾಗುತಿದ್ದಾರೆ. ಅವರು ಓದಿರುವುದು ಪಿಯುಸಿ ಮಾತ್ರ. ಅವರ ಕುಟುಂಬವೂ ರಾಜಕೀಯದ್ದೇ ಆಗಿದ್ದು. ಅವರ ತಂದೆಯವರೂ ಸಹ ಕಾಂಗ್ರೆಸ್ನಲ್ಲಿ ಶಾಸಕರು ಮಂತ್ರಿಗಳಾಗಿದ್ದರು.

ಪಕ್ಷೇತರ ಅಭ್ಯರ್ಥಿ ಓದಿರುವುದು ಕಡಿಮೆಯೇ
ರಾಣೆಬೆನ್ನೂರಿನ ಕೆಪಿಜೆಪಿ ಪಕ್ಷದ ಶಾಸಕ ಆರ್ ಶಂಕರ್ ಸಹ ಎಸ್ಎಸ್ಎಲ್ಸಿ ಓದಿದ್ದಾರೆ ಅಷ್ಟೆ. ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಕಾರಣ ಅದೃಷ್ಠವಶಾತ್ ಇವರಿಗೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ವೆಂಕಟರಮಣಪ್ಪ ಓದಿರುವುದು ಎಷ್ಟು?
ಪಾವಗಡದಲ್ಲಿ ಗೆದ್ದಿರುವ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಅವರು ಎಸ್ಎಸ್ಎಲ್ಸಿ ಓದಿದ್ದಾರೆ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸುತ್ತಿರುವ ಅವರು ಕಾಲೇಜು ಮೆಟ್ಟಿಲು ಹತ್ತಿರದವರಲ್ಲ.












Click it and Unblock the Notifications