Karnataka Elections 2023: ಚುನಾವಣಾ ದಿನಾಂಕ, ನಾಮಪತ್ರ ಸಲ್ಲಿಸಲು, ಹಿಂಪಡೆಯಲು ಕೊನೆಯ ದಿನಾಂಕ, ಫಲಿತಾಂಶ ದಿನಾಂಕ ತಿಳಿಯಿರಿ
ನವದೆಹಲಿ, ಮಾರ್ಚ್ 29: ಕರ್ನಾಟಕದ ಹದಿನಾರನೇ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. 224 ಸದಸ್ಯ ಬಲವನ್ನು ಹೊಂದಿರುವ ಹಾಲೀ ಅಸೆಂಬ್ಲಿಯ ಅವಧಿ ಮೇ 24, 2023ಕ್ಕೆ ಮುಕ್ತಾಯಗೊಳ್ಳಲಿದೆ.
ಚುನಾವಣೆ ಆಯೋಗ ಪ್ರಕಟಿಸಿದ ವೇಳಾಪಟ್ಟಿ ಇಲ್ಲಿದೆ
| ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ | ಏಪ್ರಿಲ್ 20 |
| ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ | ಏಪ್ರಿಲ್ 24 |
| ಮತದಾನ ದಿನಾಂಕ | ಮೇ 10 |
| ಫಲಿತಾಂಶ ದಿನಾಂಕ | ಮೇ 13 |

ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಣೆ ಮಾಡುವ ಸಂಬಂಧ ಪತ್ರಿಕಾಗೋಷ್ಠಿಯನ್ನು ಬುಧವಾರ (ಮಾ 29) ಬೆಳಗ್ಗೆ 11.30ಕ್ಕೆ ವಿಜ್ಞಾನಭವನದಲ್ಲಿ ಕರೆದಿದ್ದರು. ಎಲ್ಲಾ ಕ್ಷೇತ್ರಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ ಎಂದು ಘೋಷಿಸಿದರು.
ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸಹ 124 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆ ದಿನಾಂಕಗಳು ಪ್ರಕಟವಾದ ಬಳಿಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತೀವ್ರ ಹಣಾಹಣಿಯಲ್ಲಿ ತೊಡಗಿವೆ. ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಸಿದ್ಧವಾಗಿದೆ, ಈ ಸರ್ಕಾರವನ್ನು ಕೆಳಗಿಸಬೇಕೆಂದ ನಾವು ಬಯಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದ್ದಾರೆ.
'ಈ ಚುನಾವಣೆಯು ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ಮುಕ್ತ ರಾಜ್ಯಕ್ಕಾಗಿ ನಡೆಯಲಿದೆ. ಭ್ರಷ್ಟಾಚಾರ ಉತ್ತುಂಗದಲ್ಲಿದೆ. ಪ್ರಧಾನಿ ಮೋದಿ ಅದನ್ನು ಪ್ರೋತ್ಸಾಹಿಸಿದ್ದಾರೆ. ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಡಿಕೆಶಿ ಆರೋಪಿಸಿದ್ದಾರೆ.
2023ರ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಮಂಗಳವಾರ ಮಾತನಾಡಿದ ಅವರು, 'ಚುನಾವಣೆಗೆ ಪಕ್ಷ ಮತ್ತು ಸರಕಾರ ಸಂಪೂರ್ಣ ಸಿದ್ಧವಾಗಿದೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ECI ದಿನಾಂಕಗಳನ್ನು ಪ್ರಕಟಿಸಲು ನಾವು ಕಾಯುತ್ತಿದ್ದೇವೆ. ನಾವು ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ' ಎಂದಿದ್ದಾರೆ.
ಏಪ್ರಿಲ್ 5 ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸ್ಥಳದಲ್ಲಿ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಇದಕ್ಕಾಗಿ ಅವರು ಕ್ರಿಮಿನಲ್ ಮಾನನಷ್ಟದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾರೆ ಮತ್ತು ಲೋಕಸಭೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿಯಲ್ಲಿ ನೀಡಲಾದ ಶೇ 4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿದೆ. ಅದನ್ನು ಬ್ರಾಹ್ಮಣರು, ಜೈನರು, ವೈಶ್ಯರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS) ಜನರಿಗೆ ಹಂಚಲು ಶಿಪಾರಸು ಮಾಡಿದೆ.
ಕರ್ನಾಟಕದಲ್ಲಿ 51 ಮೀಸಲು ಸ್ಥಾನಗಳು ರಾಜಕೀಯವಾಗಿ ಮಹತ್ವದ್ದಾಗಿವೆ. ಹೆಚ್ಚು ಮೀಸಲು ಸ್ಥಾನಗಳನ್ನು ಪಡೆದ ಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿವೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
51 ಮೀಸಲು ಸ್ಥಾನಗಳಲ್ಲಿ 15 ಪರಿಶಿಷ್ಟ ಪಂಗಡಗಳಿಗೆ (ಎಸ್ಟಿ) ಮತ್ತು 36 ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಮೀಸಲಾಗಿದೆ. 2008, 2013 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ಗೆ ಮೀಸಲಾದ ಹೆಚ್ಚಿನ ಸ್ಥಾನಗಳು ಬಂದಿಲ್ಲ. ಈ 51 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಪೈಪೋಟಿ ಏರ್ಪಟ್ಟಿದೆ.












Click it and Unblock the Notifications