Anna Bhagya: ಅಕ್ಕಿ ಬದಲು ಹಣ ಕೊಡಲು ಸರ್ಕಾರ ನಿರ್ಧಾರ; ಬಡವರ ಹಸಿವಿನಲ್ಲಿ ರಾಜಕೀಯ ಮಾಡ್ಬೇಡಿ : ಡಾ. ಜಿ.ಪರಮೇಶ್ವರ್
ತುಮಕೂರು, ಜೂನ್ 29: ಚುನಾವಣಾ ಪೂರ್ಣದಲ್ಲಿ ಗ್ಯಾರಂಟಿ ಘೋಷಣೆಗಳ ಕುರಿತು ಭರವಸೆ ನೀಡಿದ ಕಾಂಗ್ರೆಸ್, ಸರ್ಕಾರ ರಚನೆಯ ಬಳಿಕ ಗ್ಯಾರಂಟಿ ಘೋಷಣೆಗಳ ಜಾರಿಗೆ ಹಲವು ಅಡೆತಡೆಗಳು ಎದುರಾಗಿವೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಡುವ ಯೋಜನೆಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದ ಹಿನ್ನಲೆಯಲ್ಲಿ, ಹಣವನ್ನು ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ನಡೆಗೆ ಇದೀಗ ಬಿಜೆಪಿ ಆಕ್ರೋಶವನ್ನ ವ್ಯಕ್ತಪಡಿಸಿದೆ.
ಹೌದು, ಅಕ್ಕಿ ಸಿಗುವವರೆಗೂ ನೇರವಾಗಿ ಜನರ ಅಕೌಂಟ್ ಗೆ ಒಂದು ಕೆ.ಜಿ ಅಕ್ಕಿ ಗೆ 34 ರೂಪಾಯಿಯಂತೆ 170 ರೂಪಾಯಿ ಜಮಾ ಆಗಲಿದೆ. ಪ್ರತಿಯೊಂದು ಕುಟುಂಬಕ್ಕೆ 5 ಕೆ.ಜಿ ಅಕ್ಕಿ ಹಾಗೂ 5 ಅಕ್ಕಿಗೆ ಹಣ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಬಡವರ ಹಸಿವಿನಲ್ಲಿ ರಾಜಕೀಯ ಮಾಡಬೇಡಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾತನಾಡಿ, ದುಡ್ಡು ಕೊಡೋದನ್ನು ಕೆಲವರು ಮಾತ್ರ ವಿರೋಧಿಸುತ್ತಾರೆ. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಕೊಟ್ಟೇ ಕೊಡ್ತಿವಿ, ಅದರಲ್ಲಿ ಎರಡು ಮಾತಿಲ್ಲ. ದುಡ್ಡು ಕೊಟ್ಟರೂ ಕೇಂದ್ರ ಅಕ್ಕಿ ಕೊಡುತ್ತಿಲ್ಲ, ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್ ಸಿ ಐ ನಲ್ಲಿ 7 ಲಕ್ಷ ಟನ್ ಸ್ಟಾಕ್ ಇದೆ. ಅಕ್ಕಿಯನ್ನ ಖಾಸಗಿ ಅವರಿಗೆ ಮಾರುತಿದ್ದಾರೆ, ನಮಗೆ ರಾಜಕೀಯ ಕಾರಣಕೋಸ್ಕರ ಕೊಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕುಟುಕಿದರು.
5 ಕೆಜಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತೇವೆ. ಮೂರು ತಿಂಗಳ ಕಾಲ ದುಡ್ಡು ಕೊಡುತ್ತೇವೆ, ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ. 10 ಕೆಜಿ ಅಕ್ಕಿ ದುಡ್ಡು ಹಾಕಬೇಕು ಎಂಬ ಬಿಜೆಪಿ ವಾದ, ಬಿಜೆಪಿ ಅವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಮಾತಿನಂತೆ ನಡೆದುಕೊಳ್ಳುತ್ತೇವೆ, ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿ ಸಲಹೆ ನೀಡಿದಕ್ಕೆ, ದುಡ್ಡು ತಿನ್ನೊಕಾಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದ ವಿಚಾರವಾಗಿ ಮಾತನಾಡಿ, ಇದು ಪ್ರಿಸ್ಟೇಜ್ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು.
ಪ್ರೆಸ್ಟಿಜ್ ನಿಂದ ಹೊಟ್ಟೆ ತುಂಬಲ್ಲ.ಬಿಜೆಪಿಯವರೇ ಹಣ ಕೊಡಿ, ಹಣ ಕೊಡಿ ಎಂದು ಹೇಳಿದರು, ಈಗ ಏಕಾಏಕಿ ಟೀಕೆ ಮಾಡುತಿದ್ದಾರೆ. ಅವರು ಬಡವರ ಹಸಿವಿನಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ವಿನಂತಿ ಮಾಡುತ್ತೇನೆ ಎಂದು ಹೇಳಿದರು.
ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತ. ಮಹಮ್ಮದ್ ಇಬ್ರಾಹಿಂ ತನ್ನ ಮಗನನ್ನೇ ಅಲ್ಲಾನಿಗೆ ಬಲಿ ಕೊಟ್ಟಿದ್ದ ಅಂಥಹ ಮಹಾನ್ ಬಲಿದಾನದ ಸಂಕೇತ ಎಂದು ಎಲ್ಲರಿಗೂ ಶುಭ ಕಾಮನೆ ಹೇಳಿದ್ದೇನೆ. ಭಾರತ ಶಾಂತಿ ನಂಬಿದ ದೇಶ, ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಸ್ಲಿಂ ಬಾಂಧವರ ಬಹುಪಾಲು ಮತ ವಿಚಾರವಾಗಿ ಮಾತನಾಡಿ, ಎಲ್ಲೋ ಒಂದು ಕಡೆ ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಜ್ಯಾತ್ಯಾತೀತವಾದ ಪಕ್ಷ. ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜೊತೆಗೆ ಶಾಂತಿ ಕಾಪಾಡಬೇಕಿದೆ, ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ದ್ವೇಷ ಸಾಧಿಸಲು ಹೋಗೋದಿಲ್ಲ, ಶಾಂತಿ ಕಾಪಾಡುತ್ತೇನೆ ಎಂದು ಹೇಳಿದರು.












Click it and Unblock the Notifications