ಕಾಂಗ್ರೆಸ್ ಪಾಳಯದಲ್ಲಿ ಡಿಸಿಎಂ ಫೈಟ್: 33 ಜನರನ್ನು ಡಿಸಿಎಂ ಮಾಡಿದರೆ...: ಡಿ ಕೆ ಸುರೇಶ್ ಹೇಳಿದ್ದೇನು?
ಬೆಂಗಳೂರು, ಜೂನ್30: 33 ಜನರನ್ನು ಡಿಸಿಎಂ ಮಾಡಿದರೆ ಎಲ್ಲಾ ಜಾತಿ, ಧರ್ಮ, ಜಿಲ್ಲೆಯ ಜನರನ್ನು ಸಂತೃಪ್ತಿ ಪಡಿಸಬಹುದು. ಇದೇನು ಸಾಂವಿಧಾನಿಕ ಹುದ್ದೆಯಲ್ಲವಲ್ಲ. ಯಾರು ಸ್ಥಾನ ಕೇಳುತ್ತಿದ್ದಾರೋ ಅವರ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಲಿ, ಸರ್ಕಾರ ಅಧಿಕಾರಕ್ಕೆ ತಂದು ಅವರಿಗೆ ಯಾವ ಸ್ಥಾನ ಬೇಕೋ ಅದನ್ನು ಅಲಂಕರಿಸಲಿ ಎಂದು ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟ ನಾಯಕರ ವಿರುದ್ಧ ಪರೋಕ್ಷವಾಗಿ ಡಿ ಕೆ ಸುರೇಶ್ ಟಾಂಗ್ ನೀಡಿದ್ದಾರೆ.
ಡಿಸಿಎಂ ಹುದ್ದೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮಗೆ ಡಿಸಿಎಂ, ಸಿಎಂ ಸ್ಥಾನ ಬೇಕು, ನಮ್ಮ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ ಎನ್ನುವ ಭಾವನೆ ಇದ್ದರೆ. ಯಾರ ನಾಯಕತ್ವದಲ್ಲಿ ಬೇಕಾದರೂ ಚುನಾವಣೆ ಎದುರಿಸಲಿ ಜನ ತೀರ್ಪು ಕೊಡುತ್ತಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಕಡಿಮೆ ಸ್ಥಾನ ಬಂದ ಕಾರಣಕ್ಕೆ ಮತ್ತೆ ಚುನಾವಣೆ ಎದುರಿಸಿದ್ದರು ಎಂದು ಡಿ ಕೆ ಸುರೇಶ್ ಹೇಳಿದರು.

ಮುಖ್ಯಮಂತ್ರಿಗಳಿಗೆ ಅವಶ್ಯಕತೆ ಇದ್ದರೆ ಎಷ್ಟು ಜನ ಮಂತ್ರಿಗಳು, ಡಿಸಿಎಂಗಳನ್ನು ಬೇಕಾದರೂ ನೇಮಕ ಮಾಡಿಕೊಳ್ಳುವ ಪರಮಾಧಿಕಾರವಿದೆ. ಮುವತ್ತಮೂರು ಜನರನ್ನು ಡಿಸಿಎಂಗಳು ಎಂದು ಘೋಷಣೆ ಮಾಡಬಹುದು. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆ. ಜನರು ಸರ್ಕಾರವನ್ನು ಆಯ್ಕೆ ಮಾಡಿರುವುದು ಒಳ್ಳೆಯ ಆಡಳಿತ ನೀಡಲು ಹಾಗೂ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು. ಆದರೆ ಅದನ್ನು ಬಿಟ್ಟು ಇಲ್ಲ ಸಲ್ಲದ ಮಾತುಗಳನ್ನು ಆಡಲಾಗುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಮತ ಹಾಕಿದ್ದಾರೆ. ಜಾತ್ಯಾತೀತ ತತ್ವ ಎಂದು ಬಾಯಲ್ಲಿ ಹೇಳಿ ನಾವೇ ಜಾತಿವಾದವನ್ನು ಮುಂದಿಟ್ಟುಕೊಂಡು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು. ನಮ್ಮ ಕಷ್ಟಗಳಿಗೆ ಸರ್ಕಾರ ನೆರವಾಗುತ್ತದೆ ಎಂದು ಜನರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಯಾರನ್ನೋ ಮಂತ್ರಿ ಮಾಡುತ್ತಾರೆ ಎಂದು ಪಕ್ಷವನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಶ್ರಮ ಹಾಕಿದವರೇ ಬೇರೆ ಸ್ಥಾನ ಕೇಳಿದವರೇ ಬೇರೆ ಎಂದಾಗ "ಅದರ ಬಗ್ಗೆ ನನಗೆ ಗೊತ್ತಿಲ್ಲ. 224 ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕರ್ತರು, ನಾಯಕರು ಶ್ರಮ ಹಾಕಿದ್ದಾರೆ. 2 ವರ್ಷಗಳ ಕಾಲ ನಿರಂತರ ಹೋರಾಟ, ಹಗಲು, ರಾತ್ರಿ ಕೆಲಸ ಮಾಡಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಹೇಳಿದರು.
ಶಾಸಕರು ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ನೀಡಬೇಕು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಹಾಗೂ ಜನರ ಕಷ್ಟಗಳ ನಿವಾರಣೆಗೆ ಕೆಲಸ ಮಾಡಬೇಕು" ಎಂದು ಹೇಳಿದರು. ಜನಕ್ಕೆ ಚುನಾವಣೆ ನಡೆಯುವ ವೇಳೆ ಆಶ್ವಾಸನೆ ನೀಡಿರುತ್ತೇವೆ. ಈ ಆಶ್ವಾಸನೆಗಳನ್ನು ಸಿದ್ದರಾಮಯ್ಯ ಅವರ ಹಾಗೂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿ ಚುನಾವಣೆಯನ್ನು ಎದುರಿಸಲಾಯಿತು. ಜನರು ನಮಗೆ ಅವಕಾಶ ನೀಡಿದ್ದಾರೆ ಎಂದರು.
ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕಾಗಿ ಹೈಕಮಾಂಡಿಗೆ ಪತ್ರ ಬರೆಯುತ್ತೇನೆ ಎಂದು ಚಂದ್ರಶೇಖರನಾಥ ಸ್ವಾಮೀಜಿಗಳ ಹೇಳಿಕೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅದು ಸ್ವಾಮೀಜಿಗಳ ವೈಯಕ್ತಿಕ ಹೇಳಿಕೆ. ಅವರ ಸಮಾಜದ ಭಾವನೆ ತಿಳಿಸಿದ್ದಾರೆ. ಇದನ್ನು ಹೆಚ್ಚು ವ್ಯಾಖ್ಯಾನ ಮಾಡಲು ಇಚ್ಚಿಸುವುದಿಲ್ಲ ಎಂದರು.
ಸಮುದಾಯಕ್ಕೆ ಒಬ್ಬೊಬ್ಬ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವುದು ಸರಿಯೇ ಎಂದು ಕೇಳಿದಾಗ " ಸ್ವಾಮೀಜಿಗಳು ಮಾತಮಾಡಲು ಸ್ವತಂತ್ರರು. ಬೇರೆಯವರು ಮಾತನಾಡಬಹುದು ಅವರುಗಳು ಮಾತನಾಡಬಾರದೇ? ತಮ್ಮ ಭಾವನೆಗಳನ್ನು ಯಾವುದೋ ಒಂದು ಸಂದರ್ಭದಲ್ಲಿ ಹೊರ ಹಾಕಿದ್ದಾರೆ ಹೊರತು ಅದನ್ನು ಅನ್ಯತಾ ಭಾವಿಸುವುದು ಬೇಡ" ಎಂದರು.
ರಾಜಣ್ಣ ಅವರ ಸರಣಿ ಹೇಳಿಕೆಗಳ ಬಗ್ಗೆ ಮಾತಾನಾಡಿದ ಅವರು, ನಾನು ರಾಜಣ್ಣ ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನನಗೆ ಆ ಮಾತುಗಳು ಪ್ರಸ್ತುತವಲ್ಲ. ಜನರ ಆಶೀರ್ವಾದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ ಎಂದರು.












Click it and Unblock the Notifications