DCM DK Shivakumar: ಯಾವುದೇ ದೇಶದಲ್ಲಿದ್ರೂ ಪರವಾಗಿಲ್ಲ, ಬೆಂಗಳೂರು ಅಭಿವೃದ್ಧಿಗೆ ಸಲಹೆ ನೀಡಿ : ಡಿಕೆ ಶಿವಕುಮಾರ್
ಬೆಂಗಳೂರು,ಜೂನ್ 21: ಯಾವುದೇ ದೇಶದಲ್ಲಿದ್ರೂ ಪರವಾಗಿಲ್ಲ, ಸಾರ್ವಜನಿಕರಿಗೆ ಈ ತಿಂಗಳ ಕೊನೆವರೆಗೆ ಅವಕಾಶ ಇದೆ ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ ಎಂದು ಡಿಸಿಎಂ ಡಿ ಕೆ ಶಿವವಕುಮಾರ್ ಮನವಿ ಮಾಡಿದರು.
ವಿಕಾಸಸೌಧದಲ್ಲಿ ಬ್ರಾಂಡ್ ಬೆಂಗಳೂರು ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, www.brandbengaluru.karnataka.gov.in ವೆಬ್ ಸೈಟ್ ನಲ್ಲಿ ಜನರು ಸಲಹೆ ನೀಡಬಹುದು. ನಾನು ಎಲ್ಲರನ್ನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ, ಎಲ್ಲರೂ ಸಲಹೆ ಹಾಗೂ ಅಭಿಪ್ರಾಯ ನೀಡಿ ಎಂದು ಮನವಿ ಮಾಡಿದರು.

ನಗರದಲ್ಲಿ ಪಾದಚಾರಿ ರಸ್ತೆ ಒತ್ತುವರಿಯಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿದೆ, ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದನಾನು ಖುದ್ದು ನೋಡಿದ್ದೇನೆ, ನಗರದಲ್ಲಿ ಫುಟ್ಪಾತ್ ಓತ್ತುವರಿಯಾಗಿದೆ. ಫುಟ್ಪಾತ್ ನಲ್ಲೇ ಸಾಕಷ್ಟು ಅಂಗಡಿಗಳನ್ನ ಇಟ್ಟುಕೊಂಡಿದ್ದಾರೆ. ಇದರಿಂದ ಜನರು ರಸ್ತೆಗಳಲ್ಲಿ ಓಡಾಟ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಈಗಾಗಲೇ ಟ್ರಾಫಿಕ್ ಬಗ್ಗೆ ಕೆಲಸ ಮಾಡಿರುವ ಅಧಿಕಾರಿಗಳು, ತಜ್ಞರ ಸಲಹೆ ಕೂಡ ಪಡೆಯುತ್ತೇವೆ. ನಾನಾ ವಿಧಧ ಟನಲ್ ಮಾಡಲು ಸಾಕಷ್ಟು ಸಲಹೆಗಳು ಬಂದಿವೆ, ನನಗೆ ಸಾರ್ವಜನಿಕರ ಸಲಹೆಗಳು ಬೇಕು ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ನನಗೆ ಬೆಂಗಳೂರು ಅಭಿವೃದ್ಧಿ ಹಾಗೂ ನೀರಾವರಿ ಖಾತೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 1 ಕೋಟಿ 60 ಲಕ್ಷ ಜನಸಂಖ್ಯೆ ಇದೆ, 50 ಲಕ್ಷದಷ್ಟು ಜನ ದಿನ ಬಂದು ಹೋಗುತ್ತಾರೆ. ಬೆಂಗಳೂರಿನಿಂದಲೇ ರಾಜ್ಯದ ಬೊಕ್ಕಸಕ್ಕೆ ಹಣ ಬರ್ತಾ ಇದೆ. ಇಲ್ಲಿನ ವಾತಾವರಣ ನೋಡಿ ಜನ ಹೆಚ್ಚು ಇಲ್ಲಿ ವಾಸಮಾಡಲು ಇಷ್ಟ ಪಡ್ತಾ ಇದ್ದಾರೆ. ಬಜೆಟ್ ನಲ್ಲಿ ಬೆಂಗಳೂರಿಗೆ ಏನು ಕೊಡಬೇಕು ಅಂತ ಸಿಎಂ ಅಧ್ಯಯನ ಮಾಡ್ತಾ ಇದ್ದಾರೆ, ಅದನ್ನ ಅವರೇ ಘೋಷಣೆ ಮಾಡುತ್ತಾರೆ.
ಕಳೆದ ಸಭೆಯಲ್ಲಿ ಬೆಂಗಳೂರಿನ ಸಾಕಷ್ಟು ಪ್ರಮುಖರು ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅವರೆಲ್ಲಾ ಬಿಸಿನೆಸ್ ಮ್ಯಾನ್ಸ್, ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಸಲಹೆಗಳ ಜೊತೆಗೆ, ಸಾಮಾನ್ಯ ಜನರ ಸಲಹೆಗಳನ್ನು ನಾವು ಕೇಳುತ್ತೇವೆ. ನಾನು ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಕೇಳುತ್ತೇವೆ. ಅವರ ಭೇಟಿಗೆ ಸಮಯ ಕೇಳಿದ್ದೆ, ಅವರು ಸದ್ಯ ಬ್ಯುಸಿ ಇದ್ದಾರೆ, ಸದ್ಯದಲ್ಲೇ ಅವರನ್ನ ಇನ್ನು ಪ್ರಮುಖರನ್ನೂ ಭೇಟಿ ಮಾಡುತ್ತೇನೆ, ಸಲಹೆ ಪಡೆಯುತ್ತೇನೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ನಗರದ ರಸ್ತೆಗಳು 100 ಅಡಿಯ ರಸ್ತೆಗಳಲ್ಲ. ಬದಲಾಗಿ ಚಿಕ್ಕ ರಸ್ತೆಗಳೇ ನಗರದಲ್ಲಿ ಹೆಚ್ಚಾಗಿ ಇವೆ. ಹಾಗಂತ ಸುಮ್ಮನೆ ಕೂರಲು ಸಾಧ್ಯವಿಲ್ಲ, ಸಾರ್ವಜನಿಕರು ಈ ತಿಂಗಳ ಕೊನೆವರೆಗೆ ಅವಕಾಶ ಇದೆ ಸಲಹೆ ಕೊಡಿ. ಕೆಲವು ಟ್ಯಾಕ್ಸ್ ಜಾಸ್ತಿ ಮಾಡಲು ಸಲಹೆ ನೀಡಿದ್ದಾರೆ. ಈಗಾಗಲೇ ಸಭೆಯಲ್ಲಿ ಹಲವು ಸಲಹೆಗಳು ವ್ಯಕ್ತವಾಗಿವೆ. ಕೆಲವರು ತೆರಿಗೆ ಹೆಚ್ಚಳ ಮಾಡಲು ಸಲಹೆ ನೀಡಿದ್ದಾರೆ ಎಂದ ಡಿಕೆಶಿ, ಮಾಜಿ ಮೇಯರ್ ಗಳು, ಮಾಜಿ ಕಾರ್ಪೋರೇಟರ್ ಗಳು ಲಿಖಿತ ರೂಪದಲ್ಲಿ ಸಲಹೆ ನೀಡಬಹುದು ಎಂದರು.
ರಸ್ತೆ ಗುಂಡಿ ವಿಚಾರವಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತೇವೆ. ತ್ಯಾಜ್ಯ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ಮಾಡಿದ್ದೇನೆ. ಈ ಬಗ್ಗೆ ಉತ್ತಮ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ತೀರ್ಮಾನಿಸಿದ್ದೇವೆ. ಚೆನ್ನೈ, ಇಂದೋರ್ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ವಿಚಾರದಲ್ಲಿ ದೀರ್ಘಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ಮಿತಿ, ಭೂಪ್ರದೇಶದ ಮಿತಿಯಲ್ಲಿ ನಾವು ಯೋಜನೆ ರೂಪಿಸಬೇಕು.
ಕೇವಲ ಕಸ ತೆಗೆದುಕೊಂಡು ಹೋಗಿ ಸುರಿದರೆ ಆಗುವುದಿಲ್ಲ. ತ್ಯಾಜ್ಯದ ಬೆಟ್ಟ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ.ಇದು ಒಂದು ದಿನ ಅಥವಾ ವರ್ಷದಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಆದರೂ ಕಾಲಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡಬೇಕಿದೆ ಎಂದರು.












Click it and Unblock the Notifications