ಡಿ.ಕೆ.ಶಿ ಮನೆಯಲ್ಲಿ ಕಾಂಗ್ರೆಸ್ ಸಚಿವರಿಗೆ ಉಪಹಾರ, ಸಿದ್ದರಾಮಯ್ಯಗಿಲ್ಲ ಆಹ್ವಾನ!
ಬೆಂಗಳೂರು, ಅಕ್ಟೋಬರ್ 04: ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಇಂದು ಬೆಳಿಗ್ಗೆ ಏಕಾ-ಏಕಿ ಕಾಂಗ್ರೆಸ್ ಸಚಿವರಿಗೆಂದು ಉಪಹಾರ ಕೂಟ ಆಯೋಜನೆ ಮಾಡಲಾಗಿದ್ದು, ರಾಜಕೀಯ ಕಾರಣಗಳಿಗೆ ಈ ಕೂಟ ಭಾರಿ ಕುತೂಹಲ ಕೆರಳಿಸಿದೆ.
ಮೈತ್ರಿ ಸರ್ಕಾರದಲ್ಲಿ ಬೆಳೆಯುತ್ತಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಭೋಜನಕೂಟ ಆಯೋಜಿತವಾಗಿದೆ ಎಂದೇ ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಈ ಉಪಹಾರ ಕೂಟಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಹೋಗಿಲ್ಲ.
ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ : ಸಿದ್ದರಾಮಯ್ಯ
ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಅವರ ಮಾತೇ ಹೈಕಮಾಂಡ್ಗೆ ಅಂತಿಮವಾಗಿದೆ. ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯಗಳಿಗೆ ಮಹತ್ವ ನೀಡಲಾಗಿಲ್ಲ ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿದೆ ಹಾಗಾಗಿ ಸಿದ್ದರಾಮಯ್ಯ ಅವರ ವೇಗಕ್ಕೆ ಬ್ರೇಕ್ ಹಾಕಲು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಈ ಉಪಹಾರ ಕೂಟ ಆಯೋಜಿತವಾಗಿದೆ.
ಯೂರೋಪ್ ಪ್ರವಾಸದ ಮುಂಚೆ ಕೂಡ ಸಭೆ
ಈ ಮುಂಚೆ ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸ ಹೋದಾಗ ಕೂಡ ಪರಮೇಶ್ವರ್ ಅವರ ಮನೆಯಲ್ಲಿ ಉಪಹಾರ ಕೂಟ ಆಯೋಜಿಸಲಾಗಿತ್ತು. ಆಗಲೂ ಸಹ ಇದೇ ಉದ್ದೇಶಕ್ಕೆಂದು ಕೂಟ ಆಯೋಜಿತವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಯೂರೋಪ್ನಿಂದ ಬರುವಷ್ಟರಲ್ಲಿ ಇಲ್ಲಿನ ರಾಜಕೀಯ ಚಿತ್ರಣ ಬದಲಾಗಿ ಸಿದ್ದರಾಮಯ್ಯ ಅವರ ಮೇಲುಗೈ ಆಗಿತ್ತು.
ಡಿ.ಕೆ.ಶಿಗೆ ಸಾಲು-ಸಾಲು ಹಿನ್ನಡೆ
ಇಡಿ, ಐಟಿ ಕೇಸಿನಲ್ಲಿ ಸಿಕ್ಕು ನಲುಗುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಸಾಲು-ಸಾಲು ಹಿನ್ನಡೆ ಆಗುತ್ತಿದೆ. ಮೊದಲಿಗೆ ಅವರಿಗೆ ತಮ್ಮಿಷ್ಟದ ಸಚಿವ ಸ್ಥಾನ ಸಿಗಲಿಲ್ಲ. ಆ ನಂತರ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಪ್ರಕರಣದಲ್ಲಿ ಜಾರಕಿಹೊಳಿ ಸಹೋದರರ ಎದುರು ಡಿ.ಕೆ.ಶಿವಕುಮಾರ್ ಸೋಲಬೇಕಾಯಿತು. ಬಿಬಿಎಂಪಿ ಮೇಯರ್ ಸ್ಥಾನಕ್ಕೆ ತಮ್ಮ ಅಭ್ಯರ್ಥಿಗೆ ಮನ್ನಣೆ ದೊರಕಿಸುವಲ್ಲಿ ವಿಫಲರಾದರು. ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಸಹ ವಿಫಲರಾಗಿದ್ದಾರೆ. ಸಾಲು-ಸಾಲು ವಿಫಲತೆಗಳಿಂದ ಅಧೀರರಾಗಿರುವ ಅವರು ರಾಜಕೀಯ ಪವರ್ ಮರಳಿ ಗಳಿಸಲು ಈ ಉಪಹಾರ ಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.
ಕುತೂಹಲ ಹುಟ್ಟಿಸಿದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್ ಭೇಟಿ
ಯಾರ್ಯಾರು ಹಾಜರು?
ಶಿವಕುಮಾರ್ ಅವರ ಉಪಹಾರ ಕೂಟಕ್ಕೆ ಕಾಂಗ್ರೆಸ್ ಸಚಿವರನ್ನು ಮತ್ತು ಕಾಂಗ್ರೆಸ್ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ. ಸಿದ್ದರಾಮಯ್ಯ ಅವರ ಆಪ್ತರಾದ ಜಮೀರ್, ಜಯಮಾಲಾ, ಯು.ಟಿ.ಖಾದರ್ ಸೇರಿದಂತೆ ಹಲವರು ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಡಿ.ಕೆ.ಸುರೇಶ್, ಕೆಪಿಸಿಸಿ ಉಪಾಧ್ಯಕರೂ ಸಹ ಕೂಟದಲ್ಲಿ ಪಾಲ್ಗೊಂಡಿದ್ದಾರೆ. 13 ಸಚಿವರು ಕೂಟದಲ್ಲಿ ಪಾಲ್ಗೊಂಡಿದ್ದರು. ರಮೇಶ್ ಜಾರಕಿಹೊಳಿ ಗೈರಾಗಿದ್ದರು, ಅವರು ಮುಂಬೈನಲ್ಲಿ ಇದ್ದದ್ದರಿಂದ ಬರಲಿಲ್ಲವೆಂದು ಹೇಳಿದ್ದಾರೆ.
ಐಟಿ ದಾಳಿಯ ಬಗ್ಗೆ ಚರ್ಚೆ
ತಮ್ಮ ಮೇಲಿನ ಐಟಿ ದಾಳಿಯ ಬಗ್ಗೆ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಕೇಂದ್ರ ಸಚಿವರು, ಮುಖಂಡರು ಹೇರುತ್ತಿರುವ ಒತ್ತಡದ ಬಗ್ಗೆ ಶಿವಕುಮಾರ್ ಮಾತನಾಡಿದ್ದಾರೆ ಹಾಗೂ ಎಲ್ಲರ ಬೆಂಬಲ ಕೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಸಂಪುಟ ವಿಸ್ತರಣೆಯ ಬಗ್ಗೆಯೂ ಮಾತನಾಡಲಾಗಿದೆ.
ಸಂಪುಟ ಸೇರಲಿರುವವರ ಪಟ್ಟಿ ಹಿಡಿದು ನಾಗ್ಪುರಕ್ಕೆ ಹಾರಲಿದ್ದಾರೆ ಸಿದ್ದರಾಮಯ್ಯ
'ಎಲ್ಲದಕ್ಕೂ ಸಿದ್ದರಾಮಯ್ಯರ ಕರೆಯಲಾಗದು'
ಸಿದ್ದರಾಮಯ್ಯ ಅವರಿಗೆ ಉಪಹಾರ ಕೂಟದಲ್ಲಿ ಆಹ್ವಾನ ನೀಡದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು 'ಎಲ್ಲ ಸಭೆಗಳಿಗೂ ಸಿದ್ದರಾಮಯ್ಯ ಅವರನ್ನು ಕರೆಯಲಾಗದು, ಅವರ ಅವಶ್ಯಕತೆ ಇದ್ದಾಗ ಕರೆಯುತ್ತೇವೆ' ಎಂದು ಹೇಳಿದ್ದಾರೆ. ಅವರ ಹೇಳಿಕೆಯಿಂದ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನ ಇರುವುದು ಸ್ಪಷ್ಟವಾಗುತ್ತಿದೆ.