ಡಿಕೆಶಿ ಸಂಧಾನ ವಿಫಲ: ಅಮೆರಿಕಾದಿಂದ ತುರ್ತಾಗಿ ಹೊರಟ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಜುಲೈ 6: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದ ಸಚಿವ ಡಿ ಕೆ ಶಿವಕುಮಾರ್, ಈ ಬಾರಿ ಅತೃಪ್ತ ಶಾಸಕರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.
ಡಿಕೆಶಿ ಸಂಧಾನ ವಿಫಲವಾಯಿತು ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಮೆರಿಕ ಪ್ರವಾಸವನ್ನು ಒಂದು ದಿನ ಮೊಟಕುಗೊಳಿಸಿ, ಬೆಂಗಳೂರಿನತ್ತ ಹೊರಟಿದ್ದಾರೆ.
ಆದಿಚುಂಚನಗಿರಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ, ಜೂನ್ 28ರ ರಾತ್ರಿ ಅಮೆರಿಕಾಗೆ ತೆರಳಿದ್ದರು. ತಮ್ಮ ಸಂಪುಟ ಸಹದ್ಯೋಗಿ ಸಿ ಎಸ್ ಪುಟ್ಟರಾಜು ಮತ್ತು ಸಾ.ರಾ. ಮಹೇಶ್ ಸಿಎಂ ಅವರನ್ನು ಅಲ್ಲಿ ಕೂಡಿಕೊಂಡಿದ್ದರು.

ನ್ಯೂಜೆರ್ಸಿಯಲ್ಲಿ ಒಕ್ಕಲಿಗರ ಪರಿಷತ್ ಅಮೆರಿಕಾದ ಸಮಾವೇಶದಲ್ಲಿ ಭಾಗವಹಿಸಿ, ಒಂದೆರಡು ದಿನದ ನಂತರ ಕುಮಾರಸ್ವಾಮಿ ಸ್ವದೇಶಕ್ಕೆ ವಾಪಸ್ ಆಗುವುದರಲ್ಲಿ ಇದ್ದರು. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ತಾಜಾ ಬೆಳವಣಿಗೆಯ ನಂತರ, ಒಂದು ದಿನದ ಮೊದಲೇ ಅಲ್ಲಿಂದ ಹೊರಟಿದ್ದಾರೆ.
ರಾಜೀನಾಮೆ ನೀಡಿರುವ ಹದಿನಾಲ್ಕು ಶಾಸಕರಲ್ಲಿ (ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ಸೇರಿ) ಇಬ್ಬರು ಜೆಡಿಎಸ್ ಶಾಸಕರೂ ಇರುವುದು, ಪಕ್ಷಕ್ಕಾಗಿರುವ ಬಹುದೊಡ್ಡ ಹಿನ್ನಡೆ.
ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆಯೇ, ರಾಜ್ಯ ರಾಜಕೀಯದ ಬೆಳವಣಿಗೆಗಳು ಇನ್ನೊಂದು ಮಜಲಿಗೆ ಹೋಗುವುದಂತೂ ನಿಶ್ಚಿತ.











Click it and Unblock the Notifications