ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ : ಬಿಜೆಪಿ ನಾಯಕರು ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 11 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಬುಧವಾರ ಬೆಂಗಳೂರಿನಲ್ಲಿ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ. ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಮೆರವಣಿಗೆ ನಡೆಯಲಿದೆ. ಅತ್ತ ಡಿ. ಕೆ. ಶಿವಕುಮಾರ್ ಸೆ. 13ರ ತನಕ ಇಡಿ ವಶದಲ್ಲಿಯೇ ಇರಲಿದ್ದಾರೆ.
ಬೃಹತ್ ಪ್ರತಿಭಟನೆಯಲ್ಲಿ ಸುಮಾರು 35 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಪ್ರತಿಭಟನೆ ನಡೆಯಲಿದ್ದು, ಕರ್ನಾಟಕ ಕಾಂಗ್ರೆಸ್ನ ಹಲವು ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿ. ಕೆ. ಶಿವಕುಮಾರ್ ಬಂಧನ ಮತ್ತು ಬೃಹತ್ ಪ್ರತಿಭಟನೆ ಬಗ್ಗೆ ಹಲವು ಬಿಜೆಪಿ ನಾಯಕರು ಸಹ ಟ್ವೀಟ್ ಮಾಡಿದ್ದಾರೆ. ಬಂಧನ ಕಾನೂನು ಪ್ರಕ್ರಿಯೆ ಈ ಬಗ್ಗೆ ಭಾವನಾತ್ಮಕ ಆಲೋಚನೆ ಮಾಡಬಾರದು ಎಂದು ನಾಯಕರು ಹೇಳಿದ್ದಾರೆ. ಯಾವ ನಾಯಕರು ಏನು ಹೇಳಿದರು?.

ನಾಚಿಕೆಗೇಡಿನ ಸಂಗತಿ
ಕಂದಾಯ ಸಚಿವ ಆರ್. ಅಶೋಕ ಟ್ವೀಟ್ ಮಾಡಿದ್ದು, "ಅಕ್ರಮ ಹಣ ವಹಿವಾಟುಗಳು ಹಾಗೂ ಸಾಗಾಣಿಕೆಯ ವಿಚಾರವಾಗಿ ಮಾನ್ಯ ಡಿ. ಕೆ. ಶಿವಕುಮಾರ್ರನ್ನು ಇಡಿಯು ವಿಚಾರಣಾಧೀನವಾಗಿ ಬಂಧಿಸಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ. ಭಾಜಪ ಹಾಗೂ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇದರಲ್ಲಿಲ್ಲ. ತನಿಖಾ ಸಂಸ್ಥೆಗಳು ಸಾಂವಿಧಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ" ಎಂದು ಹೇಳಿದ್ದಾರೆ.

850 ಕೋಟಿ ಆಸ್ತಿಗಳಿಸಿದ್ದು ಹೇಗೆ?
ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿದ್ದು, "ಇಡಿ ವಶದಲ್ಲಿರುವ ಶಾಸಕ ಡಿ. ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ಕೊತ್ವಾಲ್ ರಾಮಚಂದ್ರನೊಂದಿಗೆ ಟೀ ಮಾರಾಟ ಮಾಡುತ್ತಿದ್ದರು. ಅದು ಹೇಗೆ 850 ಕೋಟಿ ಆಸ್ತಿಗಳಿಸಿದರು" ಎಂದು ಪ್ರಶ್ನೆ ಮಾಡಿದರು.

ಭಾವನಾತ್ಮಕವಾಗಿ ನೋಡಬೇಡಿ
ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿಕೆ ನೀಡಿದ್ದು, "ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಬಂಧನವನ್ನು ಭಾವನಾತ್ಮಕವಾಗಿ ನೋಡಬಾರದು. ನಾನೂ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಈ ಘಟನೆಯನ್ನು ಸಮುದಾಯದ ವಿರುದ್ಧ ನಡೆದ ಅನ್ಯಾಯವೆಂದು ಏಕೆ ಭಾವಿಸುವಿರಿ?" ಎಂದು ಪ್ರಶ್ನೆ ಮಾಡಿದರು.

ಡಿ. ಕೆ. ಶಿವಕುಮಾರ್ ಟ್ವೀಟ್
ಡಿ. ಕೆ. ಶಿವಕುಮಾರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಬೆಂಗಳೂರಿನಲ್ಲಿ ಪ್ರತಿಭಟನೆ ಆಯೋಜನೆ ಮಾಡಿರುವ ನಾಯಕರು, ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಾಂತಿಯುವತವಾಗಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.











Click it and Unblock the Notifications