ಗದಗ-ವಾಡಿ ರೈಲು ಮಾರ್ಗಕ್ಕೆ ಅಸ್ತು ಎಂದ ಕೇಂದ್ರ
ಗದಗ, ಮೇ. 14 : ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಇಲಾಖೆ ಅಗತ್ಯ ಅನುದಾನ ಮಂಜೂರು ಮಾಡಿದೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಕಾಮಗಾರಿ ಆರಂಭವಾಗಲಿಗೆ. 233.10 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೆಲವು ದಿನಗಳ ಹಿಂದೆ ಗದಗ-ವಾಡಿ ನಡುವಿನ 252 ಕಿಮೀ ನೂತನ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ 50:50ರ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೊಂಡಿದ್ದು, ಸದ್ಯ ರೈಲ್ವೆ ಇಲಾಖೆ ಅನುದಾನ ಮಂಜೂರು ಮಾಡಿದೆ.
ಈ ರೈಲು ಮಾರ್ಗದ ಕಾಮಗಾರಿಗೆ 233.10 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನವಾಗುವವರೆಗೂ ಅನುದಾನ ನೀಡುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಆದ್ದರಿಂದ ಯೋಜನೆ ಆರಂಭವಾಗಬೇಕಾದರೆ ಮೊದಲು ಭೂ ಸ್ವಾಧೀನವಾಗಬೇಕಿದೆ.
ಗದಗ-ವಾಡಿ ನೂತನ ರೈಲ್ವೆ ಮಾರ್ಗದ ನಿರ್ಮಾಣದಿಂದ ಐದು ಜಿಲ್ಲೆಗಳ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾರಿಗೆಗೆ ಅನುಕೂಲವಾಗಲಿದೆ. ಯೋಜನೆ ಆರಂಭಗೊಂಡ ಐದು ವರ್ಷಗಳಲ್ಲಿ ಪೂರ್ಣಗೊಳಿಸಿ ಲೋಕಾಪರ್ಣಣೆ ಮಾಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಗದಗ-ವಾಡಿ ರೈಲು ಮಾರ್ಗಕ್ಕೆ ಒಪ್ಪಿಗೆ
ಗದಗ-ವಾಡಿ ನಡುವಿನ 252 ಕಿಮೀ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಇಲಾಖೆ ಅಗತ್ಯ ಅನುದಾನ ಮಂಜೂರು ಮಾಡಿದೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಕಾಮಗಾರಿ ಆರಂಭವಾಗಲಿಗೆ. 233.10 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಇದರಿಂದ ಐದು ಜಿಲ್ಲೆಗಳ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾರಿಗೆಗೆ ಅನುಕೂಲವಾಗಲಿದೆ.

ಬೋಗಿಗಳನ್ನು ಬಿಟ್ಟು ಹೋದ ಚಾಲಕ
ಗೂಡ್ಸ್ ರೈಲಿನ ಬೋಗಿಯೊಂದರ ಹುಕ್ ತುಂಡಾಗಿ 7 ಬೋಗಿಗಳು ಎಂಜಿನ್ ಸಂಪರ್ಕ ಕಡಿದುಕೊಂಡು ಹಳಿಯ ಮೇಲೆ ನಿಂತಿದ್ದರೂ ಚಾಲಕ ಮಾತ್ರ ಎಂಜಿನ್ ಓಡಿಸಿಕೊಂಡು ಹೋದ ಘಟನೆ ಬಾಗಲಕೋಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹೊಸಪೇಟೆಯಿಂದ ಆಂಧ್ರದತ್ತ ಹೊರಟ ಗೂಡ್ಸ್ ರೈಲಿನಲ್ಲಿ ಈ ಅವಘಡ ಸಂಭವಿಸಿದೆ. ಮಲ್ಲಾಪುರದ ರಾಮರೋಡ ಮಠದ ಬಳಿ ಹುಕ್ ತುಂಡಾಗಿ 7 ಬೋಗಿಗಳು ಎಂಜಿನ್ ಸಂಪರ್ಕ ಕಡಿದುಕೊಂಡಿವೆ. ಬಾಗಲಕೋಟೆ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಕ್ಷಣ ಮತ್ತೊಂದು ಎಂಜಿನ್ ಸಹಾಯದಿಂದ ಬೋಗಿಗಳನ್ನು ನಿಲ್ದಾಣಕ್ಕೆ ತಂದಿದ್ದಾರೆ. ಇದರಿಂದಾಗಿ ಬಾಗಲಕೋಟೆಯಿಂದ ಬಿಜಾಪುರ, ಹುಬ್ಬಳ್ಳಿ, ಗದಗ, ಸೊಲ್ಲಾಪೂರಕ್ಕೆ ತೆರಳುವ ರೈಲುಗಳು ಸುಮಾರು ಎರಡು ಗಂಟೆ ತಡವಾಗಿ ಚಲಿಸಿದವು.

ಎಎನ್ಎಫ್ ಎನ್ ಕೌಂಟರ್ ತನಿಖೆ ಆರಂಭ
ಏಪ್ರಿಲ್ 19 ರಂದು ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣದ ನ್ಯಾಯಾಂಗ ತನಿಖೆ ಆರಂಭವಾಗಿದ್ದು, ತನಿಖಾಧಿಕಾರಿಯಾಗಿ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರನ್ನು ನೇಮಿಸಲಾಗಿದೆ. ಮಂಗಳವಾರ ಅವರು, ಘಟನಾ ಸ್ಥಳವಾದ ತನಿಕೋಡಿಗೆ ತೆರಳಿ ಸ್ಥಳ ಪರಿಶೀಲಿಸಿ, ನಂತರ ಸ್ಥಳೀಯರಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು. ನಂತರ ತಾಲೂಕು ಕಚೇರಿ ಕೊಠಡಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಹೇಳಿಕೆ ಪಡೆದುಕೊಂಡರು. ಆದರೆ, ಪ್ರಕರಣದ ಆರೋಪಿಯಾಗಿರುವ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ನನ್ನು ವಿಚಾರಣೆಗೆ ಕರೆತಂದಿರಲಿಲ್ಲ.

ವಿಷಾಹಾರ ಸೇವನೆ ಶಿಕ್ಷಕ ಸಾವು
ಕುಶಾಲನಗರ ಸಮೀಪದ ಹುಲುಸೆ ಗ್ರಾಮದಲ್ಲಿ ವಿಷಕಾರಿ ಸೊಪ್ಪಿನ ಆಹಾರ ಸೇವಿಸಿ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕುಟುಂಬ ಸದಸ್ಯರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಮೃತಪಟ್ಟವರನ್ನ ಹುಲುಸೆ ನಿವಾಸಿ ಮಂಜುನಾಥ್ (38) ಎಂದು ಗುರುತಿಸಲಾಗಿದೆ. ಇವರ ಪತ್ನಿ ಹೇಮ, ಮಗ ಮನೀಷ್, ಚಿಕ್ಕಪ್ಪ ನಾಗರಾಜ್ ಅವರ ಮಕ್ಕಳಾದ ಯೋಗೇಶ್ ಮತ್ತು ನಾಗೇಶ್ ಅವರು ಅಸ್ವಸ್ಥಗೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಮಂಜುನಾಥ್ ತನ್ನ ಕುಟುಂಬದೊಂದಿಗೆ ಮಾದಲಾಪುರದಲ್ಲಿರುವ ಅಜ್ಜಿ ಮನೆಗೆ ತೆರಳಿದ್ದರು. ಆಗ ಸೊಪ್ಪಿನ ಆಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದರು. ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಂಗಳವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

ಮೈಲಾರಲಿಂಗ ದೇವರಿಗೆ ಹೊಸ ರಥ
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಮೈಲಾರ ಗ್ರಾಮದ ಮೈಲಾರಲಿಂಗ ದೇವರಿಗೆ ಬುಧವಾರ ಹೊಸ ರಥವನ್ನು ಸಮರ್ಪಿಸಲಾಯಿತು. 80 ವರ್ಷಗಳಿಂದ ಹಳೆಯ ರಥವನ್ನೇ ಉತ್ಸವದಲ್ಲಿ ಬಳಸಲಾಗುತ್ತಿತ್ತು. ರಾಣೆಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ಭಕ್ತರು, ಹೊಸ ರಥವನ್ನು ಸಮರ್ಪಿಸಿದ್ದಾರೆ. 30 ಲಕ್ಷ ರೂ. ವೆಚ್ಚದಲ್ಲಿ ಈ ರಥ ನಿರ್ಮಿಸಲಾಗಿದೆ.

ಅಡಕೆ ಮಾರುಕಟ್ಟೆಯಲ್ಲಿ ಸಂಭ್ರಮ
ಶಿವಮೊಗ್ಗ ಅಡಕೆ ಮಾರುಕಟ್ಟೆಯಲ್ಲಿ ಸದ್ಯ ಸಂಭ್ರಮದ ವಾತಾವರಣ. ಸರಕು ಮಾದರಿ ಅಡಕೆ ದರವು ಇತಿಹಾಸ ಬರೆದಿದಿದ್ದು, ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿ ಅಡಕೆಯು ಕ್ವಿಂಟಲ್ ಗೆ 40 ಸಾವಿರ ತಲುಪಿದೆ. ಕೆಲ ತಿಂಗಳಿಂದ ಏರುಗತಿಯಲ್ಲಿದ್ದ ಅಡಕೆ ಧಾರಣೆ ಈಗ ದಾಖಲೆ ಬೆಲೆ ತಲುಪಿದೆ. ಬೆಟ್ಟೆ, ರಾಶಿ ಇಡಿ ಮಾದರಿಗಳ ದರವೂ 30 ಸಾವಿರ ದಾಟಿದೆ. ಆದ್ದರಿಂದ ರೈತರು ಸಂತಸಗೊಂಡಿದ್ದಾರೆ.












Click it and Unblock the Notifications