ಕವಿತಾಳಿಗೆ ಸರ್ಕಾರಿ ಉದ್ಯೋಗ : ಉಮಾಶ್ರೀ ಭರವಸೆ
ದಾವಣರೆಗೆ, ಫೆ.3 : ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆಯ ಕೊಕ್ಕನೂರಿ ಶಿಕ್ಷಕಿ ಕವಿತಾಳಿಗೆ ಭಾನುವಾರ ಒಂದು ಲಕ್ಷ ರೂ. ಪರಿಹಾರದ ಚೆಕ್ ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ವಿತರಿಸಿದ್ದಾರೆ.
ಭಾನುವಾರ ದಾವಣಗೆರೆ ನಗರದ ಎಸ್ಎಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವೆ ಉಮಾಶ್ರೀ, ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕವಿತಾಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು ಮತ್ತು ಒಂದು ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ಅನ್ನು ನೀಡಿದರು.
ಸಚಿವೆ ಉಮಾಶ್ರೀಯೊಂದಿಗೆ ಮಾತನಾಡಿದ ಕವಿತಾ ಅವರ ಸಹೋದರರಿ, ಕವಿತಾಳಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಉಮಾಶ್ರೀ ಈ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ಸಚಿವೆ ಉಮಾಶ್ರೀ, ಆಸಿಡ್ ದಾಳಿ ವಿಕೃತ ಮನಸ್ಸಿನ ಕೃತ್ಯವಾಗಿದ್ದು, ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು. [ಕರ್ನಾಟಕ ಇತರ ಜಿಲ್ಲಾಸುದ್ದಿಗಳು]

ಕವಿತಾಗೆ ಪರಿಹಾರ ವಿತರಣೆ
ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆಯ ಕೊಕ್ಕನೂರಿ ಶಿಕ್ಷಕಿ ಕವಿತಾಳಿಗೆ ಭಾನುವಾರ ಒಂದು ಲಕ್ಷ ರೂ. ಪರಿಹಾರದ ಚೆಕ್ ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ವಿತರಿಸಿದ್ದಾರೆ. ದಾವಣಗೆರೆಯ ಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕವಿತಾ ಅವರಿಗೆ ಪರಿಹಾರದ ಚೆಕ್ ನೀಡಿದ ಸಚಿವೆ ಉಮಾಶ್ರೀ, ಕವಿತಾಳಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಸನ್ನ ಉಪವಾಸ ಅಂತ್ಯ
ಕೈಮಗ್ಗ ನೇಕಾರರ ಸಮಸ್ಯೆ ಈಡೇರಿಸುವಂತೆ ಒತ್ತಾಯಿಸಿ, ಸಾಗರದಲ್ಲಿ ಚರಕ ಸಂಸ್ಥೆಯ ಮಖ್ಯಸ್ಥ ಪ್ರಸನ್ನ ನಡೆಸುತ್ತಿದ್ದ ಉಪವಾಸವನ್ನು ಭಾನುವಾರ ಅಂತ್ಯಗೊಳಿಸಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವ ಕುರಿತು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜ.30 ರಿಂದ ನಡೆಸುತ್ತಿದ್ದ ಉಪವಾಸವನ್ನು ಅವರು ಅಂತ್ಯಗೊಳಿಸಿದರು. ಕೆರೂರಿನ ಬನಶಂಕರಿ ಸ್ವಸಹಾಯ ಸಂಘದ ಮುಖ್ಯಸ್ಥ ಎಲ್.ಎಲ್.ಘಂಟಿ ಪ್ರಸನ್ನ ಅವರಿಗೆ ಲಿಂಬೆಹಣ್ಣಿನ ರಸ ನೀಡಿ ಉಪವಾಸಕ್ಕೆ ಮುಕ್ತಾಯ ಹಾಡಿದರು. ಈ ಸಂದರ್ಭ ಮಾತನಾಡಿದ ಪ್ರಸನ್ನ, ರಾಜ್ಯ ಸರ್ಕಾರ ಪಾರಂಪರಿಕ ಕೈಮಗ್ಗ ನೇಕಾರರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ. ಪಾರಂಪರಿಕ ನೇಕಾರಿಕಾ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗಗಳನ್ನು ಒದಗಿಸುವುದಿಲ್ಲ ಹಾಗೂ ಕೈಮಗ್ಗ ಮೀಸಲಾತಿ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಭರವಸೆ ನೀಡಿದೆ ಎಂದು ಹೇಳಿದರು.

ವಾರ್ತಾ ಇಲಾಖೆಯ ಪ್ರಚಾರ ಆಂದೋಲನಕ್ಕೆ ಚಾಲನೆ
ಕರ್ನಾಟಕ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಸಾಧಿಸಿರುವ ಪ್ರಗತಿ ಕುರಿತು ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ವಾರ್ತಾ ಇಲಾಖೆಯು ಆರಂಭಿಸಿರುವ ವಿಶೇಷ ಪ್ರಚಾರಾಂದೋಲನ `ನಮ್ಮ ನಾಡು- ಪ್ರಗತಿ ದರ್ಶನ`ಕ್ಕೆ ಬೀದರ್ ನಲ್ಲಿ ಚಾಲನೆ ನೀಡಲಾಗಿದೆ. ಹೈ-ಕ ಭಾಗದ ಬೀದರ್, ಕೊಪ್ಪಳ, ಗುಲ್ಬರ್ಗ, ರಾಯಚೂರು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆ ಮತ್ತು ಧಾರವಾಡ ಜಿಲ್ಲೆಗಳಿಗೆ ಸೇರಿದ ಆಯ್ದ 1,300 ಹಳ್ಳಿಗಳಲ್ಲಿ ವಿಶಾಲ ಎಲ್ಇಡಿ ಪರದೆ ಹಾಗೂ ಅತ್ಯುತ್ತಮ ಧ್ವನಿವರ್ಧಕ ವ್ಯವಸ್ಥೆ ಹೊಂದಿರುವ ವಾಹನಗಳನ್ನು ಉಪಯೋಗಿಸಿಕೊಂಡು ಈ ಪ್ರಚಾರಾಂದೋಲನ ನಡೆಸಲಾಗುತ್ತದೆ. ಈ ವಾಹನವು ಜಿಲ್ಲೆಯ ಎಲ್ಲಾ ತಾಲೂಕುಗಳ 180 ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಮಾಹಿತಿ ತಲುಪಿಸಲಿದೆ.

ತಾಲೂಕು ರಚನೆ ಖಂಡಿತ
ಸರ್ಕಾರ ಹೊಸ ತಾಲೂಕು ರಚನೆ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ನಿಡಗುಂದಿ ಪಟ್ಟಣವು ತಾಲೂಕು ಕೇಂದ್ರವಾಗಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ. ನಿಡಗುಂದಿ ತಾಲೂಕು ಕೇಂದ್ರವಾಗುವುದಿಲ್ಲ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದ ಹೊಸ ತಾಲೂಕುಗಳನ್ನು ರಚನೆ ಮಾಡುವಾಗ, ನಿಡಗುಂದಿ ಅದಕ್ಕೆ ಸೇರ್ಪಡೆಗೊಳ್ಳಲಿದ್ದು ತಾಲೂಕು ಕೇಂದ್ರವಾಗಲಿಗೆ ಎಂದರು.












Click it and Unblock the Notifications