ಈಶ್ವರಪ್ಪನವರ ಒಂದು ಹೇಳಿಕೆಯಿಂದ ಓಡೋಡಿ ಬಂದು ಒಂದಾದ ಬಾಂಬೆ ಫ್ರೆಂಡ್ಸ್
ಬೆಂಗಳೂರು, ಜೂನ್ 18: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಮೂರು ದಿನಗಳ ಭೇಟಿಯಿಂದ ಭಿನ್ನರ ಧ್ವನಿ ತಣ್ಣಗಾಯಿತೇ, ನಾಯಕತ್ವ ಬದಲಾವಣೆಗೆ ವೇದಿಕೆ ರೂಪಗೊಂಡಿತೇ.. ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ, ಬಾಂಬೆ ಫ್ರೆಂಡ್ಸ್ ಮಾತ್ರ ಒಂದಾಗಿದ್ದಂತೂ ಹೌದು.
ಯಡಿಯೂರಪ್ಪನವರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣೀಕರ್ತರಾದ ಹದಿನೇಳು ಶಾಸಕರು, ತಮ್ಮತಮ್ಮ ಇಲಾಖೆಯ ಕೆಲಸವನ್ನು ನೋಡಿಕೊಂಡು ತಮ್ಮ ಪಾಡಿಗೆ ಇದ್ದರು.
ಇದರ ಮಧ್ಯೆ, ಈ ಶಾಸಕರ/ಸಚಿವರ ನಡುವೆ ಕೆಲವೊಂದು ವಿಚಾರಕ್ಕೆ ಸಣ್ಣ ಭಿನ್ನಾಭಿಪ್ರಾಯವೂ ಕಾಣಿಸಿಕೊಂಡಿತ್ತು. ದೋಸ್ತಿಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದರೂ, ಅದು ದೊಡ್ಡ ಮಟ್ಟಿಗೆ ಬಿಕ್ಕಟ್ಟಾಗದಂತೆ ನೋಡಿಕೊಂಡಿದ್ದರು.
ಈ ನಡುವೆ, ಬಿಜೆಪಿಯ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಒಂದು ಹೇಳಿಕೆ, ಇವರೆಲ್ಲರನ್ನೂ ಮತ್ತೆ ಒಗ್ಗೂಡಿಸುವಂತೆ ಮಾಡಿದೆ. ಈಶ್ವರಪ್ಪನವರ ವಿರುದ್ದ ಹದಿನೇಳು ಮುಖಂಡರ ಪೈಕಿ, ಕೆಲವರು ಖಾರವಾಗಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಹದಿನೇಳು ಮಂದಿ ಬಿಜೆಪಿಗೆ ಬಂದಿದ್ದರಿಂದಲೇ ಗೊಂದಲವಾಗಿದೆ
ಅರುಣ್ ಸಿಂಗ್ ಭೇಟಿಗೆ ಮುನ್ನ ಮಾತನಾಡುತ್ತಿದ್ದ ಈಶ್ವರಪ್ಪ, "ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪವಿರುವುದು ಸತ್ಯ. ಇವತ್ತಿನ ಸಭೆಯಲ್ಲಿ ಯಡಿಯೂರಪ್ಪ ಇರುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ, ನಾಳೆ ಎಲ್ಲರ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶವಿದೆ. ಹದಿನೇಳು ಮಂದಿ ಬಿಜೆಪಿಗೆ ಬಂದಿದ್ದರಿಂದಲೇ ಗೊಂದಲವಾಗಿದೆ"ಎಂದು ಹೇಳಿದ್ದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡಾ ತಿರುಗೇಟು ನೀಡಿದ್ದರು
ಈಶ್ವರಪ್ಪನವರ ಈ ಹೇಳಿಕೆ ಬಾಂಬೆ ಫ್ರೆಂಡ್ಸ್ ಅನ್ನು ಒಗ್ಗೂಡುವಂತೆ ಮಾಡಿದೆ. ನಾವು ಬಂದಿದ್ದರಿಂದಲೇ ಇಂದು ಈಶ್ವರಪ್ಪ ಸಚಿವರಾಗಿದ್ದಾರೆ ಎಂದು ಎಂ.ಟಿ.ಬಿ ನಾಗರಾಜ್ ಕಿಡಿಕಾರಿದ್ದರು. "ಬಿಜೆಪಿಯಲ್ಲೀಗ ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ ಸೊಸೆ ಮೊಳೆ ಹೊಡೆದು ಬಂದ ಹಾಗೆ ಬಂದಿದ್ದೇವೆ'' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡಾ ತಿರುಗೇಟು ನೀಡಿದ್ದರು.

ಬುಧವಾರದಂದು (ಜೂನ್ 16) ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ
ಬುಧವಾರದಂದು (ಜೂನ್ 16) ಅರುಣ್ ಸಿಂಗ್ ಬೆಂಗಳೂರಿಗೆ ಬಂದಿದ್ದಾಗ, ಇವರೆಲ್ಲರೂ ಒಟ್ಟಾಗಿ ಅವರನ್ನು ಸ್ವಾಗತಿಸಿದ್ದರು. ಜೊತೆಗೆ, ನಾಯಕತ್ವ ಬದಲಾವಣೆಯ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನೂ ಆಲಿಸುವಂತೆ ಅರುಣ್ ಸಿಂಗ್ ಅವರಿಗೆ ಒತ್ತಡವನ್ನು ಹೇರಿದ್ದರು. ನಮ್ಮ ಭವಿಷ್ಯದ ಬಗ್ಗೆಯೂ ಯೋಚಿಸಿ ಎಂದು ಅರುಣ್ ಸಿಂಗ್ ಅವರಿಗೆ ವಿನಂತಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
Recommended Video

ಯಡಿಯೂರಪ್ಪನವರ ನಾಯಕತ್ವವನ್ನು ಒಪ್ಪಿಕೊಂಡು ಬಿಜೆಪಿಗೆ ಬಂದಿರುವುದು
ನಾವೆಲ್ಲಾ ಯಡಿಯೂರಪ್ಪನವರ ನಾಯಕತ್ವವನ್ನು ಒಪ್ಪಿಕೊಂಡು ಬಿಜೆಪಿಗೆ ಬಂದಿರುವುದು. ನಾಯಕತ್ವ ಬದಲಾವಣೆಯಿಲ್ಲ ಎನ್ನುವ ಸ್ಪಷ್ಟ ಸಂದೇಶ ರಾಜ್ಯದ ಜನತೆಗೆ ಹೋಗಬೇಕು ಎಂದು ಇವರು ಒತ್ತಡ ತಂದಿದ್ದರು. ಒಟ್ಟಿನಲ್ಲಿ, ಈಶ್ವರಪ್ಪನವರ ಒಂದು ಹೇಳಿಕೆಯಿಂದಾಗಿ ಬಾಂಬೆ ಫ್ರೆಂಡ್ಸ್ ಮತ್ತೆ ಒಂದಾಗುವಂತೆ ಮಾಡಿದೆ.












Click it and Unblock the Notifications