ಕಾವೇರಿ ವಿವಾದದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಮಾಹಿತಿ!
ಬೆಂಗಳೂರು: ಕಾವೇರಿ ವಿಚಾರವಾಗಿ ರಾಜ್ಯದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದ ಕಾವೇರಿ ಪಾತ್ರದ ಆಣೆಕಟ್ಟುಗಳ ಒಳಹರಿವು 15 ಸಾವಿರ ಕ್ಯೂಸೆಕ್ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ ಎಂದಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್. ಹಾಗೇ ಕಾವೇರಿ ನೀರಿನ ವಿಚಾರದಲ್ಲಿ ಕಾನೂನು ಹೋರಾಟದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಚಿತ್ರಕಲಾ ಪರಿಷತ್ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ವಿಚಾರ ತಿಳಿಸಿದರು. ರಾಜ್ಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ವಕೀಲರ ಜೊತೆ ಚರ್ಚೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಪುನರ್ ಪರಿಶೀಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿನ್ನೆ ಮೇಲ್ಮನವಿ ಸಲ್ಲಿಸಿದ್ದೇವೆ. ಒಳ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಮಳೆ ಬೀಳಲಿ ಎಂದು ಜನತೆ ಪ್ರಾರ್ಥನೆ ಮಾಡಬೇಕಿದೆ ಎಂದು ಇದೇ ವೇಳೆ ತಿಳಿಸಿದರು.

ಕಾನೂನು ಹೋರಾಟಕ್ಕೆ ನಾವು ಬದ್ಧ
ನಮ್ಮ ರೈತರ ಬೆಳೆ ಹಾಳಾಗದಂತೆ ಈಗಾಗಲೇ ನೀರು ಬಿಟ್ಟಿದ್ದೇವೆ. ತಮಿಳುನಾಡಿಗೆ ಕೆಆರ್ಎಸ್ ಡ್ಯಾಂ ಮೂಲಕ ನೀರು ಹರಿಸದಿದ್ದರೂ ಬೆಂಗಳೂರು & ಸುತ್ತಮುತ್ತಲ ಭಾಗದಲ್ಲಿ ಬಿದ್ದ ಮಳೆ & ಸೀಪೆಜ್ ಮೂಲಕ ಆರೂವರೆ ಸಾವಿರ ಕ್ಯೂಸೆಕ್ ಅನಿಯಂತ್ರಿತ ನೀರು ಹರಿದಿದೆ. ಹೀಗೆ ನಮ್ಮಲ್ಲಿ ಮಳೆ ಬಂದಷ್ಟು ನಮಗೆ ಶಕ್ತಿ ಬರುತ್ತದೆ. ಉಳಿದಂತೆ ಕಾವೇರಿ ನೀರಿನ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ನಾವು ಬದ್ಧವಿದ್ದೇವೆ ಎಂದು ಈ ಸಂದರ್ಭದಲ್ಲಿ ಡಿಸಿಎಂ ಸ್ಪಷ್ಟಪಡಿಸಿದರು.
ಜಾತಿ ಆಧಾರದಲ್ಲಿ ಹುದ್ದೆ ನೀಡಲು ಆಗಲ್ಲ
ಮತ್ತೊಂದ್ಕಡೆ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಹೇಳಿಕೆಗೆ ಬದ್ಧ ಎಂದಿರುವ ಬಗ್ಗೆ ಮಾತನಾಡಿದ ಡಿಸಿಎಂ, ಅವರು ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ ಡಿಸಿಎಂ.
ಸಚಿವರಾಗಿ ನಾವು ಕೂಡ ಜವಾಬ್ದಾರಿ...
ಸಿಎಂ ಆಡಳಿತದ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಪ್ರಶ್ನೆ ಮಾಡಿರುವ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ, ಸಿಎಂಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮಂತ್ರಿಗಳಾದ ನಮ್ಮಲ್ಲೂ ಸಾಮಾನ್ಯ ಪ್ರಜ್ಞೆ ಇರಬೇಕು. ಯಾರಾದರೂ ಒಬ್ಬರಿಗೆ ಪೋಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕಾಗಿ ಆದ್ಯತೆ ನೀಡಬೇಕು. ಸರ್ಕಾರ ಅಂದರೆ ಎಲ್ಲಾ ಮುಖ್ಯಮಂತ್ರಿ ಮೇಲೆ ಹಾಕಬಾರದು. ಸಚಿವರಾಗಿ ನಾವು ಕೂಡ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.

ಹಾಗೇ ಮಾತನ್ನ ಮುಂದುವರಿಸಿದ ಡಿಸಿಎಂ, ಎಲ್ಲಾ ಕಾಲದಲ್ಲಿಯೂ ಇದು ನಡೆದುಕೊಂಡು ಬಂದಿದೆ. ಶಾಮನೂರು ಶಿವಶಂಕರಪ್ಪ ಅವ್ರು ನಮ್ಮ ಪಕ್ಷದ ನಾಯಕರು. ಒಂದು ಸಮಾಜದ ಸಂಘದ ಅಧ್ಯಕ್ಷರು. ಅವರ ಮೇಲೆ ಒತ್ತಡ ಇರುತ್ತೆ. ಕೆಲವು ಅಧಿಕಾರಿಗಳು ಸಚಿವರ ಬಳಿಯೂ ಹೋಗಿ ಮನವಿ ಮಾಡಿದ್ದಾರೆ. ಈ ರೀತಿ ಕೇಳುವುದರಲ್ಲಿ ತಪ್ಪಿಲ್ಲ ಎಂದು ಇದೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಆಮೀಷ ಒಡ್ಡಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಸೆಳೆಯುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಅವರು ನಿಮ್ಮ ವಿರುದ್ಧ ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ, ಅವರು ಆಪರೇಷನ್ ಕಮಲದ ಬಗ್ಗೆ ಯೋಚಿಸಲಿ. ಸದನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಅವರು ಏನು ಹೇಳಿದರು. ಹೊರಗಡೆ ಏನೆಲ್ಲಾ ನಡೆಯಿತು ಎಂದು ಯೋಚಿಸಲು ಹೇಳಿ. ಅವರ ಸಂಸತ್ ಕ್ಷೇತ್ರದಲ್ಲಿ ಏನೆಲ್ಲಾ ಆಗಿದೆ ಎಂದು ಮೆಲುಕು ಹಾಕಲಿ ಎಂದು ಇದೇ ವೇಳೆ ಡಿಸಿಎಂ ತಿರುಗೇಟು ನೀಡಿದರು.












Click it and Unblock the Notifications