ಕ್ರೀಡಾಕೂಟದಲ್ಲಿ ಸೋತರೂ ನಾಯಕನಾಗಿ ಬೆಳೆದೆ: ಡಿ.ಕೆ.ಶಿವಕುಮಾರ್
ಮೈಸೂರು: ನನ್ನ 14 ನೇ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಸೋತು ಮನೆಗೆ ಹೋಗಿದ್ದೆ. ಆದರೆ ನಾಯಕನಾಗಿ ಬೆಳೆದೆ. ನೀವು ನನ್ನಂತೆ ನಾಯಕರಾಗಿ ಬೆಳೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಹಾಗಾದರೆ ಡಿಸಿಎಂ ಈ ಮಾತು ಹೇಳಿದ್ದೆಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟನೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪು ಮಾಡಿಕೊಂಡರು. ಜೂನಿಯರ್ ವಿಭಾಗದ ಜಾವಲಿನ್ ಎಸೆತ & 14.5 ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ನಾನು ಕೂಡ ಭಾಗವಹಿಸಿದ್ದೆ. ನೀವು ಕುಳಿತ ಜಾಗದಲ್ಲೇ ನಾನು ಕುಳಿತುಕೊಂಡಿದ್ದೆ. ಗ್ರಾಮೀಣ ಭಾಗದಿಂದ ಬಂದಂತಹ ನೀವೆಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಆಸ್ತಿಯಾಗಿ ಬೆಳಗಬೇಕು ಎಂದು ಸಲಹೆ ನೀಡಿದರು.

ಇಂಟರ್ನ್ಯಾಷನಲ್ ಲೆವೆಲ್ ಪೈಪೋಟಿ ಬೇಕು!
ಶ್ರಮ ಪಡದೆ ಯಾವುದೂ ಸಿಗಲ್ಲ. ಶ್ರಮ ಇದ್ದ ಕಡೆ ಫಲವಿದೆ. ಗಣಪತಿಯನ್ನು ಪೂಜಿಸಿದ ತಕ್ಷಣ ವಿದ್ಯೆ ಬರುವುದಿಲ್ಲ, ಹಗಲು ಹೊತ್ತು ಶ್ರಮ ಪಡಬೇಕು. ಈಗ ಸ್ಪರ್ಧೆ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 107 ಪದಕಗಳನ್ನು ಗೆದ್ದಿದ್ದು, ಕನ್ನಡಿಗರು 11 ಪದಕ ಗೆದ್ದಿದ್ದಾರೆ. ನೀವೆಲ್ಲಾ ಗ್ಲೋಬಲ್ ಮಟ್ಟಕ್ಕೆ ಬೆಳೆಯಬೇಕು ಎಂದು ಹುರಿದುಂಬಿಸಿದರು. ಹಾಗೇ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಹದೇವಪ್ಪ ಅವರ ಮನವಿ ಮೇರೆಗೆ ಬಂದು ಸಂತೋಷದಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ್ದೇನೆ. ಕ್ರೀಡಾಕೂಟದ ಉದ್ಘಾಟನೆ ಮಾಡಿದ್ದು ಬಹಳ ಸಂತಸ ನೀಡಿತು ಎಂದು ಹೇಳಿದರು.
ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಅವರು, ಕ್ರೀಡಾ ಸಚಿವರಾದ ನಾಗೇಂದ್ರ ಅವರು ಕ್ರೀಡಾಪಟುಗಳಿಗೆ ಉತ್ತಮವಾದ ಸಮವಸ್ತ್ರಗಳನ್ನ ನೀಡಿದ್ದಾರೆ. ನಾವುಗಳು ಒಂದು ಶೂ ತೆಗೆದುಕೊಳ್ಳಲು ಪರದಾಡುವಂತಹ ಸ್ಥಿತಿಯಿತ್ತು. ಇಂದು ನಿಮ್ಮ ಪೋಷಕರು ಬೆಂಬಲ ನೀಡಿದ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ, ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ಈ ಮೂಲಕ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನೆದಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯುವ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.












Click it and Unblock the Notifications