‘ಟಗರು’ ವಿರುದ್ಧ ‘ಸೂರ್ಯ’ ಗರಂ: ಸಿಎಂ ಸಿದ್ದರಾಮಯ್ಯ VS ತೇಜಸ್ವಿ ಸೂರ್ಯ ಫೈಟ್ ಬಲು ಜೋರು!
ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ & ಸಂಸದ ತೇಜಸ್ವಿ ಸೂರ್ಯ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಒಬ್ಬರು ಮತ್ತೊಬ್ಬರನ್ನು ಬೈಯುವ ಹಂತಕ್ಕೆ ತಿಕ್ಕಾಟ ಜೋರಾಗಿದೆ. ಕೆಲ ಗಂಟೆ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಅದಕ್ಕೆಲ್ಲಾ ತೇಜಸ್ವಿ ಸೂರ್ಯ ಉತ್ತರಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಉತ್ತರ ನೀಡಿದ್ದಾರೆ.
ತೇಜಸ್ವಿ ಸೂರ್ಯ ನನ್ನ ವಿಚಾರದಲ್ಲಿ ಸುಳ್ಳು ಹೇಳ್ತಿದ್ದಾರೆ ಅಂತ ಇಂದು ಸಿದ್ದರಾಮಯ್ಯ ಗರಂ ಆಗಿದ್ದರು. ಹೀಗೆ ಹೇಳಿಕೆ ನೀಡಿ ಸಂಸದ ಸೂರ್ಯ ವಿರುದ್ಧ ಆಕ್ರೋಶನ ಹೊರಹಾಕಿದ್ದರು ಸಿಎಂ ಸಿದ್ದರಾಮಯ್ಯ. 'ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆ ತುಂಡರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು.

ಗದ್ದಲದ ಕಾರಣ ವರದಿಗಾರರ ಪ್ರಶ್ನೆ ಆರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿ ಇರುವುದು ಎಂದು ಗೊತ್ತಾದ ಬಳಿಕ ರಾಜ್ಯ ಸರ್ಕಾರ ಪರಿಹಾರ ನಿಡಲು ಬದ್ಧವಾಗಿರುವುದನ್ನ ತಿಳಿಸಿದ್ದೇನೆ' ಎಂದು ಹೇಳಿದ್ದರು. ಈಗ ಸಿಎಂ ಹೇಳಿಕೆ ಬಗ್ಗೆ ತೇಜಸ್ವಿ ಸೂರ್ಯ ಉತ್ತರಿಸಿದ್ದಾರೆ.
ಸಿದ್ದರಾಮಯ್ಯ VS ಸೂರ್ಯ
ಈಗ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಸೂರ್ಯ 'ಮಾನ್ಯ ಶ್ರೀ Siddaramaiah ಸರ್, ಯೋಧರೊಬ್ಬರು ತೀರಿಕೊಂಡು 12 ದಿವಸಗಳಾದರೂ ನಿಮ್ಮ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸದೇ ಇದ್ದಿದ್ದು ಸತ್ಯ.
ನಾನು ನಿಮಗೆ ಪತ್ರ ಬರೆದು ಜ್ಞಾಪಿಸುವ ವರೆಗೂ ಪರಿಹಾರ ನೀಡಲು ತಾವುಗಳು ಮೀನ ಮೇಷ ಎಣಿಸಿದ್ದು ಕೂಡ ಸತ್ಯ. ಮಾಧ್ಯಮದ ಸ್ನೇಹಿತರು ತಮ್ಮನ್ನು ಪ್ರಶ್ನಿಸಿದಾಗ, ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದು ಸಹ ಸತ್ಯ.' ಎಂದು ಹೇಳಿದ್ದಾರೆ ಸಂಸದ ತೇಜಸ್ವಿ ಸೂರ್ಯ.

ಇದು ರಾಜಕೀಯ ಮಾಡುವ ವಿಷಯವಂತೂ...
ಹಾಗೇ ಸಿಎಂ ಸಿದ್ದರಾಮಯ್ಯ ವಿರುದ್ಧದ ತಮ್ಮ ಹೇಳಿಕೆ ಮುಂದುವರಿಸಿರುವ ಸೂರ್ಯ ಅವರು, 'ನಂತರದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸಿ ಆಗ್ರಹ ಪಡಿಸುವವರೆಗೂ ತಾವು ಪರಿಹಾರ ಘೋಷಣೆ ಮಾಡದೇ ಇದ್ದಿದ್ದು ಕೂಡ ಸತ್ಯ . ಎರಡನೇ ಬಾರಿ ನಾನು ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಆಗ್ರಹ ಮಾಡಿದ ನಂತರ, ಮಾಧ್ಯಮ & ಸಾರ್ವಜನಿಕರ ನಿರಂತರ ಒತ್ತಡದ ನಂತರವೇ ನಿನ್ನೆ ತಡರಾತ್ರಿ ತಾವು ಪರಿಹಾರ ಘೋಷಿಸಿದ್ದು ಕೂಡ ಸತ್ಯ. ಇದು ರಾಜಕೀಯ ಮಾಡುವ ವಿಷಯವಂತೂ ಖಂಡಿತ ಅಲ್ಲ.' ಎಂದಿದ್ದಾರೆ ಸಂಸದ ತೇಜಸ್ವಿ ಸೂರ್ಯ.
ಸಂಸದ ಸೂರ್ಯ ಅಂತಿಮವಾಗಿ 'ಒಟ್ಟಿನಲ್ಲಿ ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ರವರ ಕುಟುಂಬಕ್ಕೆ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ಧನ್ಯವಾದಗಳು. ಇದರೊಂದಿಗೆ ಆನೇಕಲ್ ತಾಲ್ಲೂಕಿನ ಜಿಗಣಿ ಪ್ರದೇಶದ ಮುಖ್ಯ ರಸ್ತೆಯನ್ನು, ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರ ಹೆಸರಿನಲ್ಲಿ ನಾಮಕರಣಗೊಳಿಸುವಂತೆ ಮನವಿ ಕೂಡ ಸಲ್ಲಿಸಿದ್ದು, ಈ ಮನವಿಗೆ ಶೀಘ್ರ ಸ್ಪಂದನೆ ಒದಗಿಸಿ ಹುತಾತ್ಮ ಯೋಧರೊಬ್ಬರಿಗೆ ಗೌರವ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ.' ಎಂದಿದ್ದಾರೆ.












Click it and Unblock the Notifications