ಉಪನ್ಯಾಸಕ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ ಕೊಟ್ಟ ರಾಜ್ಯ ಸರ್ಕಾರದ ಹೊಸ ಆದೇಶ!
ಬೆಂಗಳೂರು, ಜು. 01: ಸಹಾಯಕ ಪ್ರಾದ್ಯಾಪಕರ ನೇಮಕಾತಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರವು ಇನ್ನು ಆರು ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಹೊಸ ಆದೇಶ ಭಾವಿ ಪ್ರಾಧ್ಯಾಪಕರಿಗೆ ಸಂತಸ ತಂದಿದೆ.
ಕಳೆದ 2009ರ ನಂತರ ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇಮಕ ಮಾಡಿರಲಿಲ್ಲ. ಪ್ರಾಂಶುಪಾಲರ ನೇಮಕಾತಿಗೆ 55 ವರ್ಷ ವಯೋಮಿತಿ ಇದೆ. ಅದೇ ರೀತಿ 2017ರ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕವೂ ಆಗಿರಲಿಲ್ಲ. ಹೀಗಾಗಿ ಪ್ರಾಂಶುಪಾಲರೂ ಸೇರಿದಂತೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶ ಮಾಡಿದ್ದು, ಮುಂದಿನ ಆರು ತಿಂಗಳುಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಲಿದೆ.
ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೊಸ ಆದೇಶದಲ್ಲಿ ಏನಿದೆ? ಅದು ಭಾವಿ ಉಪನ್ಯಾಸಕರಿಗೆ ಯಾಕೆ? ಖುಷಿಕೊಡುವ ಸಂಗತಿಯಾಗಿದೆ? ಆ ಬಗ್ಗೆ ಸಂಪೂರ್ಣ ವಿವರ ಮುಂದಿದೆ.

ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಪ್ರಿಲಿಮನರಿ ಪರೀಕ್ಷೆ
ಸಹಾಯಕ ಪ್ರಾದ್ಯಾಪಕರು ಹಾಗೂ ಉಪನ್ಯಾಸಕರ ನೇಮಕಾತಿ ಕುರಿತು ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಕುರಿತು ಮಾತನಾಡಿರುವ ಅವರು, "ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ 500 ಅಂಕಕ್ಕೆ ನಡೆಯುತ್ತದೆ. ಅದರಲ್ಲಿ ಕನ್ನಡ ವಿಷಯಕ್ಕೆ 100 ಅಂಕಗಳು, ಇಂಗ್ಲಿಷ್ ವಿಷಯಕ್ಕೆ 100 ಅಂಕಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ 50 ಹಾಗೂ ಆಯ್ಕೆ ವಿಷಯಗಳಿಗೆ 250 ಅಂಕಗಳ ಪರೀಕ್ಷೆ ನಡೆಯಲಿದೆ. ಅದೇ ರೀತಿ ಪ್ರಾಂಶುಪಾಲರ ಆಯ್ಕೆ ಪರೀಕ್ಷೆ 100 ಅಂಕ ಇರುತ್ತದೆ. ಎಲ್ಲ ಪ್ರಶ್ನೆಗಳು ಬಹು ಆಯ್ಕೆ ಮಾದರಿಯಲ್ಲಿ ಇರುತ್ತವೆ. ಪ್ರಿಲಿಮನರಿ ಪರೀಕ್ಷೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು" ಎಂದು ಮಾಹಿತಿ ನೀಡಿದ್ದಾರೆ.

ಭ್ರಷ್ಟಾಚಾರ ರಹಿತ ನೇಮಕಾತಿ!
ಸರ್ಕಾರದ ಮತ್ತೊಂದು ಮಹತ್ವದ ಆದೇಶ ಭಾವಿ ಸಹಾಯಕ ಪ್ರಾದ್ಯಾಪಕರಿಗೆ ಸಂತಸದ ಸುದ್ದಿಯನ್ನು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಕೊಟ್ಟಿದ್ದಾರೆ. ಸಂದರ್ಶನ ಇಲ್ಲದೆಯೇ ಲಿಖಿತ ಪರೀಕ್ಷೆಯ ಮೂಲಕವೇ ಸಹಾಯಕ ಪ್ರಾದ್ಯಾಪಕರೂ ಸೇರಿದಂತೆ ಎಲ್ಲ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರ ನೇಮಕಾತಿಯಲ್ಲಿ ಭ್ರಷ್ಟಾಚಾರಕ್ಕೆ ತಡೆ ಹಾಕಿದಂತಾಗಿದೆ. ಕೆಪಿಎಸ್ಸಿಯಿಂದ ಪರೀಕ್ಷೆ ನಡೆಸಲಾಗುತ್ತಿದ್ದು, ಸಂದರ್ಶನವಿಲ್ಲದೆ ನೇರ ನೇಮಕಾತಿಗೆ ಸರ್ಕಾರ ಮುಂದಾಗಿದೆ.

ನೇಮಕಾತಿಗೆ ಬೇರೆ ಮಾನಡಂದವೇನು?
"ಸಹಾಯಕ ಪ್ರಾದ್ಯಾಪಕರ ನೇಮಕಾತಿ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ ಆರು ತಿಂಗಳ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಜೊತೆಗೆ ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಅರ್ಹತೆ ಆಧಾರದ ಮೇಲೆಯೇ ಇಡೀ ನೇಮಕಾತಿ ಆಗಲಿದೆ. ಅರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ಮಾನದಂಡವೂ ಈ ನೇಮಕಾತಿಯಲ್ಲಿ ಇರುವುದಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
Recommended Video

ಲಾಕ್ಡೌನ್ ಮುಗಿಯುತ್ತಿದ್ದಂತೆಯೆ ಆದೇಶ!
ಸಹ ಪ್ರಾದ್ಯಾಪಕರು ಹಾಗೂ ಪ್ರಾಂಶುಪಾಲರ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ಕಾರ ವಿಸ್ತೃತ ಆದೇಶ ಹೊರಡಿಸಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೆ ಹಂತಹಂತವಾಗಿ ಲಾಕ್ಡೌನ್ ತೆರವು ಮಾಡಲಾಗುತ್ತಿದೆ. ಲಾಕ್ಡೌನ್ ತೆರವು ಮಾಡುತ್ತಿದ್ದಂತೆಯೆ ನೇಮಕಾತಿ ಆದೇಶ ಮಾಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯ ಇದೇ ತಿಂಗಳ (ಜುಲೈ) ಅಂತ್ಯದೊಳಗೆ ಮುಗಿಯಲಿದೆ ಎಂದು ಸರ್ಕಾರ ಮಾಹಿತಿ ಕೊಟ್ಟಿದೆ. ನಂತರ ಆನ್ಲೈನ್ ಹಾಗೂ ಆಫ್ಲೈನ್ ತಗರತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಹೀಗಾಗಿ ನೇರ ತರಗತಿಗಳು ಆರಂಭವಾಗುತ್ತಿದ್ದಂತೆಯೆ ಸಹ ಪ್ರಾದ್ಯಾಪಕರ ನೇಮಕಾತಿ ಪ್ರಕ್ರಿಯೆ ಕೂಡ ಮುಗಿಯಲಿದೆ ಎಂಬ ಮಾಹಿತಿಯಿದೆ.












Click it and Unblock the Notifications