ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ
ಮಂಗಳೂರು, ಮೇ 3: ಮೂರನೇ ಹಂತದ ಲಾಕ್ ಡೌನ್ ನಾಳೆಯಿಂದ (ಮೇ 4) ಆರಂಭಗೊಳ್ಳಲಿದೆ. ಕರ್ನಾಟಕದಲ್ಲಿ ನಾಳೆಯಿಂದ ಕೆಲವು ಅಂಗಡಿ, ಮಳಿಗೆ ಓಪನ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರಲ್ಲಿ ಮದ್ಯ ಮಾರಾಟ ಕೂಡಾ.
ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದ್ದು, ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಏಳು ಗಂಟೆಯ ತನಕ, ಮದ್ಯದ ಅಂಗಡಿ ತೆರೆಯಲು ಸರಕಾರ ಅನುಮತಿ ನೀಡಿದೆ.
ಎಂಎಸ್ಐಎಲ್ ಮತ್ತು ವೈನ್ ಸ್ಟೋರ್ ಗಳಲ್ಲಿ ಮಾತ್ರ ಮದ್ಯ ಸಿಗಲಿದ್ದು, ಸುಮಾರು ನಲವತ್ತು ದಿನಗಳ ನಂತರ ಈ ಅಂಗಡಿಗಳು ತೆರೆಯಲಿವೆ. ಈ ನಡುವೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಜನರಲ್ಲಿ ಮನವಿ ಮಾಡಿದ್ದಾರೆ.
ಲಾಕ್ ಡೌನ್ ವೇಳೆ, ಧರ್ಮಸ್ಥಳ ದೇವಾಲಯ ದೈನಂದಿನ ಕಿಟ್ ಗಳನ್ನು, 10 ಸಾವಿರಕ್ಕೂ ಅಧಿಕ ಮಂದಿಗೆ ನೇರವಾಗಿ 25 ಲಕ್ಷ ಮೌಲ್ಯದ ವಸ್ತುರೂಪದ ಸಹಾಯ ಒದಗಿಸಿದೆ. ಹೆಗ್ಗಡೆಯವರ ಸಂದೇಶ ಇಂತಿದೆ:

ಮತ್ತೊಮ್ಮೆ ಮದ್ಯಸೇವನೆ ಯಾಕೆ
"ನಮ್ಮ ರಾಜ್ಯದಲ್ಲಿ ಕಳೆದ ನಲವತ್ತು ದಿನಗಳಿಂದ ಮದ್ಯ ಲಭ್ಯವಿಲ್ಲದೇ ಎಲ್ಲರೂ ಮದ್ಯ ತ್ಯಜಿಸಿದ್ದಾರೆ. ಇದರಿಂದಾಗಿ ಎಲ್ಲರ ಮನೆಯಲ್ಲೂ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಆರೋಗ್ಯ ಸುಧಾರಿಸಿದೆ, ಖರ್ಚು ಕಡಿಮೆಯಾಗಿದೆ. ಮದ್ಯ ಸೇವನೆ ಬಿಟ್ಟಿದ್ದರಿಂದ ನಮಗೇನೂ ಕೆಡುಕಾಗಿಲ್ಲ. ಹಾಗಿರುವಾಗ, ಇದೀಗ ಮತ್ತೊಮ್ಮೆ ಮದ್ಯಸೇವನೆ ಯಾಕೆ?"

ಎಲ್ಲಾ ಸಹೋದರ, ಸಹೋದರಿಯರೇ
"ಆದುದರಿಂದ ಎಲ್ಲಾ ಸಹೋದರ, ಸಹೋದರಿಯರೇ ದಯವಿಟ್ಟು ಮದ್ಯಸೇವನೆಯನ್ನು ಪುನರಾರಂಭಿಸಬೇಡಿ, ಮಾಡದಂತೆ ತಡೆಯಿರಿ. ಮದ್ಯಪಾನ ಶಾಸ್ವತವಾಗಿ ತ್ಯಜಿಸಿರಿ. ಕುಟುಂಬ ಸಮೇತರಾಗಿ ಮನೆಯಲ್ಲಿ ಎಲ್ಲರೂ ದೇವರ ಹೆಸರಿನಲ್ಲಿ ಮದ್ಯ ತಿರಸ್ಕರಿಸುವ ಸಂಕಲ್ಪ ಮಾಡಿ, ಮದ್ಯಪಾನ ಬೇಡ".

ಇದುವೇ ನಮ್ಮೆಲ್ಲರ ಆಶಯ
"ನಲವತ್ತು ದಿನಗಳಲ್ಲಿ ಗಳಿಸಿದ ಆರೋಗ್ಯವನ್ನು ಜೀವನಪೂರ್ತಿ ಉಳಿಸಿಕೊಳ್ಳೋಣ. ಇದುವೇ ಮಹಾತ್ಮ ಗಾಂಧೀಜಿಯ ಕನಸು. ಇದುವೇ ನಮ್ಮೆಲ್ಲರ ಆಶಯ. ನಾವೆಲ್ಲರೂ ಒಂದು ಸಮೃದ್ದ ಕುಟುಂಬದ ನಿರ್ಮಾಪಕರುಗಳು" - ಇದು ಹೆಗ್ಗಡೆಯವರು ಸಾಮಾಜಿಕ ತಾಣದಲ್ಲಿ ಹಾಕಿರುವ ಸಂದೇಶ.

ಮದ್ಯದ ಮಳಿಗೆಗಳು ಆರಂಭಗೊಳ್ಳುತ್ತಿದೆ
ನಲವತ್ತು ದಿನಗಳ ನಂತರ ಮದ್ಯದ ಮಳಿಗೆಗಳು ಆರಂಭಗೊಳ್ಳುತ್ತಿರುವುದರಿಂದ, ಮದ್ಯಪ್ರಿಯರು ಅಂಗಡಿಗೆ ದಾಂಗುಡಿ ಇಡುತ್ತಾರೋ ಅಥವಾ ಇಷ್ಟು ದಿನ ಹೇಗೂ ಮದ್ಯ ಬಿಟ್ಟಿದ್ದಾಗಿದೆ, ಅದನ್ನೇ ಮುಂದುವರಿಸಿಕೊಂಡು ಹೋಗುವ ಮನಸ್ಸು ಮಾಡಲಿದ್ದಾರೋ ಎನ್ನುವುದು ಗೊತ್ತಾಗಲಿದೆ.












Click it and Unblock the Notifications