ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಸಂಸದರ ಮಹತ್ವದ ಸಭೆ ಅಂತ್ಯ!
ಬೆಂಗಳೂರು, ನ. 27: ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕರೆದಿದ್ದ ಸಂಸದರ ಸಭೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯ ಒಟ್ಟು 25 ಸಂಸದರಲ್ಲಿ ಕೇವಲ 10ಕ್ಕೂ ಕಡಿಮೆ ಸಂಸದರು ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ಸಭೆಗೆ ಹಾಜರಾಗಿದ್ದರು.
ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಅಣ್ಣಾ ಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ, ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಮುನಿಸ್ವಾಮಿ, ಕೆ.ಸಿ. ರಾಮಮೂರ್ತಿ, ರಾಜೀವ್ ಚಂದ್ರಶೇಖರ್ ಸೇರಿದಂತೆ ಬಹುತೇಕ ಸಂಸದರು ಯಡಿಯೂರಪ್ಪ ಅವರು ಕರೆದಿದ್ದ ಗೈರು ಹಾಜರಾಗಿದ್ದರು.
ಶುಕ್ರವಾರ ನಡೆದ ರಾಜ್ಯ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು!
ಸಭೆಯಲ್ಲಿ ಕೇಂದ್ರದಿಂದ ಬರಬೇಕಾದ ಅನುದಾನದ ಕುರಿತೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ನೀವು ಸಂಸದರು ರಾಜ್ಯದ ಪರವಾಗಿ ಉತ್ತಮ ಕೆಲಸ ಮಾಡಬೇಕು. ನನ್ನಿಂದ, ರಾಜ್ಯ ಸರ್ಕಾರದಿಂದ ಏನೇನು ಸಹಾಯ ಬೇಕು ಎಂಬುದನ್ನು ಕೇಳಿ, ನಾನು ಮಾಡಿ ಕೊಡುತ್ತೇನೆ. ಆದರೆ ಕೇಂದ್ರದಲ್ಲಿ ರಾಜ್ಯದ ಕೆಲಸ ಆಗಬೇಕಿರುವುದರ ಬಗ್ಗೆ ನೀವುಗಳು ಹೆಚ್ಚು ಆಸಕ್ತಿ ವಹಿಸಿ ಒಟ್ಟಾಗಿ ತೆರಳಿ ಮಾಡಿಸಬೇಕು. ಭತ್ತ ಕಟಾವಿಗೆ ಬಂದಿದ್ದು, ಕೇಂದ್ರ ಸರ್ಕಾರದ ಜೊತೆ ಮಾತಾಡಿ ರಾಜ್ಯಕ್ಕೆ ಹೆಚ್ಚಿನ ಖರೀದಿ ಕೋಟಾ ಸಿಗುವಂತೆ ಮಾಡಬೇಕು. ಇನ್ನು ನಾವು ಮೂರ್ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸೋಣ ಎಂದು ಸಂಸದರ ಸಭೆಯಲ್ಲಿ ಹೇಳಿರುವ ಸಿಎಂ ಯಡಿಯೂರಪ್ಪ ಅವರು ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಅವರಿಗೆ ಎಲ್ಲ ಸಹಕಾರದ ಭರವಸೆ ಕೊಟ್ಟಿರುವ ಸಂಸದರು, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ಕ್ರಮ ವಹಿಸಿ. ವಸತಿ ಇಲಾಖೆಗೆ ಹೆಚ್ಚಿನ ಅನುದಾನ ಕೊಟ್ಟು ನಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಮನೆಗಳು ಸಿಗುವಂತೆ ಮಾಡಿ. ರಾಜ್ಯದ ಕೆಲಸ ದೆಹಲಿಯಲ್ಲಿ ಏನು ಆಗಬೇಕೋ ಅವುಗಳನ್ನು ಕರಡು ಮಾಡಿ ನಮ್ಮ ಕೈಯಲ್ಲಿ ಕೊಡಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಹೋಗಿ ಅದನ್ನು ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಂಸದರು ಯಡಿಯೂರಪ್ಪ ಅವರಿಗೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಹೈಕಮಾಂಡ್ ತಮ್ಮನ್ನು ಕಡೆಗಣಿಸುತ್ತಿರುವುದರಿಂದ ಸಂಸದ ಬೆಂಬಲ ಪಟೆಯುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಬಸಂಸದರ ಸಬೆ ಕರೆದಿದ್ದರು ಎನ್ನಲಾಗಿದೆ. ಆದರೆ ಸಂಪುಟ ವಿಸ್ತರಣೆಗೆ ಸ್ವತಃ ಅಮಿತ್ ಶಾ ಅವರು ಒಪ್ಪಿಗೆ ಸೂಚಿಸಿದ್ದರಿಂದ ಸಂಸದರ ಸಭೆ ಮಹತ್ವ ಕಳೆದುಕೊಂಡಿತ್ತು. ಅನೌಪಚಾರಿಕವಾಗಿ ನಡೆದ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಮಾತ್ರ ಪ್ರಸ್ತಾಪ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.