'ಜಮೀರ್ ಅವರನ್ನು ಸದ್ಯಕ್ಕೆ ಪಕ್ಷದಿಂದ ಉಚ್ಛಾಟನೆ ಮಾಡುವುದಿಲ್ಲ'
ಬೆಂಗಳೂರು, ಫೆಬ್ರವರಿ 02 : ಜೆಡಿಎಸ್ ಪಕ್ಷದಲ್ಲಿನ ನಾಯಕರ ನಡುವಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿದೆ. ಎಚ್.ಡಿ.ದೇವೇಗೌಡ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಅಸಮಾಧಾನಗೊಂಡಿದ್ದು, 'ಜಮೀರ್ ತಮ್ಮ ವಿರುದ್ಧ ಮಾಡುವ ಆರೋಪಗಳಿಗೆ ಹೆದರುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, 'ಭಿನ್ನಮತದ ಚಟುವಟಿಕೆ ನಡೆಸುವ ಜಮೀರ್ ಅಹಮದ್ ಖಾನ್ ಹಾಗೂ ಅವರ ಜೊತೆಗಿರುವ ಶಾಸಕರು ಪಕ್ಷ ಬಿಟ್ಟು ಹೋಗಲಿ' ಎಂದು ಖಡಕ್ ಎಚ್ಚರಿಕೆ ನೀಡಿದರು. [ಸಿಎಂ ಸಿದ್ದು ಭೇಟಿ ಮಾಡಿದ ಜಮೀರ್ ಹೇಳಿದ್ದೇನು?]
'ನನ್ನ ವಿರುದ್ಧ ಪತ್ರಿಕೆಗಳಲ್ಲಿ ಜಮೀರ್ ಉರ್ದುವಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಪಕ್ಷಕ್ಕಾಗಿ ದೇವೇಗೌಡರು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ. ಜಮೀರ್ ಅಹಮದ್ ಯಾವ ಪಕ್ಷದಲ್ಲಿದ್ದಾರೆ?' ಎಂದು ಗೌಡರು ಪ್ರಶ್ನಿಸಿದರು. [ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ]
'ಜಮೀರ್ ಅಹಮದ್ ಮತ್ತು ಅವರನ್ನು ಬೆಂಬಲಿಸುವ ಅವರ ಸ್ನೇಹಿತರು ಪಕ್ಷ ಬಿಟ್ಟು ಹೋಗಲಿ. ಅವರು ಹೋದ ಮೇಲೂ ಪಕ್ಷ ಸದೃಢವಾಗಿರುತ್ತದೆ ಎಂಬುದು ಅವರಿಗೆ ಗೊತ್ತಾಗಲಿದೆ. ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ನಮ್ಮ ಪಕ್ಷದ ಮುಸ್ಲಿಂ ನಾಯಕರು ಮತ್ತು ಕಾಲವೇ ಉತ್ತರ ನೀಡಲಿದೆ' ಎಂದರು. ದೇವೇಗೌಡರು ಹೇಳಿದ್ದೇನು ಚಿತ್ರಗಳಲ್ಲಿ ನೋಡಿ...
ಜಮೀರ್ ವಿರುದ್ಧ ಗುಡುಗಿದ ಗೌಡರು
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಗುಡುಗಿದ್ದಾರೆ. 'ಜಮೀರ್ ಯಾವ ಪಕ್ಷದಲ್ಲಿದ್ದಾರೆ?' ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ಪಕ್ಷ ಬಿಟ್ಟು ಹೋದರೂ ಪಕ್ಷ ಉಳಿಯುತ್ತದೆ
'ಜಮೀರ್ ಅಹಮದ್ ಖಾನ್ ಮತ್ತು ಅವರ ಬೆಂಬಲಿಗರು ಪಕ್ಷವನ್ನು ಬಿಟ್ಟು ಹೋದರು ಜೆಡಿಎಸ್ ಪಕ್ಷ ಉಳಿಯುತ್ತದೆ. ಭಿನ್ನಮತದ ಚಟುವಟಿಕೆ ನಡೆಸುವ ಜಮೀರ್ ಹಾಗೂ ಅವರ ಜೊತೆಗಿರುವ ಶಾಸಕರು ಪಕ್ಷ ಬಿಟ್ಟು ಹೋಗಲಿ' ಎಂದು ಖಡಕ್ ಎಚ್ಚರಿಕೆ ನೀಡಿದರು.
ನನ್ನ ವಿರುದ್ಧ ಜಾಹೀರಾತು ಕೊಟ್ಟಿದ್ದಾರೆ
'ಜಮೀರ್ ಅಹಮದ್ ಖಾನ್ ಅವರು ನನ್ನ ವಿರುದ್ಧ ಪತ್ರಿಕೆಗಳಲ್ಲಿ ಉರ್ದುವಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಪಕ್ಷಕ್ಕಾಗಿ ದೇವೇಗೌಡರು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ. ಜಮೀರ್ ಅಹಮದ್ ಯಾವ ಪಕ್ಷದಲ್ಲಿದ್ದಾರೆ?' ಎಂದು ಗೌಡರು ಪ್ರಶ್ನಿಸಿದರು.
'ಸದ್ಯಕ್ಕೆ ಪಕ್ಷದಿಂದ ಉಚ್ಛಾಟಿಸುವುದಿಲ್ಲ'
'ಜಮೀರ್ ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ. ಪಕ್ಷದ ಸಭೆಗಳಿಗೆ ಬರಲು ಅವರಿಗೆ ನೈತಿಕವಾಗಿ ಕಷ್ಟವಾಗುತ್ತಿದೆ. ಸದ್ಯಕ್ಕೆ, ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ದೇವೇಗೌಡರು ಹೇಳಿದರು.
ಷರೀಫ್ ಅವರಿಂದ ಪಾಠ ಕಲಿಯಬೇಕಿಲ್ಲ
'ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಅವರಿಂದ ಜಾತ್ಯತೀತತೆಯ ಪಾಠ ಕಲಿಯಬೇಕಿಲ್ಲ' ಎಂದು ಹೇಳಿದ ದೇವೇಗೌಡರು, 'ಹೆಬ್ಬಾಳ ಕ್ಷೇತ್ರದ ಉಪಚುನಾವಣೆಗೆ ನಾವು ಅಭ್ಯರ್ಥಿಯನ್ನು ಘೋಷಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಬದಲಿಸಲಾಗಿದೆ. ತಮ್ಮ ಮೇಲೆ ಅವರು ಆರೋಪ ಮಾಡುವುದು ಸರಿಯಲ್ಲ' ಎಂದು ಹೇಳಿದರು.
'ಆರೋಪಕ್ಕೆ ಉತ್ತರ ಕೊಡಲು ಶಕ್ತಿ ಇದೆ'
'ಜಾಫರ್ ಷರೀಫ್ ಅವರು 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಬಳಿ ಬಂದು ಎ ಫಾರಂ, ಬಿ ಫಾರಂ ತೆಗೆದುಕೊಂಡು ಹೋಗಿದ್ದರು. ಮೆಕ್ಕಾ ಯಾತ್ರೆ ನಂತರ ನಿಲುವು ಬದಲಿಸಿದರು. ಅವರು ಮಾಡಿರುವ ಆರೋಪಕ್ಕೆ ಉತ್ತರ ಕೊಡಲು ಸಾಕಷ್ಟು ಶಕ್ತಿಯಿದೆ' ಎಂದು ದೇವೇಗೌಡರು ಹೇಳಿದರು.
ಮನಸ್ಸಿಗೆ ನೋವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ
'ಜಾಫರ್ ಷರೀಫ್ ಮತ್ತು ಜಮೀರ್ ಅಹಮದ್ ಅವರ ಅಪಾದನೆಗಳಿಂದ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಈ ಪ್ರತಿಕ್ರಿಯೆ ನೀಡಬೇಕಾಗಿ ಬಂದಿದೆ ಎಂದು ದೇವೇಗೌಡರು ಹೇಳಿದರು.