ಮಗನ ಹಾದಿ ಸುಗಮ ಮಾಡಲು ದೇವೇಗೌಡರ ಮಾಸ್ಟರ್ ಪ್ಲಾನ್
Recommended Video
ಬೆಂಗಳೂರು, ಆಗಸ್ಟ್ 04: ಕುಮಾರಸ್ವಾಮಿ ಖುರ್ಚಿಗೆ ಯಾರಿಂದ ಕಂಟಕ ಹೆಚ್ಚು ಎಂದು ಈ ಸಂದರ್ಭದಲ್ಲಿ ಕೇಳಿದರೆ ಉತ್ತರ ಕಷ್ಟವೇನಲ್ಲ, ಅದುವೇ ಸಿದ್ದರಾಮಯ್ಯ!
ಸರ್ಕಾರಕ್ಕೆ ಸತತ ಪತ್ರಗಳನ್ನು ಬರೆಯುತ್ತಾ, ಕಾಂಗ್ರೆಸ್ ಸಚಿವರಿಗೆ ಹತ್ತಿರದಲ್ಲಿರುತ್ತಾ, ಜೆಡಿಎಸ್ಗೆ ಮೂಗುದಾರ ಹಾಕುತ್ತಿರುವ ನಾಯಕ ಸಿದ್ದರಾಮಯ್ಯ. ಇಂತಿಪ್ಪ ಸಿದ್ದರಾಮಯ್ಯ ಕುಮಾರಸ್ವಾಮಿ ಖುರ್ಚಿಗೆ ಸಂಚಕಾರ ತರಹುದೆಂಬ ಅಳುಕು ದೇವೇಗೌಡರಲ್ಲೂ ಇದೆ. ಇದಕ್ಕೆಂದೇ ಅವರೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಲೋಕಸಭೆ ಚುನಾವಣೆ 2019: ಪ್ರತಾಪ್ ಸಿಂಹ ಎದುರು ಸಿದ್ದರಾಮಯ್ಯ ಸ್ಪರ್ಧೆ?
ಹೌದು, ಸತತ ಪತ್ರಗಳನ್ನು ಬರೆಯುತ್ತಾ, ಔತಣಕೂಟದ ನೆಪದಲ್ಲಿ ಕಾಂಗ್ರೆಸ್ ಸಚಿವರ ಬಳಿ ಹತ್ತಿರದ ಸಂಪರ್ಕ ಹೊಂದಿ ಅವರ ನಾಯಕರಾಗಿರುವ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಬಗಲ ಮುಳ್ಳು ಎಂಬುದು ದೇವೇಗೌಡರಿಗೆ ಅರಿವಿದೆ. ಹಾಗಾಗಿ ಸರ್ಕಾರದ ಮೇಲೆ ಅವರ ನೆರಳು ಬೀಳದಂತೆ ಮಾಡುವ ಪ್ಲಾನ್ ದೇವೇಗೌಡರು ಹೆಣೆದಿದ್ದಾರೆ.
ಸುಗಮ ಸರ್ಕಾರಕ್ಕೆ ಸಿದ್ದರಾಮಯ್ಯ ರಾಜ್ಯದಲ್ಲಿ ಇರಬಾರದು
ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು, ಈಗಾಗಲೇ ಬಜೆಟ್, ಅಧಿಕಾರಿಗಳ ವರ್ಗಾವಣೆ ಸೇರಿ ಹಲವು ಹಂತಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು. ಹಾಗಾಗಿ ಅವರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸಿದರೆ ಸರ್ಕಾರ ಸುಗಮವಾಗಿ ತಮ್ಮಿಷ್ಟದಂತೆ ನಡೆಸಬಹುದು ಎಂಬುದು ದೇವೇಗೌಡರ ಲೆಕ್ಕಾಚಾರ.
ಲೋಕಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಜೆಡಿಎಸ್ಗೆ 6 ಸೀಟು!
ಕಾಂಗ್ರೆಸ್ಗೆ ಗಟ್ಟಿ ಧನಿ ಇಲ್ಲದಾಗುತ್ತದೆ
ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದರೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ಗೆ ಗಟ್ಟಿ ಧನಿ ಇಲ್ಲದಾಗುತ್ತದೆ. ಆಗ ಸರ್ಕಾರದ ಕಿವಿ ಹಿಂಡಲು, ಮೈತ್ರಿ ಧರ್ಮದ ಬೋಧನೆ ಮಾಡಲು ನಾಯಕರಿಲ್ಲದಾಗುತ್ತಾರೆ ಎಂಬುದು ದೊಡ್ಡಗೌಡರ ಚತುರತೆ. ಜೆಡಿಎಸ್ ವಿರುದ್ಧ ಮಾತನಾಡಲು ರಾಜ್ಯ ಕಾಂಗ್ರೆಸ್ನಲ್ಲಿ ನಾಯಕರಿಲ್ಲದಾಗುತ್ತದೆ.
ಪರಮೇಶ್ವರ್, ಡಿಕೆಶಿ ಬಳಕೆ
ಹಾಗಾಗಿಯೇ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ದೇವೇಗೌಡರು ಪ್ಲಾನ್ ಮಾಡಿದ್ದು, ಇದಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಳಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ.
ಹೈಕಮಾಂಡ್ ಮೇಲೆ ಒತ್ತಡ ಹೇರಿರುವ ನಾಯಕರು
ಈಗಾಗಲೇ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಸಿದ್ದರಾಮಯ್ಯ ಅವರ ವಿರುದ್ಧ ಗರಂ ಆಗಿದ್ದು ಇದೇ ಅವಕಾಶವನ್ನು ಬಳಸಿಕೊಂಡು ಇಬ್ಬರೂ ನಾಯಕರು ಹೈಕಮಾಂಡ್ ಅನ್ನು ಫುಸಲಾಯಿಸಿ ಸಿದ್ದರಾಮಯ್ಯ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರಿಸುತ್ತಿದ್ದಾರೆ.
ಸಿದ್ದರಾಮಯ್ಯರನ್ನು ಗೆಲ್ಲಿಸುವ ಜವಾಬ್ದಾರಿ ದೇವೇಗೌಡರದ್ದು
ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ನಿಂತರೂ ಸರಿ ಅವರನ್ನು ಗೆಲ್ಲಿಸಿ ಕಳಿಸೋಣ ಎಂದಿದ್ದಾರಂತೆ ದೇವೇಗೌಡರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಕುಮಾರಸ್ವಾಮಿ ಹಾದಿಗೆ ತೊಡಕಾಗಿರುವ ಸಿದ್ದರಾಮಯ್ಯ ಅವರು ದೆಹಲಿ ವಿಮಾನ ಹತ್ತಬೇಕಷ್ಟೆ.